ಕಲ್ಯಾಣ ಕರ್ನಾಟಕಕ್ಕೆ .5000 ಕೋಟಿಗೆ ಸಿಎಂ ಮೊರೆ ಕಲ್ಯಾಣ ಕರ್ನಾಟಕ ಜಿಲ್ಲೆಗಳು ದೇಶದಲ್ಲಿಯೇ ಹಿಂದುಳಿದಿವೆ ಎಂದು ಮನವರಿಕೆ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ
ಬೆಂಗಳೂರು(ಫೆ.08): ರಾಜ್ಯದ ಕಲ್ಯಾಣ ಕರ್ನಾಟಕ(Kalyana Karnataka) ಪ್ರದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳಡಿ ವಿಶೇಷವಾಗಿ ಆ ಭಾಗಕ್ಕೆ 5,030 ಕೋಟಿ ರು. ಅನುದಾನ ಒದಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala sitharaman) ಅವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ನವದೆಹಲಿಯಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ವೇಳೆ ಈ ಬಗ್ಗೆ ಮನವಿ ಸಲ್ಲಿಸಿದರು. ಇತ್ತೀಚೆಗೆ ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ರಾಜ್ಯಗಳ ಮಂಡಳಿ ಸಭೆಯಲ್ಲಿ ಚರ್ಚಿಸಿದಂತೆ ಆಂಧ್ರಪ್ರದೇಶವು ತನ್ನ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸುವಂತೆ ಮನವಿ ಮಾಡಿತ್ತು. ಅಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ದೇಶದಲ್ಲಿಯೇ ಹಿಂದುಳಿದ ಜಿಲ್ಲೆಗಳ ಸಾಲಿನಲ್ಲಿ ಸೇರಿವೆ. 371(ಜೆ) ವಿಧಿಯನ್ವಯ ಸಂವಿಧಾನ ತಿದ್ದುಪಡಿಯ ಮೂಲಕ ಈ ಭಾಗಕ್ಕೆ ವಿಶೇಷ ಸ್ಥಾನ ನೀಡಲಾಗಿದ್ದು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಒದಗಿಸಲಾಗಿದೆ. ಆದರೆ ಈ ಭಾಗವು ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿರುವುದರಿಂದ ವಿಶೇಷ ಗಮನ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
14000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭ ಎಂದ ಬೊಮ್ಮಾಯಿ
ನೀತಿ ಆಯೋಗದ(Niti Ayog) ಬಹು ಆಯಾಮದ ಬಡತನ ಸೂಚ್ಯಂಕದಲ್ಲಿಯೂ ಈ ಜಿಲ್ಲೆಗಳು ಹಿಂದುಳಿದಿರುವುದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಡಿ 5030 ಕೋಟಿ ರು. ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.
ಕಲ್ಯಾಣ ಕರ್ನಾಟಕ ಮಂಡಳಿಗೆ 731 ಕೋಟಿ ನೆರವು ಬಿಡುಗಡೆ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2021-22 ನೇ ಸಾಲಿನ ಮೂರು ಮತ್ತು ನಾಲ್ಕನೇ ಕಂತಿನ 731.03 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಣ ಬಿಡುಗಡೆಗೆ ಆದೇಶ ಹೊರಡಿಸಿದೆ.
2021-22ನೇ ಸಾಲಿನ ಬಜೆಟ್ನಲ್ಲಿ 1,492 ಕೋಟಿ ರು. ಅನುದಾನ ಮೀಸಲಿಡಲಾಗಿತ್ತು. ಇದರಡಿ ಮೊದಲ ಕಂತಿನಲ್ಲಿ 373 ಕೋಟಿ ರು., 2ನೇ ಕಂತಿನಲ್ಲಿ 387 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಇದೀಗ 3 ಹಾಗೂ ನಾಲ್ಕನೇ ಕಂತಿನ ಹಣ ಬಿಡುಡೆಗೆ ಹಣಕಾಸು ಇಲಾಖೆ ಒಪ್ಪಿಗೆ ಪಡೆದು 731.03 ಕೋಟಿ ರು. ಬಿಡುಗಡೆ ಮಾಡಲಾಗಿದೆ.
Union Budget 2022: ರಾಯಚೂರು ಜಿಲ್ಲೆಗೆ ನಿರಾಸೆ ಮೂಡಿಸಿದ ಕೇಂದ್ರ ಬಜೆಟ್
ಈ ಹಣವನ್ನು ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಬಳಸಬೇಕು. ಅನುದಾನಕ್ಕೆ ಸಂಬಂಧಿಸಿದ ಬಳಕೆ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬೇಕು. ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಸಂಬಂಧಪಟ್ಟಕಾಮಗಾರಿಗಳಿಗೆ ಮಾತ್ರ ಬಳಸಬೇಕು ಎಂದು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ.
ಕಲ್ಯಾಣ ಕರ್ನಾಟಕದ ನೌಕರರ ಬಡ್ತಿಗೆ ವಂಚನೆ
ರಾಜ್ಯ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಎಂಜಿನಿಯರಿಂಗ್ ಕಚೇರಿಯಲ್ಲಿ 371ಜೆ ಅನ್ವಯ ಪ್ರಥಮ ದರ್ಜೆ ಸಹಾಯಕರು, ಶೀಘ್ರ ಲಿಪಿಗಾರರ ಹುದ್ದೆಗಳನ್ನು ಸ್ಥಳೀಯ ಹಾಗೂ ಮಿಕ್ಕುಳಿದ ವೃಂದ ರಚಿಸದೆ ಬಡ್ತಿ ನೀಡುತ್ತಿರುವುದನ್ನು ತಡೆ ಹಿಡಿಯಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸರ್ಕಾರದ ಕಾರ್ಯದರ್ಶಿಗೆ ಸೋಮವಾರ ಪತ್ರ ಬರೆದಿರುವ ಅವರು, ಮಿಕ್ಕುಳದ ವೃಂದದ ಜೇಷ್ಠತಾ ಪಟ್ಟಿತಯಾರಿಸದೆ ಇರುವುದು ಕಲ್ಯಾಣ ಕರ್ನಾಟಕ ಭಾಗದ ನೌಕರರಿಗೆ ಸಂವಿಧಾನ ಬದ್ಧವಾಗಿರುವ ಸೌಲಭ್ಯದಿಂದ ವಂಚಿತಗೊಳಿಸಿದಂತೆ ಆಗುತ್ತದೆ ಎಂದಿದ್ದಾರೆ. 371ಜೆ ಅಡಿಯಲ್ಲಿ ರಚಿಸಲಾದ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ ಕರ್ನಾಟಕಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ-2013ರ ನಿಯಮಗಳಂತೆ ನೇಮಕಾತಿ, ಬಡ್ತಿಯಲ್ಲಿ ವೃಂದಗಳ ಆಧಾರದಲ್ಲಿ ಮೀಸಲಾತಿ ನಿಗದಿತಗೊಳಿಸುವುದು, ಹುದ್ದೆಗಳ ವರ್ಗೀಕರಣ ಹಾಗೂ ಪ್ರತ್ಯೇಕ ಜೇಷ್ಠತೆ ರಚಿಸುವುದು ಪ್ರತಿಯೊಂದು ಇಲಾಖೆಯ ಕರ್ತವ್ಯವಾಗಿದೆ. ಆದರೆ ಈ ಪ್ರಕರಣದಲ್ಲಿ ಜಲಸಂಪನ್ಮೂಲ ಇಲಾಖೆಯು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ 371ಜೆ ನಿಯಮ ಜಾರಿಯಾಗಿ 7 ವರ್ಷ ಕಳೆದರು ವೃಂದಗಳ ವರ್ಗೀಕರಣ, ನೌಕರರನ್ನು ಸ್ಥಳೀಯ ವೃಂದಕ್ಕೆ ಹಂಚಿಕೆ ಮಾಡದೇ ಇರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಆರೋಪಿಸಿದ್ದಾರೆ.
