Asianet Suvarna News Asianet Suvarna News

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪ್ರಾಣೇಶ್ ಫಸ್ಟ್ ರಿಯಾಕ್ಷನ್

* ಗಂಗಾವತಿ ಪ್ರಾಣೇಶ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
* ಹಾಸ್ಯದ ಮೂಲಕ ಹೆಸರು ವಾಸಿಯಾಗಿರುವ ಪ್ರಾಣೇಶ್
* ಪ್ರಶಸ್ತಿ ಲಭಿಸಿರುವ ಬಗ್ಗೆ  ಪ್ರಾಣೇಶ್ ಮೊದಲ ಪ್ರತಿಕ್ರಿಯೆ

comedian B Pranesh First Reaction after Kannada Rajyotsava Award rbj
Author
Bengaluru, First Published Oct 31, 2021, 6:57 PM IST

ಕೊಪ್ಪಳ, (ಅ.31):  2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದೆ.  66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ 66 ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ವಿಶೇಷವಗಿದೆ. 

ಹಾಸ್ಯ (Comedy) ಭಾಷಣಕಾರ ಗಂಗಾವತಿ ಪ್ರಾಣೇಶ್ (Gangavathi Pranesh) ಅವರಿಗೆ 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಗುಲ್ಬರ್ಗಾ ಆಕಾಶವಾಣಿಯಿಂದ ಆರಂಭವಾದ ಇವರ ಹಾಸ್ಯಸಂಜೆ ಕಾರ್ಯಕ್ರಮವು ವಿವಿಧ ವಾಹಿನಿಗಳಿಗೂ ಹಬ್ಬಿದೆ.

2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಪ್ರಾಣೇಶ್ ಸೇರಿದಂತೆ 66 ಸಾಧಕರು ಆಯ್ಕೆ

ಇನ್ನು ಈ ಪ್ರಶಸ್ತಿ ದೊರೆತಿರುವ ಬಗ್ಗೆ ಮೊದಲ ಬಾರಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಪ್ರಾಣೇಶ್, ಸರಕಾರ ನನ್ನ 30 ವರ್ಷಗಳ ಸಾಹಿತ್ಯ ಸೇವೆ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಪ್ರಶಸ್ತಿ ಕನ್ನಡ ಜನತೆಗೆ ಸಂದಿದೆ. 60 ವರ್ಷದಲ್ಲಿ ಪ್ರಶಸ್ತಿ ನೀಡಿದರೆ ಲೇಟ್ ಆಗುತ್ತೆ ಅಂತ ನನಗೆ ಅನಿಸಿತ್ತು. ಸಣ್ಣ ವಯಸ್ಸಿನಲ್ಲಿ ಪ್ರಶಸ್ತಿ ಬಂದರೆ ಹೆಚ್ಚಿನ ಸೇವೆ ಸಲ್ಲಿಸಬಹುದು. ನಾನು ಇನ್ನೂ ಗಟ್ಟಿಯಾಗಿರುವುದರಿಂದ ಈ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸ್ವಲ್ಪ ಜಲ್ದಿ ಪ್ರಶಸ್ತಿ ನೀಡಿದರೆ ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎನ್ನುವುದು ನನ್ನ ಅಭಿಪ್ರಾಯ. ಪ್ರಶಸ್ತಿ ನೀಡಿರುವುದಕ್ಕೆ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪ್ರಾಣೇಶ್ ಕಿರುಪರಿಚಯ
ಗಂಗಾವತಿ ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟೆಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಯಲಬುರ್ಗಿಯಲ್ಲೂ, ಬಿ. ಕಾಂ ಪದವಿಯನ್ನು ಗಂಗಾವತಿಯಲ್ಲೂ ಪಡೆದರು. ತಂದೆ ಸ್ವಾತಂತ್ರ್ಯಯೋಧರಾದ ಶ್ರೀ ಬಿ. ವೆಂಕೋಬಾಚಾರ್ಯರು ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿಬಾಯಿ ಅವರಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡ ಪ್ರಾಣೇಶ್ 1982ರಿಂದ ಸಾಹಿತ್ಯದ ರಸಾಸ್ವಾದದಲ್ಲಿ ಮೀಯತೊಡಗಿದರು.

