Asianet Suvarna News Asianet Suvarna News

ಸೆಸ್‌, ಸರ್‌ ಚಾರ್ಜ್‌ನಲ್ಲೂ ಪಾಲು ಕೊಡಿ: ಸಿಎಂ ಸಿದ್ದರಾಮಯ್ಯ

ಸೆಸ್ ಮತ್ತು ಸರ್ ಚಾರ್ಜ್ ನಿಂದ ಸಂಗ್ರಹವಾದ ತೆರಿಗೆಯಲ್ಲಿ ಒಂದು ರುಪಾಯಿಯನ್ನೂ ಕೇಂದ್ರವು ರಾಜ್ಯಗಳಿಗೆ ನೀಡುವುದಿಲ್ಲ. ಆದ್ದರಿಂದ ಇದರಲ್ಲೂ ರಾಜ್ಯಗಳು ಪಾಲು ಕೇಳಬೇಕು ಎಂದು ತೀರ್ಮಾನ ಮಾಡಿದ್ದೇವೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

CM Siddaramaiah Talks Over Karnataka Tax grg
Author
First Published Feb 15, 2024, 6:30 AM IST | Last Updated Feb 15, 2024, 6:30 AM IST

ಬೆಂಗಳೂರು(ಫೆ.15):  ಸೆಸ್‌ ಮತ್ತು ಸರ್‌ ಚಾರ್ಜ್‌ನಲ್ಲಿ ಸಂಗ್ರಹವಾಗುವ ತೆರಿಗೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಪಾಲು ನೀಡಬೇಕು. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

ಎಕ್ಸ್ (ಟ್ವಿಟರ್) ಸ್ಪೇಸ್‌ನಲ್ಲಿ ‘ನಮ್ಮ ತೆರಿಗೆ ನಮ್ಮ ಹಕ್ಕು’ ಕನ್ನಡಿಗರ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೆಸ್ ಮತ್ತು ಸರ್ ಚಾರ್ಜ್ ನಿಂದ ಸಂಗ್ರಹವಾದ ತೆರಿಗೆಯಲ್ಲಿ ಒಂದು ರುಪಾಯಿಯನ್ನೂ ಕೇಂದ್ರವು ರಾಜ್ಯಗಳಿಗೆ ನೀಡುವುದಿಲ್ಲ. ಆದ್ದರಿಂದ ಇದರಲ್ಲೂ ರಾಜ್ಯಗಳು ಪಾಲು ಕೇಳಬೇಕು ಎಂದು ತೀರ್ಮಾನ ಮಾಡಿದ್ದೇವೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸರ್ಕಾರ ರಾಜ್ಯಪಾಲರು ಸುಳ್ಳು ಹೇಳುವಂತೆ ಮಾಡಿದೆ, ಇಷ್ಟೊಂದು ಸಪ್ಪೆ ಭಾಷಣ ಯಾವತ್ತೂ ಕೇಳಿರಲಿಲ್ಲ: ಬಿಜೆಪಿ ಕಿಡಿ

ರಾಜ್ಯಗಳ ಅಭಿವೃದ್ಧಿಗೆ ಸೆಸ್, ಸರ್ ಚಾರ್ಜ್‌ನಲ್ಲಿ ಪಾಲು ಕೊಡಲೇಬೇಕು. ರಾಜ್ಯಗಳ ಅಭಿವೃದ್ಧಿಯಾಗದೇ ದೇಶದ ಅಭಿವೃದ್ಧಿ ಹೇಗೆ ಸಾಧ್ಯ. ರಾಜ್ಯಗಳು ದುರ್ಬಲವಾದರೆ ದೇಶ ದುರ್ಬಲವಾಗುತ್ತದೆ. ದೇಶವೆಂದರೆ ರಾಜ್ಯಗಳ ಒಕ್ಕೂಟ. ತೆರಿಗೆ ವಸೂಲಾಗುವುದೇ ರಾಜ್ಯಗಳಿಂದ. ಹೀಗಿರುವಾಗ ರಾಜ್ಯಗಳಿಗೆ ನ್ಯಾಯಯುತವಾದ ತೆರಿಗೆ ಕೊಡಿ ಎನ್ನುವುದರಲ್ಲಿ ತಪ್ಪೇನು ಎಂದು ಅವರು ಪ್ರಶ್ನಿಸಿದರು.

ಉ.ಪ್ರದೇಶಕ್ಕೆ 2.18 ಲಕ್ಷ ಕೋಟಿ ರು.:

ಅಭಿವೃದ್ಧಿಯನ್ನೇ ಮಾಡದ ಉತ್ತರ ಪ್ರದೇಶಕ್ಕೆ ತೆರಿಗೆ ಬಾಬ್ತಿನಲ್ಲಿ 2.18 ಲಕ್ಷ ಕೋಟಿ ರುಪಾಯಿಗೂ ಅಧಿಕ ಹಣ ನೀಡಲಾಗುತ್ತದೆ. ಆದರೆ ನಮಗೆ ಮಾತ್ರ 52 ಸಾವಿರ ಕೋಟಿ ರು. ಕೊಡುತ್ತಾರೆ. ಇದನ್ನು ಸಹಿಸಬೇಕಾ. ಉತ್ತರ ಪ್ರದೇಶದ ಜನಸಂಖ್ಯೆ ಹೆಚ್ಚಾಗಿದ್ದರೂ ಅವರಿಂದ ಬರುವ ತೆರಿಗೆ ಕಡಿಮೆ. ಉತ್ತರ ಪ್ರದೇಶಕ್ಕೆ ನೀಡಬೇಡಿ ಎನ್ನುವುದು ನಮ್ಮ ವಾದವಲ್ಲ. ನಮಗೆ ಅನ್ಯಾಯ ಮಾಡಬೇಡಿ ಎನ್ನುವುದು ನಮ್ಮ ಆಗ್ರಹ ಎಂದು ವಿವರಿಸಿದರು.

