ನವಿಲುಗರಿ ಸಂಗ್ರಹ, ಮಾರಾಟ ಅಪರಾಧವಲ್ಲ: ಸಚಿವ ಖಂಡ್ರೆ
ಬಿಜೆಪಿಗರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಎಲ್ಲದನ್ನೂ ವಿವಾದ ಮಾಡುತ್ತಾರೆ. ಕಾಯ್ದೆ ಪ್ರಕಾರ ನವಿಲುಗರಿಗಳ ಬಳಕೆಗೆ ಯಾವುದೇ ನಿರ್ಬಂಧವಿಲ್ಲ. ಆದರೆ, ನವಿಲುಗರಿ ಮತ್ತು ಅದರಿಂದ ತಯಾರಿಸಿ ಯಾವುದೇ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು(ಅ.28): ದರ್ಗಾ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನವಿಲುಗರಿ ಬಳಕೆ ಕುರಿತಂತೆ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 43ರ ಅಡಿಯಲ್ಲಿ ನವಿಲುಗರಿಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಎಲ್ಲದನ್ನೂ ವಿವಾದ ಮಾಡುತ್ತಾರೆ. ಕಾಯ್ದೆ ಪ್ರಕಾರ ನವಿಲುಗರಿಗಳ ಬಳಕೆಗೆ ಯಾವುದೇ ನಿರ್ಬಂಧವಿಲ್ಲ. ಆದರೆ, ನವಿಲುಗರಿ ಮತ್ತು ಅದರಿಂದ ತಯಾರಿಸಿ ಯಾವುದೇ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ, ನವಿಲುಗಳಿಂದ ನೈಸರ್ಗಿಕವಾಗಿ ಬಿದ್ದ ಗರಿಗಳನ್ನು ಸಂಗ್ರಹಿಸುವುದು ಮತ್ತು ದೇಶದೊಳಗೆ ಮಾರಾಟ ಮಾಡುವುದು ಕಾನೂನು ಬಾಹಿರವಲ್ಲ. ಅದೇ ನವಿಲುಗಳಿಗೆ ಹಿಂಸೆ ನೀಡಿ ಗರಿಗಳನ್ನು ಕೀಳುವುದು ಶಿಕ್ಷಾರ್ಹ ಅಪರಾದ ಎಂದು ಸ್ಪಷ್ಟಪಡಿಸಿದರು.
ವನ್ಯಜೀವಿ ಅಂಗಾಂಗ ಒಪ್ಪಿಸಲು 2 ತಿಂಗಳು ಸಮಯ: ಸಚಿವ ಈಶ್ವರ್ ಖಂಡ್ರೆ
ಅರಣ್ಯಾಧಿಕಾರಿಗಳ ಅಮಾನತಿಗೆ ಸೂಚನೆ
ಹುಲಿ ಉಗುರಿನ ಆಭರಣ ಧರಿಸುವ ಅರಣ್ಯಾಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚಿಸಿದರು. ಜನರಿಗೆ ತಿಳಿಹೇಳಿ, ಕಾನೂನು ಕಾಪಾಡಬೇಕಾದವರೇ ಹುಲಿ ಉಗುರಿನ ಆಭರಣ ಧರಿಸುವುದು ಅಕ್ಷಮ್ಯ ಅಪರಾಧ. ಅಂತಹ ಅರಣ್ಯಾಧಿಕಾರಿಗಳ ವಿರುದ್ಧ ತನಿಖೆಯನ್ನು ಜಾರಿಯಲ್ಲಿಟ್ಟು ಅಮಾನತು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಹೇಳಿದರು.