ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಾ? ಯಡಿಯೂರಪ್ಪ ಪ್ರತಿಕ್ರಿಯೆ
ಪೆಟ್ರೋಲ್, ಡೀಸೆಲ್ ಸೆಸ್ ಕಡಿಮೆ ಮಾಡಲ್ಲ| ಏನೇ ಮಾಡಿದರೂ ಕೇಂದ್ರವೇ ಮಾಡಬೇಕು| ಕಳೆದ ಸಲಕ್ಕಿಂತ ಬಜೆಟ್ ಗಾತ್ರ ಹೆಚ್ಚಳ| ಮಹಿಳೆಯರಿಗೆ ಹೆಚ್ಚು ಆದ್ಯತೆ, ಕೃಷಿ-ರೈತರಿಗೂ ಒತ್ತು: ಸಿಎಂ ಯಡಿಯೂರಪ್ಪ|
ಬೆಂಗಳೂರು(ಮಾ.06): ‘ಪೆಟ್ರೋಲ್, ಡಿಸೇಲ್ ದರ ಹೆಚ್ಚಳದಿಂದ ಜನ ಹೈರಾಣಾಗಿರುವ ಹಿನ್ನೆಲೆಯಲ್ಲಿ ಹೊಸ ತೆರಿಗೆ ಇರುವುದಿಲ್ಲ. ಆದರೆ, ಪೆಟ್ರೋಲ್ ಮೇಲಿನ ಸೆಸ್ ಕಡಿಮೆ ಮಾಡುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ, ಇತರ ಕೆಲವು ರಾಜ್ಯಗಳ ರೀತಿ ರಾಜ್ಯದಲ್ಲಿ ಪೆಟ್ರೋಲ್ ದರ ಇಳಿವುದುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ.
ನಗರದ ಖಾಸಗಿ ಹೊಟೇಲ್ನಲ್ಲಿ ಮಾಧ್ಯಮದವರ ಜತೆ ಅನೌಪಚಾರಿಕ ಚರ್ಚೆ ನಡೆಸಿದ ಅವರು, ಎಂದು ಮಾಹಿತಿ ನೀಡಿದರು. ‘ಪೆಟ್ರೋಲ್ ಮೇಲಿನ ಸೆಸ್ ಕಡಿಮೆ ಮಾಡುವುದಿಲ್ಲ. ಏನೇ ಮಾಡುವುದಿದ್ದರೂ ಕೇಂದ್ರ ಸರ್ಕಾರವೇ ಮಾಡಬೇಕು’ ಎಂದರು.
ಇನ್ನು ಬಜೆಟ್ ಬಗ್ಗೆ ಮಾತನಾಡಿದ ಅವರು, ‘ಕೋವಿಡ್ನಿಂದಾಗಿ ರಾಜ್ಯದ ಆರ್ಥಿಕತೆ ಕುಸಿತಗೊಂಡಿದ್ದರೂ ಈ ಬಾರಿ ಕಳೆದ ಬಾರಿಗಿಂತ ಬಜೆಟ್ ಗಾತ್ರ ಹೆಚ್ಚಾಗಿರಲಿದೆ. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಕೃಷಿ ಕ್ಷೇತ್ರ ಮತ್ತು ರೈತರಿಗೂ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ’ ಎಂದರು.
‘ಬಜೆಟ್ ಸಿದ್ಧತೆ ಪೂರ್ಣವಾಗಿದ್ದು, ಶನಿವಾರದಿಂದ ಬಜೆಟ್ ಪ್ರತಿ ಮುದ್ರಣವಾಗಲಿದೆ. ಹಣಕಾಸು ಪರಿಸ್ಥಿತಿ ಸುಧಾರಣೆಯಾಗಿದೆ. ಉತ್ತಮ ಬಜೆಟ್ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲಾ ಇಲಾಖೆಯ ಜತೆ ಸಾಕಷ್ಟುಚರ್ಚೆಯಾದ ಬಳಿಕ ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಿದ್ದು, ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಕೆಲಸ ಸಹ ಮಾಡಲಾಗಿದೆ, ನೀರಾವರಿ ಕ್ಷೇತ್ರಕ್ಕೂ ಆದ್ಯತೆ ನೀಡಲಾಗಿದೆ’ ಎಂದರು.
ಪೆಟ್ರೋಲ್-ಡೀಸೆಲ್ನ ಹೆಚ್ಚುವರಿ ಸೆಸ್ ಕಡಿತ; ಪ್ರತಿ ಲೀಟರ್ ಮೇಲೆ 5 ರೂಪಾಯಿ ಇಳಿಕೆ!
‘ಎಲ್ಲರ ಸಲಹೆ ಪಡೆದು ಹಣಕಾಸು ಇತಿಮಿತಿಯಲ್ಲಿ ಏನೇನು ಸಾಧ್ಯವೋ ಅಷ್ಟುಮಾಡಿದ್ದೇನೆ. ಕೊರೋನಾ ಕಾರಣದಿಂದ 6-7 ತಿಂಗಳು ತೆರಿಗೆ ಸಂಗ್ರಹ ಕುಸಿತವಾಯಿತು. 5-6 ಸಾವಿರ ಕೋಟಿ ರು. ಕೊರೋನಾಗೆ ಖರ್ಚಾಯಿತು. ಆದರೂ ಕಳೆದ ಬಜೆಟ್ಗಿಂತಲೂ ಉತ್ತಮ ಬಜೆಟ್ ಕೊಡುವ ಪ್ರಯತ್ನ ಮಾಡಿದ್ದೇನೆ. ಹೆಚ್ಚು ಸಾಲ ಪಡೆಯಲು ಕೇಂದ್ರ ಅವಕಾಶ ನೀಡಿದ್ದು, ಅದನ್ನು ಬಳಸಿಕೊಂಡು ಬಜೆಟ್ ಗಾತ್ರ ಹೆಚ್ಚಿಸುತ್ತಿದ್ದೇನೆ. ಪ್ರತಿ ಜಿಲ್ಲೆಗೆ ಎರಡಾದರೂ ವಿಶೇಷ ಕಾರ್ಯಕ್ರಮ ಕೊಡುತ್ತಿದ್ದೇವೆ. 31 ಜಿಲ್ಲೆಗೂ ಆದ್ಯತೆಗೂ ನೀಡಲಿದ್ದೇವೆ’ ಎಂದು ಹೇಳಿದರು.
7-8 ತಿಂಗಳಲ್ಲಿ ಬೆಂಗಳೂರು ಚಿತ್ರಣ ಬದಲಾಗಲಿದ್ದು, ಅದಕ್ಕೆ ಪೂರಕ ಕಾರ್ಯಕ್ರಮ ಬಜೆಟ್ನಲ್ಲಿ ರೂಪಿಸಿದ್ದೇವೆ. ರಾಜಕಾಲುವೆ, ರಸ್ತೆ ಸೇರಿ ಎಲ್ಲದಕ್ಕೂ ಒತ್ತು ನೀಡಲಾಗಿದೆ. ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿ ಕ್ರಮ ಕೈಗೊಂಡು ವಿಶೇಷ ಕಾರ್ಯಕ್ರಮಗಳ ಘೋಷಣೆ ಮಾಡುತ್ತೇನೆ. ಕಳೆದ ಬಾರಿಗಿಂತ ಒಳ್ಳೆಯ ಬಜೆಟ್ ಮಂಡಿಸಲಾಗುವುದು. ಹಿಂದಿನ ಯಾವುದೇ ಕಾರ್ಯಕ್ರಮ ನಿಲ್ಲಿಸುವುದಿಲ್ಲ. ಆದ್ಯತೆ ಮೇಲೆ ಹಣಕಾಸು ಲಭ್ಯತೆ ನೋಡಿಕೊಂಡು ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದರು.