ಸಂಪುಟ ವಿಸ್ತರಣೆ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ: ಅಡಕತ್ತರಿಯಲ್ಲಿ ಕಾಂಗ್ರೆಸ್!
ಸಂಪುಟ ವಿಸ್ತರಣೆ ಮಾಡಿದರೂ ಕಷ್ಟ, ಮಾಡದಿದ್ದರೂ ಕಷ್ಟ. ಇತ್ತ - ಕಲಾಪಕ್ಕೆ ಮುನ್ನ ಆದರೆ ವಂಚಿತರಿಗೆ ಸಿಟ್ಟು, ವಿಳಂಬ ಆದರೆ ಅತೃಪ್ತರಿಗೆ ಕೋಪ. ಹೀಗಾಗಿ, ಡಿ.5ರ ಸಮನ್ವಯ ಸಮಿತಿ, ಡಿ.8ರ ಶಾಸಕಾಂಗ ಸಭೆಗೆ ಭಾರೀ ಮಹತ್ವ.
ಬೆಂಗಳೂರು[ಡಿ.01]: ಸಚಿವ ಸಂಪುಟ ವಿಸ್ತರಣೆ ಕುರಿತು ಮೊದಲೇ ಗೊಂದಲದಲ್ಲಿದ್ದ ಕಾಂಗ್ರೆಸ್ ನಾಯಕತ್ವವನ್ನು ಬಿಜೆಪಿಯ ಸೆಳೆತಕ್ಕೆ ಸಿಲುಕಿರುವ ಪಕ್ಷದ ಶಾಸಕರ ಅತೃಪ್ತಿ ಸ್ಫೋಟದ ಸಾಧ್ಯತೆ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಸಂಪುಟ ವಿಸ್ತರಣೆ ಎಂಬ ಎರಡು ಅಲಗಿನ ಕತ್ತಿಯನ್ನು ಯಾವಾಗ ಪ್ರಯೋಗ ಮಾಡಬೇಕು ಎಂಬ ಗೊಂದಲ ಕಾಡತೊಡಗಿದೆ.
"
ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡಬೇಕು ಎಂಬ ಒತ್ತಡ ತೀವ್ರವಿದೆ. ಈ ಒತ್ತಡಕ್ಕೆ ತಲೆಬಾಗಿದರೆ ಅಧಿವೇಶನದ ವೇಳೆ ಸಚಿವ ಸ್ಥಾನ ವಂಚಿತರ ಆಕ್ರೋಶ ಹಾಗೂ ಭಿನ್ನಮತೀಯ ಚಟುವಟಿಕೆಯನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಶಾಸಕರು ಲಭ್ಯರಾಗುವ ಕಾರಣ ಅವರ ಆಪರೇಷನ್ ನಡೆಸಲು ಬಿಜೆಪಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗುತ್ತದೆ ಎಂಬ ಭೀತಿಯಿದೆ. ಇನ್ನು ಸಂಪುಟ ವಿಸ್ತರಣೆಯನ್ನು ಮುಂದೂಡಿದರೆ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಳವಾಗಿ ಬಿಜೆಪಿ ಬಯಸುತ್ತಿರುವ ಸಂಖ್ಯೆಯನ್ನು ಮುಟ್ಟುವ ಆತಂಕವೂ ನಾಯಕರಿಗೆ ಇದೆ.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಅತೃಪ್ತಿ ಸ್ಫೋಟ?: ಮುಂಬೈಗೆ ಹೊರಟ 10 ಶಾಸಕರು!
ಈ ಹಿನ್ನೆಲೆಯಲ್ಲಿ ಡಿ.5ರಂದು ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮನ್ವಯ ಸಮಿತಿ ಸಭೆ ಅತ್ಯಂತ ಪ್ರಮುಖವಾಗಿ ಮಾರ್ಪಟ್ಟಿದೆ. ಈ ಸಭೆಯಲ್ಲಿ ಸಂಪುಟ ವಿಸ್ತರಣೆ ಕುರಿತು ಮಹತ್ವದ ನಿರ್ಧಾರವಾಗುವ ಸಾಧ್ಯತೆಯಿದೆ. ಇನ್ನು ಕಾಂಗ್ರೆಸ್ ಶಾಸಕರು ಸಿಡಿದೆದ್ದರೆ ಅದು ಸರ್ಕಾರದ ಮೇಲೆ ಪರಿಣಾಮ ಬೀರುವ ಕಾರಣ ಜೆಡಿಎಸ್ ನಾಯಕರು ಕೂಡ ಕಾಂಗ್ರೆಸ್ ಶಾಸಕರ ಅಸಮಾಧಾನ ಶಮನಗೊಳಿಸುವ ಅಗತ್ಯವಿದೆ. ಹೀಗಾಗಿಯೇ ಡಿ.8ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿದೆ. ಈ ಎರಡು ಸಭೆಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಸಮಾಧಾನಗೊಳಿಸುವ ಪ್ರಯತ್ನ ನಡೆಯಲಿದೆ.
