ಇನ್ನೂ ನಿವಾರಣೆಯಾಗದ ರೈತರ ಸಾಲಮನ್ನಾ ಗೊಂದಲ..!
ಎಚ್ ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ಕೈಗೊಂಡಿದ್ದ ಸಾಲಮನ್ನಾ ಯೋಜನೆ ಗೊಂದಲದ ಗೂಡಾಗಿದ್ದು, ಸಾಲ ಮನ್ನಾ ಯೋಜನೆ ಫಲಾನುಭವಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
- ಕೆ.ಎಂ.ಮಂಜುನಾಥ್
ಬಳ್ಳಾರಿ(ಡಿ.17): ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆ ಗೊಂದಲ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಸಾಲ ಮನ್ನಾ ಯೋಜನೆ ಫಲಾನುಭವಿ ಎಂಬ ಪತ್ರ ಹಾಗೂ ಬ್ಯಾಂಕ್ನವರ ಮಾತು ನಂಬಿ ಈಗ ರೈತನೊಬ್ಬ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮರುಪಾವತಿಸದ ಕಾರಣ ಅಸಲಿಗಿಂತ ಬಡ್ಡಿ ಬೆಳೆದು ಈಗೇನು ಮಾಡೋದು ಎಂದು ತಲೆಮೇಲೆ ಕೈಹೊತ್ತು ಕೂತಿದ್ದಾರೆ.
ಹೌದು, ಇದು ಸಿರುಗುಪ್ಪ ತಾಲೂಕಿನ ಶಿರಿಗೇರಿ ಗ್ರಾಮದ ರೈತ ಎಸ್.ಎಂ.ಮಹಾಲಿಂಗಯ್ಯ ಅವರು ಪಡುತ್ತಿರುವ ಸಂಕಟ. ಪ್ರತಿ ವರ್ಷ ಬೆಳೆಸಾಲ ಪಡೆದು ಸಕಾಲದಲ್ಲಿ ಮರುಪಾವತಿ ಮಾಡುತ್ತಿದ್ದೆ. 2017ರಲ್ಲಿ 25 ಸಾವಿರ ರು. ಸಾಲ ಪಡೆದಿದ್ದೆ. ಅವಧಿಯೊಳಗೆ ಮರು ಪಾವತಿ ಮಾಡಬೇಕೆನ್ನುವಷ್ಟರಲ್ಲಿ ಅಂದಿನ ಸರ್ಕಾರ ಮನ್ನಾ ಘೋಷಣೆ ಮಾಡಿತು. ಈ ಸಂಬಂಧ ಬ್ಯಾಂಕ್ನವರು ಕೇಳಿದ ದಾಖಲೆ ಸಲ್ಲಿಸಿದೆ.
ವಿಮಾನದಲ್ಲಿ ಕನ್ನಡದಲ್ಲಿ ಸೇವೆ ನೀಡದ್ದಕ್ಕೆ IAS ಅಧಿಕಾರಿ ಆಕ್ರೋಶ
ಜತೆಗೆ, ‘ನೀವು ಸಹ ಸಾಲ ಸೌಲಭ್ಯದ ಓರ್ವ ಫಲಾನುಭವಿ ಆಗಿದ್ದೀರಿ’ ಎಂದು ವಿಧಾನಸೌಧದಿಂದ ಬಂದಿದ್ದ ಮುಖ್ಯಮಂತ್ರಿಗಳ ಪತ್ರ ಹೇಳಿತ್ತು. ಆದರೆ, ಈವರೆಗೆ ಸಾಲಮನ್ನಾ ಆಗಿಲ್ಲ. ಬಡ್ಡಿ ಮಾತ್ರ ಅಸಲಿಗಿಂತ ಹೆಚ್ಚಾಗಿ ಬೆಳೆದು ನಿಂತಿದೆ. ಬ್ಯಾಂಕ್ಗೆ ಹೋದರೆ ತಹಸೀಲ್ದಾರ್ ವಿಚಾರಿಸಿ ಎನ್ನುತ್ತಾರೆ. ತಹಸೀಲ್ದಾರರೂ ಸ್ಪಷ್ಟಉತ್ತರ ನೀಡುತ್ತಿಲ್ಲ ಎಂದು ರೈತ ಅಳಲು ತೋಡಿಕೊಂಡರು.