Asianet Suvarna News Asianet Suvarna News

ಸಂಪುಟ ವಿಸ್ತರಣೆ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ: ಅಡಕತ್ತರಿಯಲ್ಲಿ ಕಾಂಗ್ರೆಸ್‌!

ಸಂಪುಟ ವಿಸ್ತರಣೆ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ. ಇತ್ತ - ಕಲಾಪಕ್ಕೆ ಮುನ್ನ ಆದರೆ ವಂಚಿತರಿಗೆ ಸಿಟ್ಟು, ವಿಳಂಬ ಆದರೆ ಅತೃಪ್ತರಿಗೆ ಕೋಪ. ಹೀಗಾಗಿ, ಡಿ.5ರ ಸಮನ್ವಯ ಸಮಿತಿ, ಡಿ.8ರ ಶಾಸಕಾಂಗ ಸಭೆಗೆ ಭಾರೀ ಮಹತ್ವ.

Congress in biggest confusion whether to expand the cabinet or not
Author
Bangalore, First Published Dec 1, 2018, 7:40 AM IST

ಬೆಂಗ​ಳೂರು[ಡಿ.01]: ಸಚಿವ ಸಂಪುಟ ವಿಸ್ತ​ರಣೆ ಕುರಿತು ಮೊದಲೇ ಗೊಂದ​ಲ​ದಲ್ಲಿದ್ದ ಕಾಂಗ್ರೆಸ್‌ ನಾಯ​ಕತ್ವವನ್ನು ಬಿಜೆ​ಪಿಯ ಸೆಳೆ​ತಕ್ಕೆ ಸಿಲು​ಕಿ​ರುವ ಪಕ್ಷದ ಶಾಸ​ಕರ ಅತೃಪ್ತಿ ಸ್ಫೋಟದ ಸಾಧ್ಯ​ತೆ ಅಕ್ಷ​ರಶಃ ಇಕ್ಕ​ಟ್ಟಿಗೆ ಸಿಲು​ಕಿ​ಸಿದೆ. ಹೀಗಾಗಿ ಸಂಪುಟ ವಿಸ್ತ​ರಣೆ ಎಂಬ ಎರಡು ಅಲ​ಗಿನ ಕತ್ತಿ​ಯನ್ನು ಯಾವಾಗ ಪ್ರಯೋಗ ಮಾಡ​ಬೇಕು ಎಂಬ ಗೊಂದಲ ಕಾಡ​ತೊ​ಡ​ಗಿ​ದೆ.

"

ಬೆಳ​ಗಾವಿ ಅಧಿ​ವೇ​ಶ​ನಕ್ಕೂ ಮುನ್ನ ಸಂಪುಟ ವಿಸ್ತ​ರಣೆ ಮಾಡ​ಬೇಕು ಎಂಬ ಒತ್ತಡ ತೀವ್ರ​ವಿದೆ. ಈ ಒತ್ತ​ಡಕ್ಕೆ ತಲೆ​ಬಾ​ಗಿ​ದರೆ ಅಧಿ​ವೇಶ​ನದ ವೇಳೆ ಸಚಿವ ಸ್ಥಾನ ವಂಚಿ​ತರ ಆಕ್ರೋಶ ಹಾಗೂ ಭಿನ್ನ​ಮ​ತೀಯ ಚಟು​ವ​ಟಿ​ಕೆ​ಯ​ನ್ನು ಎದು​ರಿ​ಸ​ಬೇ​ಕಾ​ಗು​ತ್ತದೆ. ಅಲ್ಲದೆ, ಶಾಸ​ಕರು ಲಭ್ಯ​ರಾ​ಗುವ ಕಾರಣ ಅವರ ಆಪ​ರೇ​ಷನ್‌ ನಡೆ​ಸಲು ಬಿಜೆ​ಪಿಗೆ ವೇದಿ​ಕೆ​ಯ​ನ್ನು ಕಲ್ಪಿಸಿಕೊಟ್ಟಂತಾ​ಗು​ತ್ತದೆ ಎಂಬ ಭೀತಿ​ಯಿದೆ. ಇನ್ನು ಸಂಪುಟ ವಿಸ್ತ​ರ​ಣೆ​ಯನ್ನು ಮುಂದೂ​ಡಿ​ದರೆ ಅತೃ​ಪ್ತ ಶಾಸ​ಕರ ಸಂಖ್ಯೆ ಹೆಚ್ಚ​ಳ​ವಾಗಿ ಬಿಜೆಪಿ ಬಯ​ಸು​ತ್ತಿ​ರುವ ಸಂಖ್ಯೆ​ಯನ್ನು ಮುಟ್ಟುವ ಆತಂಕವೂ ನಾಯ​ಕ​ರಿಗೆ ಇದೆ.