ಮೂಲಗಳ ಪ್ರಕಾರ ಕಾಂಗ್ರೆಸ್ ನಾಯಕತ್ವ ಈ ಬಾರಿ ನಿಗಮ ಮಂಡಳಿ ಹಾಗೂ ವಿಧಾನಪರಿಷತ್ ಸಭಾಪತಿ, ಉಪ ಸಭಾಪತಿ, ಮುಖ್ಯ ಸಚೇತಕದಂತಹ ಹುದ್ದೆಗಳ ನೇಮಕದ ಮೂಲಕ ಕಾಂಗ್ರೆಸ್ ಶಾಸಕರಿಗೆ ಒಂದಷ್ಟುಅಧಿಕಾರ ಕೊಟ್ಟು ಸಂಪುಟ ವಿಸ್ತರಣೆಯನ್ನು ಬೆಳಗಾವಿ ಅಧಿವೇಶನದ ನಂತರ ಇಟ್ಟುಕೊಳ್ಳುವ ಉದ್ದೇಶ ಹೊಂದಿತ್ತು. ಆದರೆ, ಕಾಂಗ್ರೆಸ್ ಶಾಸಕರ ಒತ್ತಡ ಹಾಗೂ ಅತೃಪ್ತಿ ಯಾವ ಮಟ್ಟಕ್ಕೆ ಇದೆ ಎಂದರೆ ಅವರ ಬೇಡಿಕೆಗಳನ್ನು ತಕ್ಕಮಟ್ಟಿಗೆ ಈಡೇರಿಸದಿದ್ದರೆ ಸರ್ಕಾರಕ್ಕೆ ಧಕ್ಕೆ ಬರಬಹುದು ಎಂಬ ಭೀತಿ ಕಾಂಗ್ರೆಸ್ ನಾಯಕತ್ವಕ್ಕೆ ಇದೆ.
ಇದನ್ನೂ ಓದಿ: ಭುಗಿಲೆದ್ದ ಅತೃಪ್ತಿ: ರಮೇಶ್ ಜಾರಕಿಹೊಳಿ ಮನೆಗೆ ಬಿಜೆಪಿ ಶಾಸಕರ ದಂಡು
ಇನ್ನು ಸಂಪುಟ ವಿಸ್ತರಣೆ ವಿಚಾರದಲ್ಲೂ ಕಾಂಗ್ರೆಸ್ ನಾಯಕತ್ವದಲ್ಲೇ ಎರಡು ರೀತಿಯ ಅಭಿಪ್ರಾಯವಿದೆ. ಶಾಸಕರ ಸತತ ಒತ್ತಡಕ್ಕೆ ಸಿಲುಕಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸಂಪುಟ ವಿಸ್ತರಣೆ ಮಾಡಬೇಕು ಎಂಬುದರ ಪರವಿದ್ದಾರೆ. ಶಾಸಕರ ಅತೃಪ್ತಿ ಬಗ್ಗೆ ಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಇತ್ತೀಚೆಗೆ ದೆಹಲಿಗೆ ತೆರಳಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹಾಗೂ ಹೈಕಮಾಂಡ್ನ ಪ್ರಮುಖ ನಾಯಕರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಯ ಅನಿವಾರ್ಯತೆಯನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಶಾಕ್ ಕೊಟ್ಟ ಕಾಂಗ್ರೆಸ್ ಶಾಸಕನ ರಾಜೀನಾಮೆ ಮಾತು
ಆದರೆ, ಜೆಡಿಎಸ್ ಪಾಳಯದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಕಾಂಗ್ರೆಸ್ನ ಮತ್ತೊಂದು ಗುಂಪು ವಿಸ್ತರಣೆಯ ಪರವಿಲ್ಲ. ಇದಕ್ಕೆ ಮುಖ್ಯ ಕಾರಣ ವಿಸ್ತರಣೆ ನಡೆದರೆ ಸಚಿವ ಸ್ಥಾನ ದೊರೆಯದೇ ಅತೃಪ್ತರಾಗುವ ಶಾಸಕರ ದೊಡ್ಡ ಗುಂಪನ್ನು ಓಲೈಸುವುದು ಬಿಜೆಪಿಗೆ ಅತ್ಯಂತ ಸುಲಭವಾಗುತ್ತದೆ. ತನ್ಮೂಲಕ ಈ ಬೆಳವಣಿಗೆ ಸಮ್ಮಿಶ್ರ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸಲಿದೆ ಎಂಬ ಭೀತಿ.
ಅಲ್ಲದೆ, ಈಗ ಸಂಪುಟ ವಿಸ್ತರಣೆಗೆ ಸಮಯದ ಕೊರತೆಯೂ ಇದೆ. ಬೆಳಗಾವಿ ಅಧಿವೇಶನ ಡಿ.10ರಿಂದ ಆರಂಭವಾಗಲಿದೆ. ಸಮನ್ವಯ ಸಮಿತಿ ಸಭೆ ಡಿ.5ಕ್ಕೆ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಆಹ್ವಾನಿತರಾಗಿರುವ ಶಾಸಕಾಂಗ ಪಕ್ಷದ ಸಭೆ ಡಿ.8ರಂದು ನಡೆಯಲಿದೆ. ಈ ಎರಡು ಸಭೆಗಳ ನಂತರವೇ ಒಂದು ಸ್ಪಷ್ಟನಿರ್ಧಾರ ಮೂಡಲು ಸಾಧ್ಯ. ಒಂದು ವೇಳೆ ಸಂಪುಟ ವಿಸ್ತರಣೆ ಮಾಡಬೇಕು ಎಂದೇ ನಿರ್ಧಾರವಾದರೆ, ಅದಕ್ಕೆ ದೊರೆಯುವುದು ಎರಡು ದಿನ ಮಾತ್ರ. ಈ ಎರಡು ದಿನದಲ್ಲಿ ಹೈಕಮಾಂಡ್ ಜತೆಯೂ ಚರ್ಚೆ ಮಾಡಬೇಕಾಗುತ್ತದೆ.
ಇದನ್ನೂ ಓದಿ: ‘ಸಚಿವ ಸಂಪುಟ ವಿಸ್ತರಣೆ ಆದ ದಿನವೇ ಸರ್ಕಾರ ಪತನ’
ಸಿದ್ದರಾಮಯ್ಯ ಅವರ ಆಪ್ತ ಮೂಲಗಳ ಪ್ರಕಾರ ರಾಜ್ಯ ನಾಯಕತ್ವದಲ್ಲೂ ಒಮ್ಮತ ಮೂಡಿ ಹೈಕಮಾಂಡ್ ಕೂಡ ಸಹಮತ ನೀಡಿದರೆ ಡಿ.9ರಂದು ತಪ್ಪಿದರೆ ಡಿ.10ರಂದೇ ವಿಸ್ತರಣೆ ಮಾಡಬಹುದು. ಏಕೆಂದರೆ, ಡಿ.10ರಂದು ಬೆಳಗಾವಿ ಅಧಿವೇಶನ ಆರಂಭವಾದರೂ ಅಂದು ಸಂತಾಪ ಸೂಚನೆಗೆ ಮೀಸಲಾಗಲಿದ್ದು, ಬೇಗ ಮುಗಿಯಲಿದೆ. ಮಧ್ಯಾಹ್ನದ ನಂತರ ಪ್ರಮುಖ ನಾಯಕರು ಬೆಂಗಳೂರಿಗೆ ಹೆಲಿಕಾಪ್ಟರ್ನಲ್ಲಿ ಬಂದು ಪ್ರಮಾಣ ವಚನ ಕೈಗೊಳ್ಳಲು ಸಾಧ್ಯವಿದೆ ಎಂದೇ ಹೇಳುತ್ತವೆ.