ರಾಜ್ಯ ಕಾಂಗ್ರೆಸ್ ಅತೃಪ್ತಿ ಸ್ಫೋಟ?: ಮುಂಬೈಗೆ ಹೊರಟ 10 ಶಾಸಕರು!
ರಾಜ್ಯ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗುವ ರಾಜಕೀಯ ಕ್ಷಿಪ್ರಕ್ರಾಂತಿಯ ಬೆಳವಣಿಗೆ ತ್ವರಿತವಾಗಿ ನಡೆದಿದ್ದು, ಕಾಂಗ್ರೆಸ್ ಪಾಳೆಯವನ್ನು ಮತ್ತೊಮ್ಮೆ ತಲ್ಲಣಗೊಳಿಸಿದೆ. ಸಂಪುಟ ವಿಸ್ತರಣೆ ಪದೇ ಪದೇ ಮುಂದೂಡುತ್ತಿರುವುದರಿಂದ ಬೇಸರಗೊಂಡ ಕಾಂಗ್ರೆಸ್ನ 10 ಮಂದಿ ಶಾಸಕರು ಮತ್ತೆ ಮುಂಬೈ ಹಾದಿ ಹಿಡಿಯಲು ಸಜ್ಜಾಗಿದ್ದಾರೆ.
ಬೆಂಗಳೂರು[ನ.30]: ರಾಜ್ಯದ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಮತ್ತೊಂದು ರಾಜಕೀಯ ಕ್ಷಿಪ್ರಕ್ರಾಂತಿಯ ಬೆಳವಣಿಗೆ ತ್ವರಿತವಾಗಿ ನಡೆದಿದ್ದು, ಕಾಂಗ್ರೆಸ್ ಪಾಳೆಯವನ್ನು ಮತ್ತೊಮ್ಮೆ ತಲ್ಲಣಗೊಳಿಸಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬ ಹಾಗೂ ಸರ್ಕಾರದಲ್ಲಿ ಜೆಡಿಎಸ್ ಅಧಿಪತ್ಯಕ್ಕೆ ಬೇಸತ್ತ ಕಾಂಗ್ರೆಸ್ ಶಾಸಕರೂ ಸೇರಿದಂತೆ ಸುಮಾರು 10 ಶಾಸಕರು ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಮತ್ತೆ ಮುಂಬೈಗೆ ಹಾರಲು ಸಜ್ಜಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಎಲ್ಲಾ ಯೋಜನೆಯಂತೆ ನಡೆದರೆ, ಶುಕ್ರವಾರ ಸಂಜೆ ಮೂರರಿಂದ ಆರು ಗಂಟೆಯ ವೇಳೆಗೆ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ 10 ಮಂದಿ ಶಾಸಕರು ಮುಂಬೈಗೆ ಹಾರಲಿದ್ದಾರೆ. ಮುಂಬೈಗೆ ಬರಲಿರುವ ಈ ಶಾಸಕರಿಗೆ ಆತಿಥ್ಯ ನೀಡಲು ಬೆಂಗಳೂರು ನಗರದ ಬಿಜೆಪಿಯ ಪ್ರಭಾವಿ ಶಾಸಕರೊಬ್ಬರ ನೇತೃತ್ವದ ತಂಡ ಈಗಾಗಲೇ ಮುಂಬೈ ತಲುಪಿದೆ. 10 ಮಂದಿ ಶಾಸಕರ ಗುಂಪು ಮುಂಬೈ ತಲುಪಿ, ನಿಯೋಜಿತ ಸ್ಥಳ ಸೇರಿದ ನಂತರ ಬಿಜೆಪಿ ಹೈಕಮಾಂಡ್ ಇಡೀ ಕಾರ್ಯಾಚರಣೆಯನ್ನು ತನ್ನ ಕೈಗೆ ತೆಗೆದುಕೊಳ್ಳಲಿದೆ ಎಂಬ ವರ್ತಮಾನ ಬಂದಿದ್ದು, ಇದು ಕಾಂಗ್ರೆಸ್ ಪಾಳೆಯವನ್ನೂ ತಲುಪಿದೆ.
ಇದರಿಂದ ಗಾಬರಿಗೊಂಡಿರುವ ಕಾಂಗ್ರೆಸ್ ನಾಯಕತ್ವವು ಶಾಸಕರು ಈ ಕ್ಷಿಪ್ರ ಕ್ರಾಂತಿಗೆ ಒಳಗಾಗದಂತೆ ತಡೆಯಲು ಹರಸಾಹಸ ನಡೆಸತೊಡಗಿದೆ. ಅತ್ಯಂತ ಹಿರಿಯ ನಾಯಕರೊಬ್ಬರು ನೀಡಿರುವ ಮಾಹಿತಿ ಪ್ರಕಾರ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ಶಿವರಾಂ ಹೆಬ್ಬಾರ್, ಬಿ.ಕೆ.ಸಂಗಮೇಶ್, ಯಶವಂತರಾಯಗೌಡ ಪಾಟೀಲ್, ಬಿ.ಸಿ. ಪಾಟೀಲ್, ಆನಂದ್ಸಿಂಗ್, ಡಾ. ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್, ನಾಗೇಶ್ (ಪಕ್ಷೇತರ) ಮತ್ತು ಗೌರಿಶಂಕರ್ (ಜೆಡಿಎಸ್) ಅವರು ಮುಂಬೈಗೆ ಹಾರಲಿರುವ ಶಾಸಕರು.