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್‌ ಅತೃಪ್ತಿ ಸ್ಫೋಟ?: ಮುಂಬೈಗೆ ಹೊರಟ 10 ಶಾಸಕರು!

ಈ ಹಿನ್ನೆ​ಲೆ​ಯಲ್ಲಿ ಡಿ.5ರಂದು ಸಿದ್ದ​ರಾ​ಮಯ್ಯ ಅವರ ಅಧ್ಯ​ಕ್ಷ​ತೆ​ಯಲ್ಲಿ ನಡೆ​ಯ​ಲಿ​ರುವ ಸಮ​ನ್ವಯ ಸಮಿತಿ ಸಭೆ ಅತ್ಯಂತ ಪ್ರಮು​ಖ​ವಾಗಿ ಮಾರ್ಪ​ಟ್ಟಿದೆ. ಈ ಸಭೆ​ಯಲ್ಲಿ ಸಂಪುಟ ವಿಸ್ತ​ರಣೆ ಕುರಿತು ಮಹ​ತ್ವದ ನಿರ್ಧಾ​ರ​ವಾ​ಗುವ ಸಾಧ್ಯ​ತೆ​ಯಿದೆ. ಇನ್ನು ಕಾಂಗ್ರೆಸ್‌ ಶಾಸ​ಕರು ಸಿಡಿ​ದೆ​ದ್ದರೆ ಅದು ಸರ್ಕಾ​ರದ ಮೇಲೆ ಪರಿ​ಣಾಮ ಬೀರುವ ಕಾರಣ ಜೆಡಿ​ಎಸ್‌ ನಾಯ​ಕರು ಕೂಡ ಕಾಂಗ್ರೆಸ್‌ ಶಾಸ​ಕರ ಅಸ​ಮಾ​ಧಾನ ಶಮನಗೊಳಿ​ಸುವ ಅಗ​ತ್ಯ​ವಿ​ದೆ. ಹೀಗಾ​ಗಿಯೇ ಡಿ.8ರಂದು ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ಸಭೆ​ಗೆ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಅವ​ರನ್ನು ಆಹ್ವಾ​ನಿ​ಸ​ಲಾ​ಗಿದೆ. ಈ ಎರಡು ಸಭೆ​ಗ​ಳಲ್ಲಿ ಕಾಂಗ್ರೆಸ್‌ ಶಾಸ​ಕ​ರನ್ನು ಸಮಾ​ಧಾ​ನ​ಗೊ​ಳಿ​ಸುವ ಪ್ರಯತ್ನ ನಡೆ​ಯ​ಲಿದೆ.

ಮೂಲ​ಗಳ ಪ್ರಕಾರ ಕಾಂಗ್ರೆಸ್‌ ನಾಯ​ಕತ್ವ ಈ ಬಾರಿ ನಿಗಮ ಮಂಡಳಿ ಹಾಗೂ ವಿಧಾ​ನ​ಪ​ರಿ​ಷತ್‌ ಸಭಾ​ಪತಿ, ಉಪ ಸಭಾ​ಪತಿ, ಮುಖ್ಯ ಸಚೇ​ತಕದಂತಹ ಹುದ್ದೆ​ಗಳ ನೇಮ​ಕದ ಮೂಲಕ ಕಾಂಗ್ರೆಸ್‌ ಶಾಸ​ಕ​ರಿಗೆ ಒಂದಷ್ಟುಅಧಿ​ಕಾ​ರ ​ಕೊಟ್ಟು ಸಂಪುಟ ವಿಸ್ತ​ರ​ಣೆ​ಯನ್ನು ಬೆಳ​ಗಾವಿ ಅಧಿ​ವೇ​ಶ​ನದ ನಂತರ ಇಟ್ಟು​ಕೊ​ಳ್ಳುವ ಉದ್ದೇಶ ಹೊಂದಿತ್ತು. ಆದರೆ, ಕಾಂಗ್ರೆಸ್‌ ಶಾಸ​ಕರ ಒತ್ತಡ ಹಾಗೂ ಅತೃಪ್ತಿ ಯಾವ ಮಟ್ಟಕ್ಕೆ ಇದೆ ಎಂದರೆ ಅವರ ಬೇಡಿ​ಕೆ​ಗ​ಳನ್ನು ತಕ್ಕ​ಮ​ಟ್ಟಿಗೆ ಈಡೇ​ರಿ​ಸ​ದಿ​ದ್ದರೆ ಸರ್ಕಾ​ರಕ್ಕೆ ಧಕ್ಕೆ ಬರ​ಬ​ಹುದು ಎಂಬ ಭೀತಿ ಕಾಂಗ್ರೆಸ್‌ ನಾಯ​ಕ​ತ್ವಕ್ಕೆ ಇದೆ.

