ಮತ್ತೊಂದು ಹೊಸ ಸೇವೆಗೆ ಚಾಲನೆ ನೀಡಿದ ಸಿಎಂ
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇದೀಗ ರಾಜ್ಯದಲ್ಲಿ ಮತ್ತೊಂದು ಹೊಸ ಸೇವೆಯೊಂದನ್ನು ಚಾಲನೆ ನೀಡಿದ್ದಾರೆ. ಸ್ಥಿರಾಸ್ತಿಗಳ ವ್ಯವಹಾರಗಳು ಸೇರಿದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯಗಳನ್ನು ಸಾರ್ವಜನಿಕರಿಗೆ ಅಂತರ್ಜಾಲದಲ್ಲೇ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ನೂತನವಾಗಿ ‘ಕಾವೇರಿ ಆನ್ಲೈನ್’ ಸೇವೆಯನ್ನು ಆರಂಭಿಸಿದ್ದಾರೆ.
ಬೆಂಗಳೂರು : ಸ್ಥಿರಾಸ್ತಿಗಳ ವ್ಯವಹಾರಗಳು ಸೇರಿದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾರ್ಯಗಳನ್ನು ಸಾರ್ವಜನಿಕರಿಗೆ ಅಂತರ್ಜಾಲದಲ್ಲೇ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ನೂತನವಾಗಿ ‘ಕಾವೇರಿ ಆನ್ಲೈನ್’ ಸೇವೆಯನ್ನು ಶುಕ್ರವಾರದಿಂದ ಜಾರಿಗೊಳಿಸಲಾಗಿದೆ. ಈ ಪ್ರಕಾರ, ಸ್ಥಿರಾಸ್ತಿಗಳ ಋುಣಭಾರ ಪ್ರಮಾಣ ಪತ್ರ (ಎನ್ಕಂಬರನ್ಸ್ ಸರ್ಟಿಫಿಕೇಟ್- ಇ.ಸಿ.)/ ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿಗಳು ಆನ್ಲೈನ್ನಲ್ಲೇ ಲಭ್ಯವಾಗಲಿವೆ. ದಸ್ತಾವೇಜಿನ ನೋಂದಣಿಗೆ ಮುಂಗಡ ಕಾಲ ನಿಗದಿಪಡಿಸುವಿಕೆಯೂ ಆನ್ಲೈನ್ನಲ್ಲೇ ಸಾಧ್ಯವಾಗಲಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಭಿವೃದ್ಧಿ ಪಡಿಸಿರುವ ‘ಕಾವೇರಿ ಆನ್ಲೈನ್’ ಸೇವೆಗೆ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಆಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ ಸೇರಿದಂತೆ ಸ್ಥಿರಾಸ್ತಿಗಳ ವ್ಯವಹಾರಗಳನ್ನು ಇಲಾಖೆಯು ನಿರ್ವಹಿಸುತ್ತದೆ. ಸರ್ಕಾರ ನೀಡುವ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗಬಾರದು ಎಂಬ ಉದ್ದೇಶದಿಂದ ಇಂತಹ ಸೇವೆಗಳನ್ನು ಪರಿಚಯಿಸಲಾಗುತ್ತಿದೆ. ಮುಂದಿನ ದಿನದಲ್ಲಿ ತಂತ್ರಜ್ಞಾನದ ನೆರವಿನಿಂದ ಮತ್ತಷ್ಟುಪಾರದರ್ಶಕ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಸಾರ್ವಜನಿಕರು ನೋಂದಣಿಗೆ ಸಂಬಂಧಿಸಿದ ಕೆಲಸಗಳನ್ನು ಕಚೇರಿಗೆ ಬಂದು ಮಾಡುವ ಬದಲು ಆನ್ಲೈನ್ ಮೂಲಕವೇ ಮಾಡಬಹುದಾಗಿದೆ. ಸ್ಥಿರಾಸ್ತಿಗಳ ಋುಣಭಾರ, ಪ್ರಮಾಣ ಪತ್ರ ನೋಂದಣಿ ಇತರೆ ಕೆಲಸಗಳಿಗೆ ಆನ್ಲೈನ್ ಮೂಲಕವೇ ಅಗತ್ಯ ದಾಖಲೆಗಳನ್ನು ನೀಡಿ ನೊಂದಣಿ ಮಾಡಿಕೊಳ್ಳಬಹುದಾಗಿದೆ. ರಾಜ್ಯದ ಜನರಿಗೆ ಈ ಯೋಜನೆಯು ಹೆಚ್ಚು ಉಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟಅವರು, ರೈತರ ಸಾಲಮನ್ನಾ ವಿಚಾರದಲ್ಲಿ ಅಗತ್ಯ ಮಾಹಿತಿ ಕಲೆಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ ಪಾತ್ರವು ಸಹ ಪ್ರಮುಖವಾಗಿದೆ. ಸೆಲ್ಗಳನ್ನು ಸ್ಥಾಪಿಸಿ ಸರ್ಕಾರ ಮತ್ತು ರೈತರ ನಡುವೆ ಇರುವ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಜನರಿಗೆ ಸೌಲಭ್ಯ ಕಲ್ಪಿಸಲು ಇ-ಸೇವೆ ಅನುಕೂಲವಾಗಲಿದೆ ಎಂದರು.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ರೈತರ ಸಾಲಮನ್ನಾ ಯೋಜನೆಯ ಮಾಹಿತಿಯನ್ನು ಕೂಡ ಆನ್ಲೈನ್ನಲ್ಲಿ ಕ್ರೋಡೀಕರಿಸಲಾಗುತ್ತಿದೆ. ಇದರಿಂದ ಯೋಜನೆಯ ಫಲ ನೇರವಾಗಿ ಅರ್ಹರಿಗೆ ಲಭ್ಯವಾಗಲಿದೆ. ಕಾವೇರಿ ಆನ್ಲೈನ್ ಸೇವೆಯಲ್ಲಿ ಒಂಭತ್ತು ಸೇವೆಗಳು ಸಿಗಲಿವೆ. ಸರಿಯಾದ ಸಮಯದಲ್ಲಿ ಪಾರದರ್ಶಕವಾಗಿ ಕ್ಷಿಪ್ರಗತಿಯಲ್ಲಿ ಸೇವೆಗಳು ದೊರಕುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅವ್ಯವಹಾರ, ಭ್ರಷ್ಟಾಚಾರ ಕಡಿಮೆಯಾಗಲಿದೆ. ನಾಗರಿಕರಿಗೆ ಅನುಕೂಲವಾಗುವಂತೆ ಆಡಳಿತದಲ್ಲಿ ಮತ್ತಷ್ಟುಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವರಾದ ಆರ್.ರೋಷನ್ಬೇಗ್, ಎಚ್.ಎಂ.ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ ಭೋಜೇಗೌಡ, ಮುದ್ರಾಂಕ ಇಲಾಖೆಯ ಆಯುಕ್ತ ತ್ರಿಲೋಕ್ ಚಂದ್ರ ಇತರರು ಉಪಸ್ಥಿತರಿದ್ದರು.
ಕಾವೇರಿ ಆನ್ಲೈನ್ನ ಸೌಲಭ್ಯಗಳು
- ಸ್ಥಿರಾಸ್ತಿಗಳ ಋುಣಭಾರ ಪ್ರಮಾಣ ಪತ್ರ/ ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿ ಪೂರೈಸುವುದು
- ಸ್ಥಿರಾಸ್ತಿಗಳ ಮೌಲ್ಯ ಮತ್ತು ಮುದ್ರಾಂಕ ಶುಲ್ಕಗಳ ಲೆಕ್ಕ ಹಾಕುವುದು
- ಸಾರ್ವಜನಿಕರಿಂದ ನೋಂದಣಿ ಪೂರ್ವ ಡೇಟಾ ಎಂಟ್ರಿ
- ದಸ್ತಾವೇಜಿನ ನೋಂದಣಿಗೆ ಮುಂಗಡ ಕಾಲ ನಿಗದಿ ಪಡಿಸುವಿಕೆ
- ಉಪನೋಂದಣಿ ಕಚೇರಿಯ ಗುರುತಿಸುವುದು
- ವಿವಾಹ ನೋಂದಣಿ ಕಚೇರಿಯ ಗುರುತಿಸುವುದು
- ಕೃಷಿ ಸಾಲಗಳಿಗೆ ಸಂಬಂಧಿಸಿದ ಡಿಕ್ಲರೇಷನ್ ಮತ್ತು ಸಾಲ ತೀರುವಳಿ ಪತ್ರಗಳ ಫೈಲಿಂಗ್ ಮಾಡುವುದು
- ಮೌಲ್ಯ ಎಂಬ ಹೆಸರಿನ ಮೊಬೈಲ್ ಆ್ಯಪ್
- ಆನ್ಲೈನ್ ಇ-ಸ್ಟಾಂಪ್ ಮುದ್ರಾಂಕ ಕಾಗದ