ಶೂದ್ರ ಶ್ರಮಿಕ ವರ್ಗಗಳಿಗೆ ಆರ್ಥಿಕ ಚೈತನ್ಯ ನೀಡಲು ಭಾಗ್ಯಗಳು ಮತ್ತು ಗ್ಯಾರಂಟಿಗಳು ವರದಾನವಾಗಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜಾತಿ ನೋಡದೆ ಎಲ್ಲ ಜಾತಿಗಳ ಅಭಿವೃದ್ಧಿಯೇ ಸರ್ಕಾರದ ಗುರಿ. ದಾರ್ಶನಿಕರು ಮತ್ತು ಮಹನೀಯರ ಜಯಂತಿಗಳನ್ನು ಸರ್ಕಾರ ಆಚರಿಸುತ್ತಿದೆ.

ಮೈಸೂರು (ಆ.31): ಶೂದ್ರ ಶ್ರಮಿಕ ವರ್ಗಗಳಿಗೆ ಆರ್ಥಿಕ‌ ಚೈತನ್ಯ ಕೊಡಲು ಅಂದು ಭಾಗ್ಯಗಳು, ಇಂದು ಗ್ಯಾರಂಟಿಗಳು ವರದಾನವಾಗಿವೆ. ನಮ್ಮ ಸರ್ಕಾರ ಜಾತಿ ನೋಡಲ್ಲ. ಎಲ್ಲಾ ಜಾತಿಯವರ ಅಭಿವೃದ್ಧಿಯಷ್ಟೆ ನಮ್ಮ ಗುರಿ. ಈ ನೆಲದ ದಾರ್ಶನಿಕರು, ಮಹಾನುಭಾವರ ಮನುಕುಲದ ಕೊಡುಗೆ ಗಮನಿಸಿ ಅವರೆಲ್ಲರ ಜಯಂತಿಯನ್ನು ಸರ್ಕಾರವೇ ಆಚರಿಸುತ್ತಿದೆ. ಜೊತೆಗೆ ಇವರೆಲ್ಲರೂ ಜಾತ್ಯತೀತ ಮನೋಭಾವದಿಂದ ನೀಡಿದ ಮೌಲ್ಯಗಳ ಆಧಾರದಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ, 'ಉಪ್ಪಾರ ಸಮುದಾಯ ಭವನದ' ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಚತುರ್ವರ್ಣ ವ್ಯವಸ್ಥೆಯ ಅಡಿಯಲ್ಲಿ ಶೂದ್ರರಿಗೆ ಶಿಕ್ಷಣದ ಅವಕಾಶವೇ ಇರಲಿಲ್ಲ. ಇದರಿಂದಾಗಿ ಶೂದ್ರರಿಗೆ ದುಡಿಯುವ ಅವಕಾಶವೇ ಇಲ್ಲದಂತಾಯಿತು. ಶೂದ್ರರಲ್ಲಿ ಉಪ್ಪಾರ ಸಮುದಾಯ ಅತೀ ಹಿಂದುಳಿದ ಸಮುದಾಯವಾಗಿದೆ. ಅಂಬೇಡ್ಕರ್ ಅವರು ನೀಡಿರುವ 'ಶಿಕ್ಷಣ-ಸಂಘಟನೆ-ಹೋರಾಟ ಎನ್ನುವ ಮಂತ್ರವನ್ನು ಪಾಲಿಸುವ ಮೂಲಕ ಉಪ್ಪಾರ ಸಮುದಾಯ ಆರ್ಥಿಕವಾಗಿ ಸಬಲರಾಗಬೇಕು. ಈ ಉದ್ದೇಶದಿಂದಲೇ ನಾನು ಉಪ್ಪಾರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು' ಎಂದು ಹೇಳಿದರು.

ಸರ್ವ ಶ್ರಮಿಕ ವರ್ಗವನ್ನು ಗಮನದಲ್ಲಿ ಇಟ್ಟುಕೊಂಡು ಮೊದಲ ಬಾರಿ ಸಿಎಂ ಆದಾಗ ನಾನು ಹತ್ತು ಹಲವು ಭಾಗ್ಯಗಳನ್ನು ಕಲ್ಪಿಸಿದೆ. ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದರ ಪರಿಣಾಮ ಪ್ರತೀ ಕುಟುಂಬಕ್ಕೆ 5 ರಿಂದ 6 ಸಾವಿರ ರೂಪಾಯಿಯ ನೆರವು ಪ್ರತೀ ತಿಂಗಳು ದೊರೆಯುತ್ತಿದೆ. ಆರ್ಥಿಕ ಅಸಮಾನತೆ ಸುಮ್ಮನೆ ಭಾಷಣ ಮಾಡಿದರೆ ಹೋಗಲ್ಲ. ಕಾರ್ಯಕ್ರಮ ರೂಪಿಸಿ ಜಾರಿಗೆ ತರುವುದು ಮುಖ್ಯ. ಇದಕ್ಕಾಗಿ ನಮ್ಮ ಸರ್ಕಾರ ನಿಂತರವಾಗಿ ಶ್ರಮಿಸುತ್ತಿದೆ ಎಂದರು.

ಉಪ್ಪಾರ ಸಮುದಾಯದ ಕುಲಶಾಸ್ತೀಯ ಅಧ್ಯಯನದ ಆಧಾರದಲ್ಲಿ ಮುಂದಿನ‌ ಕ್ರಮ ವಹಿಸಲಾಗುವುದು. ಉಪ್ಪಾರ ಭವನ‌ಗಳಿಗೆ ಹಣ ಒದಗಿಸಲಾಗುವುದು. ಆದರೆ, ನೀವು ಕೂಡ ನಿಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಿತರನ್ನಾಗಿ ಮಾಡುತ್ತೇವೆ ಎನ್ನುವ ಶಪಥ ಮಾಡಬೇಕು. ನಾವು ನಿಮ್ಮ ಜೊತೆ ಗಟ್ಟಿಯಾಗಿ ನಿಂತಿದ್ದೇವೆ, ನೀವು ನಮ್ಮ ಜೊತೆ ಭದ್ರವಾಗಿ‌ ನಿಲ್ಲಿ. ಬದಲಾವಣೆ ಖಂಡಿತವಾಗಿ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.