ಇದನ್ನೂ ಓದಿ: ಭುಗಿಲೆದ್ದ ಅತೃಪ್ತಿ: ರಮೇಶ್ ಜಾರಕಿಹೊಳಿ ಮನೆಗೆ ಬಿಜೆಪಿ ಶಾಸಕರ ದಂಡು

ಇನ್ನು ಸಂಪುಟ ವಿಸ್ತ​ರಣೆ ವಿಚಾ​ರ​ದಲ್ಲೂ ಕಾಂಗ್ರೆಸ್‌ ನಾಯ​ಕ​ತ್ವ​ದಲ್ಲೇ ಎರಡು ರೀತಿಯ ಅಭಿ​ಪ್ರಾ​ಯ​ವಿದೆ. ಶಾಸ​ಕರ ಸತತ ಒತ್ತ​ಡಕ್ಕೆ ಸಿಲು​ಕಿ​ರುವ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರು, ಸಂಪುಟ ವಿಸ್ತ​ರಣೆ ಮಾಡ​ಬೇಕು ಎಂಬುದರ ಪರ​ವಿ​ದ್ದಾರೆ. ಶಾಸ​ಕರ ಅತೃಪ್ತಿ ಬಗ್ಗೆ ಈಗಾ​ಗಲೇ ಹೈಕಮಾಂಡ್‌ ಗಮ​ನಕ್ಕೆ ತಂದಿದ್ದಾರೆ. ಅಲ್ಲದೆ, ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಸಹ ಇತ್ತೀ​ಚೆಗೆ ದೆಹ​ಲಿಗೆ ತೆರಳಿ ರಾಜ್ಯ ಉಸ್ತು​ವಾರಿ ವೇಣು​ಗೋ​ಪಾಲ್‌ ಹಾಗೂ ಹೈಕ​ಮಾಂಡ್‌ನ ಪ್ರಮುಖ ನಾಯ​ಕ​ರನ್ನು ಭೇಟಿ ಮಾಡಿ ಸಂಪುಟ ವಿಸ್ತ​ರ​ಣೆಯ ಅನಿ​ವಾ​ರ್ಯ​ತೆ​ಯನ್ನು ಮನ​ದಟ್ಟು ಮಾಡಿ​ಕೊ​ಟ್ಟಿ​ದ್ದಾರೆ ಎನ್ನ​ಲಾ​ಗಿ​ದೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಶಾಕ್ ಕೊಟ್ಟ ಕಾಂಗ್ರೆಸ್ ಶಾಸಕನ ರಾಜೀನಾಮೆ ಮಾತು

ಆದರೆ, ಜೆಡಿ​ಎಸ್‌ ಪಾಳ​ಯ​ದೊಂದಿಗೆ ಉತ್ತಮ ಸಂಬಂಧ ಹೊಂದಿ​ರುವ ಕಾಂಗ್ರೆ​ಸ್‌ನ ಮತ್ತೊಂದು ಗುಂಪು ವಿಸ್ತ​ರ​ಣೆಯ ಪರ​ವಿಲ್ಲ. ಇದಕ್ಕೆ ಮುಖ್ಯ ಕಾರಣ ವಿಸ್ತ​ರಣೆ ನಡೆ​ದರೆ ಸಚಿವ ಸ್ಥಾನ ದೊರೆ​ಯದೇ ಅತೃ​ಪ್ತ​ರಾ​ಗುವ ಶಾಸ​ಕರ ದೊಡ್ಡ ಗುಂಪನ್ನು ಓಲೈ​ಸು​ವುದು ಬಿಜೆ​ಪಿಗೆ ಅತ್ಯಂತ ಸುಲ​ಭ​ವಾ​ಗು​ತ್ತದೆ. ತನ್ಮೂ​ಲಕ ಈ ಬೆಳ​ವ​ಣಿಗೆ ಸಮ್ಮಿಶ್ರ ಸರ್ಕಾ​ರದ ಅಸ್ತಿ​ತ್ವ​ವನ್ನೇ ಅಲು​ಗಾ​ಡಿ​ಸ​ಲಿದೆ ಎಂಬ ಭೀತಿ.