ಸಂವಿಧಾನ ಬದ್ದವಾದ ಒಕ್ಕೂಟ ವ್ಯವಸ್ಥೆಯನ್ನು ಇಡೀ ದೇಶದಂತೆ ನಾವೂ ಸಹ ಒಪ್ಪಿಕೊಂಡಿದ್ದೇವೆ. ಹೀಗಿರುವಾಗ ಚೀನಾ ರೀತಿಯ ಕೇಂದ್ರದ ಏಕಸ್ವಾಮ್ಯ ಮತ್ತು ಅಮೆರಿಕದ ಅಧ್ಯಕ್ಷೀಯ ಮಾದರಿಯ ಆಡಳಿತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮಗೆ ಆಗುತ್ತಿರುವ ಅನ್ಯಾದ ವಿರುದ್ಧ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ನಮ್ಮ‌ ಸಂಸದರು ದೆಹಲಿಯಲ್ಲಿ ಬಾಯಿ ಬಿಡದೇ ಸಮರ್ಥಿಸುತ್ತಿದ್ದಾರೆ. ಹೀಗಾದರೆ ರಾಜ್ಯದ ಭವಿಷ್ಯದ ಗತಿ ಏನು ಎಂದು ಪ್ರಶ್ನಿಸಿದರು.

ದ್ವಿಭಾಷಾ ನೀತಿ ವಿರುದ್ಧ ಹೋರಾಟ ಅಗತ್ಯ

ಕನ್ನಡ ಬಾವುಟ ಮತ್ತು ದ್ವಿಭಾಷಾ ನೀತಿಯ ವಿಚಾರದಲ್ಲೂ ಜನ ಎಚ್ಚೆತ್ತುಕೊಂಡು ಹೋರಾಟ ಮಾಡುವ ಅಗತ್ಯವಿದೆ. ಭಾಷೆಯಾಗಿ ಯಾವ ಭಾಷೆಯನ್ನಾದರೂ ಕಲಿಯಬಹುದು. ಆದರೆ ಕನ್ನಡದ ಮೇಲೆ ಹಿಂದಿ ಅಥವಾ ಇತರೆ ಭಾಷೆಯ ಹೇರಿಕೆ, ಸಾಂಸ್ಕೃತಿಕ ಹೇರಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಬರದಿಂದ ಕಂಗಾಲಾದ ರೈತ ಲೆಕ್ಕಕ್ಕಿಲ್ಲ, ವಕ್ಫ್‌ ಆಸ್ತಿಗೆ ಗೋಡೆ ಕಟ್ಟೋದೇ ಸರ್ಕಾರಕ್ಕೆ ಮುಖ್ಯವಾಯ್ತಲ್ಲ!

ನಿರ್ಮಲಾ ಸೀತಾರಾಮನ್‌ರಿಂದ ಅನ್ಯಾಯ

15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗಿದೆ. 14 ನೇ ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲು ಹಂಚಿಕೆ ಶೇ.4.71 ಇದ್ದದ್ದನ್ನು 15ನೇ ಆಯೋಗದಲ್ಲಿ ಶೇ.3.64 ಕ್ಕೆ ಕಡಿತ ಮಾಡಿದರು. ಇದರಿಂದ ರಾಜ್ಯಕ್ಕೆ 5 ವರ್ಷದಲ್ಲಿ 1.87 ಲಕ್ಷ ಕೋಟಿ ರು. ನಷ್ಟವಾಗಿದೆ. ನಾವು ಕೊಡುವ ತೆರಿಗೆಯ 100 ರುಪಾಯಿಯಲ್ಲಿ ಕೇವಲ 12-13 ರು. ವಾಪಸ್‌ ಬರುತ್ತಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಫೆರಿಫೆರಲ್ ರಸ್ತೆ ನಿರ್ಮಾಣ ಮತ್ತು ಕೆರೆಗಳ ಅಭಿವೃದ್ದಿಗೆ 6 ಸಾವಿರ ಕೋಟಿ ಸೇರಿ ಒಟ್ಟು 11,495 ಕೋಟಿ ರು. ವಿಶೇಷ ಅನುದಾನ ನೀಡಲು ಆಯೋಗ ಶಿಫಾರಸು ಮಾಡಿತ್ತು. ಆದರೆ ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ತಡೆದು ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿದರು ಎಂದು ಆರೋಪಿಸಿದರು.

Latest Videos
Follow Us:
Download App:
  • android
  • ios