ಬೀchi ಸಾಹಿತ್ಯದಿಂದ ಪ್ರಭಾವಿತರಾದ ಪ್ರಾಣೇಶ್, ಆ ಸಾಹಿತ್ಯದಲ್ಲಿರುವ ಹಾಸ್ಯವನ್ನು ಮೈಗೂಡಿಸಿಕೊಂಡು ಅದನ್ನೇ ಇತರರಿಗೆ ಹಂಚುವ ಕಾಯಕವನ್ನು 1994ರಿಂದ ಆರಂಭಿಸಿದರು. ‘ಹಾಸ್ಯಸಂಜೆ’ ಎಂಬ ವಿನೂತನವಾದ ಹಾಸ್ಯಕ್ಕೇ ಮೀಸಲಾದ ಕಾರ್ಯಕ್ರಮಗಳನ್ನು ಉತ್ತರ ಕರ್ನಾಟಕದಲ್ಲಿ ಆರಂಭಿಸಿದ ಕೀರ್ತಿ ಪ್ರಾಣೇಶರಿಗೆ ಸಲ್ಲುತ್ತದೆ. 

ಗುಲ್ಬರ್ಗಾ ಆಕಾಶವಾಣಿಯಿಂದ ಆರಂಭವಾದ ಇವರ ಹಾಸ್ಯಸಂಜೆ ಕಾರ್ಯಕ್ರಮವು ವಿವಿಧ ವಾಹಿನಿಗಳಿಗೂ ಹಬ್ಬಿದೆ. ವಿಶ್ವದ ವಿವಿದೆಡೆಗಳಲ್ಲಿರುವ ಸುಮಾರು 400 ಊರುಗಳಲ್ಲಿ ಪ್ರಾಣೇಶರು ನೀಡಿರುವ ಕಾರ್ಯಕ್ರಮಗಳ ಸಂಖ್ಯೆ ಹಲವು ಸಾವಿರಗಳನ್ನು ಮೀರಿವೆ. 

ಕೇವಲ ಭಾಷಣದಲ್ಲಷ್ಟೇ ಅಲ್ಲದೆ ಪ್ರಾಣೇಶರ ಪ್ರಾವಿಣ್ಯತೆ ತಬಲಾ, ಕೊಳಲು, ಸಂಗೀತಗಳಲ್ಲೂ ಚಾಚಿಕೊಂಡಿದೆ. ಪ್ರಾಣೇಶರ ವೈಶಿಷ್ಟ್ಯವ್ಯೇ ಅರಳು ಹುರಿದಂತೆ ಉತ್ತರ ಕರ್ನಾಟಕದ ಅಚ್ಚ ಕನ್ನಡದಲ್ಲಿ ಹರಿಸುವ ಅವರ ವಾಗ್ಝರಿ. ಅವರ ಈ ಮಾತುಗಾರಿಕೆ ವಿಶ್ವವ್ಯಾಪಿಯಾಗಿರುವ ಕನ್ನಡಿಗರೆಲ್ಲರಿಗೂ ಬಲುಪ್ರಿಯ. 

ಮಧ್ಯಪ್ರಾಚ್ಯ ದೇಶಗಳು, ಆಸ್ಟ್ರೇಲಿಯಾ, ಸಿಂಗಪೂರ್, ಥೈಲಾಂಡ್, ಮಲೇಶಿಯಾ, ಹಾಂಕಾಂಗ್, ಅಮೆರಿಕ ಮುಂತಾದ ನಗರಗಳಲ್ಲೆಲ್ಲಾ ಅವರ ಕಾರ್ಯಕ್ರಮಗಳು ಜನಪ್ರಿಯಗೊಂಡಿವೆ.
 

Follow Us:
Download App:
  • android
  • ios