ಅಲ್ಲದೆ, ಈಗ ಸಂಪುಟ ವಿಸ್ತ​ರ​ಣೆಗೆ ಸಮ​ಯದ ಕೊರ​ತೆಯೂ ಇದೆ. ಬೆಳ​ಗಾವಿ ಅಧಿ​ವೇ​ಶನ ಡಿ.10ರಿಂದ ಆರಂಭ​ವಾ​ಗ​ಲಿದೆ. ಸಮ​ನ್ವಯ ಸಮಿತಿ ಸಭೆ ಡಿ.5ಕ್ಕೆ ಹಾಗೂ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಅವರೂ ಆಹ್ವಾ​ನಿ​ತ​ರಾ​ಗಿ​ರುವ ಶಾಸ​ಕಾಂಗ ಪಕ್ಷದ ಸಭೆ ಡಿ.8ರಂದು ನಡೆ​ಯ​ಲಿದೆ. ಈ ಎರಡು ಸಭೆ​ಗಳ ನಂತ​ರವೇ ಒಂದು ಸ್ಪಷ್ಟನಿರ್ಧಾರ ಮೂಡಲು ಸಾಧ್ಯ. ಒಂದು ವೇಳೆ ಸಂಪುಟ ವಿಸ್ತ​ರಣೆ ಮಾಡ​ಬೇಕು ಎಂದೇ ನಿರ್ಧಾ​ರ​ವಾ​ದರೆ, ಅದಕ್ಕೆ ದೊರೆ​ಯುವುದು ಎರಡು ದಿನ ಮಾತ್ರ. ಈ ಎರಡು ದಿನ​ದಲ್ಲಿ ಹೈಕಮಾಂಡ್‌ ಜತೆಯೂ ಚರ್ಚೆ ಮಾಡ​ಬೇ​ಕಾ​ಗು​ತ್ತದೆ.

ಇದನ್ನೂ ಓದಿ: ‘ಸಚಿವ ಸಂಪುಟ ವಿಸ್ತರಣೆ ಆದ ದಿನವೇ ಸರ್ಕಾರ ಪತನ’

ಸಿದ್ದ​ರಾ​ಮಯ್ಯ ಅವರ ಆಪ್ತ ಮೂಲಗಳ ಪ್ರಕಾರ ರಾಜ್ಯ ನಾಯ​ಕ​ತ್ವ​ದಲ್ಲೂ ಒಮ್ಮತ ಮೂಡಿ ಹೈಕ​ಮಾಂಡ್‌ ಕೂಡ ಸಹ​ಮತ ನೀಡಿ​ದರೆ ಡಿ.9ರಂದು ತಪ್ಪಿ​ದರೆ ಡಿ.10ರಂದೇ ವಿಸ್ತ​ರಣೆ ಮಾಡ​ಬ​ಹುದು. ಏಕೆಂದರೆ, ಡಿ.10ರಂದು ಬೆಳ​ಗಾವಿ ಅಧಿ​ವೇ​ಶನ ಆರಂಭ​ವಾ​ದರೂ ಅಂದು ಸಂತಾಪ ಸೂಚ​ನೆಗೆ ಮೀಸ​ಲಾ​ಗ​ಲಿದ್ದು, ಬೇಗ ಮುಗಿ​ಯ​ಲಿದೆ. ಮಧ್ಯಾ​ಹ್ನದ ನಂತರ ಪ್ರಮುಖ ನಾಯ​ಕರು ಬೆಂಗ​ಳೂ​ರಿಗೆ ಹೆಲಿ​ಕಾ​ಪ್ಟರ್‌ನಲ್ಲಿ ಬಂದು ಪ್ರಮಾಣ ವಚನ ಕೈಗೊ​ಳ್ಳಲು ಸಾಧ್ಯ​ವಿದೆ ಎಂದೇ ಹೇಳು​ತ್ತ​ವೆ.

Follow Us:
Download App:
  • android
  • ios