ಮತ್ತಷ್ಟು ಬೆಲೆ ಇಳಿಕೆಗೆ ನ. 14ರಿಂದ ಕಾಂಗ್ರೆಸ್ ಅಭಿಯಾನ
* ದೇಶಾದ್ಯಂತ ಕಾಂಗ್ರೆಸ್ನಿಂದ ಹೋರಾಟ
* ಉಪಚುನಾವಣೆ ಫಲಿತಾಂಶದಿಂದ ಎಚ್ಚೆತ್ತು ಕೇಂದ್ರದಿಂದ ದರ ಇಳಿಕೆ
* 40 ರು. ಕಿತ್ತುಕೊಂಡು ಈಗ 7 ರು. ಕೊಟ್ಟರೆ ಅದು ಉಡುಗೊರೆ ಹೇಗೆ?
ಬೆಂಗಳೂರು(ನ.05): ದೇಶಾದ್ಯಂತ ನಡೆದ ಉಪ ಚುನಾವಣೆಗಳಲ್ಲಿ(Byelection) ಮತದಾರ ಪ್ರಭು ನೀಡಿರುವ ತೀರ್ಪಿನಿಂದ ಎಚ್ಚೆತ್ತುಕೊಂಡು ಪೆಟ್ರೋಲ್(Petrol), ಡೀಸೆಲ್(Diesel) ಬೆಲೆ ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ತೀರ್ಪಿಗೆ ಎಷ್ಟು ಬೆಲೆ ಇದೆ ಹಾಗೂ ಸರ್ಕಾರಗಳು ಹೇಗೆ ಹೆದರುತ್ತವೆ ಎಂಬುದಕ್ಕೆ ಇದು ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಹೇಳಿದ್ದಾರೆ.
ಅಲ್ಲದೆ, ಪೆಟ್ರೋಲ್, ಡೀಸೆಲ್ ಬೆಲೆ 40 ರು. ಹೆಚ್ಚಳ ಮಾಡಿ ತಲಾ 12 ರು. ಹಾಗೂ 17 ರು. ಕಡಿಮೆ ಮಾಡಿದ್ದಾರೆ. ಜತೆಗೆ ಅಡುಗೆ ಅನಿಲ(LPG) ಸೇರಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿಲ್ಲ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ದೇಶಾದ್ಯಂತ ನ.14ರಿಂದ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ. ಇದರಡಿ ರಾಜ್ಯದಲ್ಲೂ(Karnataka) ಕಾಂಗ್ರೆಸ್(Congress) ಪಕ್ಷ ಜಾಗೃತಿ ಮೂಡಿಸಲು ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಇಂಧನ ಬೆಲೆ ಇಳಿಸಿದ ಸರ್ಕಾರದ ತೀರ್ಮಾನ ಸ್ವಾಗತಿಸುತ್ತೇವೆ. ಆದರೆ ತೆರಿಗೆ ಹೆಸರಲ್ಲಿ ಲೂಟಿ ಮಾಡಿರುವ ಹಣ ಜನರಿಗೆ ತಲುಪಿಸಲು ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.
Fuel Price| ತೈಲ ಬೆಲೆ ಇಳಿಕೆ: ಕೇಂದ್ರ, ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟ!
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ(Central Government) ಹಾಗೂ ರಾಜ್ಯ ಸರ್ಕಾರಗಳು(State Government) ಪ್ರತಿ ಲೀಟರ್ಗೆ ಡೀಸೆಲ್ 17 ರು. ಹಾಗೂ ಪೆಟ್ರೋಲ್ 12 ರು. ಇಳಿಕೆ ಮಾಡಿವೆ. ಇದು ಮತದಾರರ ತೀರ್ಪಿನ ಶಕ್ತಿಯ ಪ್ರತೀಕ. ದೇಶಾದ್ಯಂತ(India) ಬಿಜೆಪಿ(BJP) ಆಡಳಿತದಲ್ಲಿರುವ ಸರ್ಕಾರಗಳ ವಿರುದ್ಧವೇ ಉಪ ಚುನಾವಣೆಯಲ್ಲಿ ಮತದಾರ ಪ್ರಭು ಮತ ಚಲಾಯಿಸಿದ್ದಾರೆ. ನರೇಂದ್ರ ಮೋದಿ(Narendra Modi) ಅವರು 2014ರಲ್ಲಿ ಸಿಲಿಂಡರ್ಗೆ ಕೈ ಮುಗಿದು ಓಟು ಮಾಡಿ ಎಂದಿದ್ದರು. ನಾವು ಮೋದಿ ಅವರ ಹಾದಿಯಲ್ಲೇ ಸಿಲಿಂಡರ್ ಜತೆಗೆ ಸ್ಕೂಟರ್, ಕಾರು, ಟ್ರಾಕ್ಟರ್ಗಳಿಗೆ ಕೈ ಮುಗಿದು ಓಟು ಮಾಡಿ ಎಂದಿದ್ದೆವು. ಬೆಲೆ ಏರಿಕೆ, ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟದಿಂದ ಜನರು ನರಳುತ್ತಿದ್ದರೂ ಮತದಾರರ ಲೂಟಿ ಮಾಡಿದ ಸರ್ಕಾರಕ್ಕೆ ಜನರು ಸೂಕ್ತ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
ದೀಪಾವಳಿ ಉಡುಗೊರೆ ಹೇಗೆ?:
ಇಂಧನ ಬೆಲೆ ಇಳಿಕೆ ದೀಪಾವಳಿ ಉಡುಗೊರೆ(Deepavali Gift) ಎನ್ನುತ್ತಿದ್ದಾರೆ ಎಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ, 10 ರು. ಇರುವುದನ್ನು 5 ರು. ಮಾಡಿದಾಗ ಉಡುಗೊರೆ ಆಗುತ್ತದೆ. ಆದರೆ 40 ರು. ಕಿತ್ತುಕೊಂಡು ಈಗ 7 ರು. ಕೊಟ್ಟರೆ ಅದು ಉಡುಗೊರೆ ಹೇಗೆ? ನಿಮಗೆ 20 ಸಾವಿರ ಸಂಬಳ ಇದ್ದಾಗ 25 ಸಾವಿರ ಕೊಟ್ಟರೆ ಅದು ಉಡುಗೊರೆ. 15 ಸಾವಿರ ಕಿತ್ತುಕೊಂಡು 5 ಸಾವಿರ ಕೊಟ್ಟರೆ ಅದು ಉಡುಗೊರೆನಾ ಎಂದು ಪ್ರಶ್ನೆ ಮಾಡಿದರು.
50-60 ರು. ಇರಬೇಕಾದ ಇಂಧನ ಬೆಲೆ ಈಗ ಎಷ್ಟಿದೆ? ಇಷ್ಟುದಿನ ಪಿಕ್ ಪಾಕೆಟ್ ಮಾಡಿದ್ದಾರೆ. ಕಚ್ಚಾತೈಲ ಬೆಲೆ ಇಳಿದಾಗಲೂ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದೆ ಜನರನ್ನು ಲೂಟಿ ಮಾಡಿದರು ಎಂದು ಕಿಡಿಕಾರಿದರು.