ಈ ಶಾಸಕರ ಪೈಕಿ ಮಾಜಿ ಸಚಿವ ಚನ್ನಿಗಪ್ಪ ಪುತ್ರ ಗೌರಿಶಂಕರ್ ಅವರೊಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಬೆಂಗಳೂರಿನಿಂದ ಮುಂಬೈಗೆ ತೆರಳಲಿದ್ದರೆ, ಗೌರಿಶಂಕರ್ ಪ್ರಸ್ತುತ ಸಿಂಗಾಪುರದಲ್ಲಿದ್ದು ಅಲ್ಲಿಂದ ನೇರವಾಗಿ ಮುಂಬೈಗೆ ಆಗಮಿಸಿ ಈ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಒಂದು ಬಾರಿ ಈ 10 ಶಾಸಕರನ್ನು ಮುಂಬೈಗೆ ಹಾರಿಸಿಕೊಂಡು ಹೋಗುವಲ್ಲಿ ಯಶಸ್ವಿಯಾದರೆ, ಅದರ ಬೆನ್ನ ಹಿಂದೆಯೇ ಇಬ್ಬರು ಪಕ್ಷೇತರರು ಕೂಡ ಈ ತಂಡದಲ್ಲಿ ಸೇರ್ಪಡೆಯಾಗುವರು. ಹೀಗೆ ಬಿಜೆಪಿ ನಾಯಕರು 12 ಮಂದಿ ಶಾಸಕರನ್ನು ಒಟ್ಟುಗೂಡಿಸಿ ತೋರಿಸಿದರೆ, ಆಗ ಇನ್ನೂ ಬೇಲಿ ಮೇಲಿರುವ ಕಾಂಗ್ರೆಸ್ನ ಆರು ಮಂದಿ ಶಾಸಕರು ಈ ಗುಂಪಿನತ್ತ ಸೇರಲಿದ್ದಾರೆ. ಆ ಮೂಲಕ ಒಟ್ಟು 18 ಮಂದಿ ಶಾಸಕರನ್ನು ಒಗ್ಗೂಡಿಸಿ ಸರ್ಕಾರವನ್ನು ಅಲ್ಪಮತಕ್ಕೆ ತಂದು ಕೆಡವಿಹಾಕುವುದು ಬಿಜೆಪಿಯ ಯೋಜನೆ ಎಂಬ ಮಾಹಿತಿ ಕಾಂಗ್ರೆಸ್ ನಾಯಕರಿಗೆ ಲಭ್ಯವಾಗಿದೆ.
ಈ ಎಲ್ಲಾ ಬೆಳವಣಿಗೆಗಳನ್ನು ಭಾನುವಾರದೊಳಗೆ ಪೂರ್ಣಗೊಳಿಸುವ ಉಮೇದು ಬಿಜೆಪಿ ನಾಯಕರಿಗೆ ಇದ್ದಂತಿದೆ. ಕಾಂಗ್ರೆಸ್ ನಾಯಕರಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬಿಜೆಪಿಯ ಹಿರಿಯ ನಾಯಕರೊಬ್ಬರ ಪುತ್ರ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟು ಈ ಯೋಜನೆಯ ವಿವರವನ್ನು ಬಿಜೆಪಿ ಹೈಕಮಾಂಡ್ಗೆ ಸಾದ್ಯಂತವಾಗಿ ತಿಳಿಸಿ ಒಪ್ಪಿಗೆ ಪಡೆದುಕೊಂಡಿದ್ದಾರೆ. ಹೈಕಮಾಂಡ್ ಒಪ್ಪಿಗೆ ನೀಡಿದ ಬೆನ್ನಲ್ಲಿ ಶುಕ್ರವಾರದಿಂದ ಶಾಸಕರನ್ನು ಮುಂಬೈಗೆ ಕರೆದೊಯ್ಯುವ ಕಾರ್ಯಾಚರಣೆ ಆರಂಭವಾಗಲಿದೆ ಎಂಬ ಮಾಹಿತಿ ಬಂದಿದೆ.
ಹೀಗೆ ಬಿಜೆಪಿ ಅಣತಿ ಮೇರೆಗೆ ಆ ಪಕ್ಷದತ್ತ ಮುಖ ಮಾಡಲಿರುವ ಈ 18 ಮಂದಿಯ ಪೈಕಿ 10 ಮಂದಿಗೆ ಸಚಿವ ಸ್ಥಾನ ನೀಡುವ ಹಾಗೂ ಉಳಿದ ಎಂಟು ಮಂದಿಗೆ ಸಚಿವ ಸಂಪುಟ ದರ್ಜೆಯ ನಿಗಮ ಮಂಡಳಿ ನೀಡುವ ಭರವಸೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.