ರೈತ ಮಹಿಳೆಗೆ ಅವಹೇಳನ : ಸಿಎಂ ವಿರುದ್ಧ ದೂರು
ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. ರೈತ ಮಹಿಳೆ ವಿರುದ್ಧ ನೀಡಿದ ಹೇಳಿಕೆ ಸಂಬಂಧ ದೂರು ನೀಡಲಾಗಿದೆ.
ಬೆಂಗಳೂರು : ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಮಹಿಳೆ ಉದ್ದೇಶಿಸಿ ಅವಹೇಳನಕಾರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಡಿಜಿಪಿ ಅವರಿಗೆ ಕಾರ್ಮಿಕ ಕಲ್ಯಾಣ ಸಂಘಟನೆ ಸೋಮವಾರ ದೂರು ಸಲ್ಲಿಸಿದೆ.
ರೈತ ಮಹಿಳೆಯನ್ನು ಸಾರ್ವಜನಿಕ ಸಮಾರಂಭದಲ್ಲಿ ತುಚ್ಛ ಭಾಷೆ ಬಳಸಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿಂದಿಸಿದ್ದಾರೆ. ಈ ತಪ್ಪಿಗೆ ಅವರ ವಿರುದ್ಧ ಮಹಿಳೆ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಿ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂದು ಡಿಜಿಪಿ ನೀಲಮಣಿ ಎನ್.ರಾಜು ಅವರಿಗೆ ಇಮೇಲ್ ಮೂಲಕ ಸಂಘಟನೆ ದೂರು ನೀಡಿದೆ.
ಬೆಳಗಾವಿಯಲ್ಲಿ ನಡೆದ ರೈತರ ಪ್ರತಿಭಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಮಹಿಳೆಯೊಬ್ಬರ ಬಗ್ಗೆ ಲಘುವಾಗಿ ಮಾತನಾಡಿ ವಿವಾದಕ್ಕೆ ತುತ್ತಾಗಿದ್ದರು. ಈ ಹೇಳಿಕೆ ಖಂಡಿಸಿ ನಗರದಲ್ಲಿ ರೈತರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಈಗ ಪೊಲೀಸರಿಗೆ ಕಾರ್ಮಿಕ ಕಲ್ಯಾಣ ಸಂಘಟನೆ ದೂರು ಸಲ್ಲಿಸಿದೆ.