ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಾಡಪ್ರಭು ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮತ್ತು ಥೀಮ್‌ ಪಾರ್ಕ್ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಗುಣಗಾನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು (ಅ.22): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಾಡಪ್ರಭು ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮತ್ತು ಥೀಮ್‌ ಪಾರ್ಕ್ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರ ಗುಣಗಾನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಬೊಮ್ಮಾಯಿ ಮಾತನಾಡಿ, ಯೋಜನೆಯ ರೂಪುರೇಷೆ, ವಿನ್ಯಾಸ, ಪ್ರಗತಿ ಎಲ್ಲವನ್ನೂ ಹೊಣೆಗಾರಿಯಿಂದ ನಿರ್ವಹಿಸಿದ ಕೀರ್ತಿ ಸಚಿವ ಅಶ್ವತ್ಥನಾರಾಯಣ ಅವರಿಗೆ ಸಲ್ಲುತ್ತದೆ. ಅವರು ಇದಕ್ಕಾಗಿ ಹಗಲಿರುಳು ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಯಡಿಯೂರಪ್ಪ ಮಾತನಾಡಿ, ನಾನು ಮೂರು ವರ್ಷಗಳ ಹಿಂದೆ ಮುಖ್ಯಮಂತ್ರಿಯಾದ ತಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಕೆಂಪೇಗೌಡ ಅವರಿಗೆ ಸೂಕ್ತ ಗೌರವ ಸಲ್ಲಿಸುವ ಇಂತಹದ್ದೊಂದು ಯೋಜನೆಯನ್ನು ಪ್ರಸ್ತಾಪಿಸಿದರು. ಅವರ ಈ ಉತ್ಸಾಹ, ಕಲ್ಪನೆಗಳು ಮತ್ತು ಪರಿಶ್ರಮಗಳು ಮೇಲ್ಪಂಕ್ತಿ ಹಾಕಿಕೊಟ್ಟಿವೆ ಎಂದರು.

ಕೆಂಪೇಗೌಡ ಥೀಮ್‌ ಪಾರ್ಕ್‌ಗೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಜಾಗತಿಕ ಸ್ತರದಲ್ಲಿ ಕೆಂಪೇಗೌಡ ವಿರಾಜಮಾನ: ವಿಜಯನಗರದ ಅರಸ ಕೃಷ್ಣದೇವಾಯರಿಂದ ಸ್ಫೂರ್ತಿ ಪಡೆದು ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರು ಇಂದು ಜಾಗತಿಕ ಸ್ತರದಲ್ಲಿ ವಿರಾಜಮಾನವಾಗಿದೆ. ಇಂತಹ ಕೆಂಪೇಗೌಡ ಅವರು ಬೆಂಗಳೂರಿಗೆ ಮಾತ್ರವಲ್ಲ, ಇಡೀ ಕರ್ನಾಟಕದ ನಾಯಕರಾಗಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಮಣ್ಣು ಪಂಚಭೂತಗಳಲ್ಲಿ ಒಂದಾಗಿದೆ. ರಾಜ್ಯದ ಪ್ರತಿಯೊಂದು ಹಳ್ಳಿಯ ಕೆರೆಕಟ್ಟೆ, ಕಲ್ಯಾಣಿ, ನದಿ ಪುಷ್ಕರಿಣಿ, ತೊರೆಗಳಿಂದ ಕೆಂಪೇಗೌಡರ ಗೌರವಾರ್ಥ ಸಂಗ್ರಹಿಸಲಾಗುತ್ತಿದೆ. ಇದರ ಹಿಂದೆ ಇಡೀ ಕರ್ನಾಟಕವೇ ಒಂದು ಎನ್ನುವ ಉದಾತ್ತ ಸಂದೇಶ ಇದೆ ಎಂದು ಬಣ್ಣಿಸಿದರು.

ಅಭಿಯಾನವು ನ.7ರವರೆಗೆ ನಡೆಯಲಿದ್ದು, ಇದನ್ನು ಕೆಂಪೇಗೌಡ ಥೀಮ್‌ ಪಾರ್ಕ್ ಮತ್ತು ಪ್ರತಿಮೆಯ ನಾಲ್ಕು ಗೋಪುರಗಳಿಗೆ ಬಳಸಿಕೊಳ್ಳಲಾಗುವುದು. ಬೆಂಗಳೂರು ಆ ಕಾಲದಿಂದಲೂ ರಚನಾತ್ಮಕ ಚಟುವಟಿಕೆಗಳಿಗೆ ಮತ್ತು ವಾಣಿಜ್ಯೋದ್ಯಮಕ್ಕೆ ಹೆಸರಾಗಿದೆ. ಯಶವಂತಪುರ, ರಾಜಾಜಿನಗರ ಮುಂತಾದ ಉತ್ತರ ಭಾಗಗಳಲ್ಲಿ ಉದ್ಯಮ ಸಂಸ್ಕೃತಿ ಮೊದಲಿನಿಂದಲೂ ಬೇರೂರಿದೆ. ಇದಕ್ಕೆ ಕಾರಣಕರ್ತರಾದ ಕೆಂಪೇಗೌಡರಿಗೆ ಇಷ್ಟುತಡವಾಗಿಯಾದರೂ ಗೌರವ ಸಲ್ಲುತ್ತಿರುವುದು ಸಮಾಧಾನದ ಸಂಗತಿಯಾಗಿದೆ ಎಂದರು.

ನ.11ಕ್ಕೆ ಬೆಂಗ್ಳೂರಿಗೆ ಪ್ರಧಾನಿ ಮೋದಿ: ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮಕ್ಕೆ ಸಿಎಂ ಸೂಚನೆ

ಪ್ರತಿಮೆ ಸ್ಥಾಪನೆಯ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಂಕಲ್ಪ ಶಕ್ತಿ ಇದೆ. ಇದಕ್ಕೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಹೆಗಲು ನೀಡಿದ್ದಾರೆ. ಇದರಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿರುವ ತೃಪ್ತಿ ನನ್ನದಾಗಿದೆ. ಇನ್ನು ಮುಂದೆ ಇದು ಬೆಂಗಳೂರಿನ ಹೆಗ್ಗುರುತಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಾನು ಈ ಯೋಜನೆ ಸಾಕಾರಕ್ಕೆ ಜೋಡೆತ್ತುಗಳಂತೆ ಹೆಗಲು ಕೊಟ್ಟಿದ್ದೇವೆ. ಜತೆಗೆ ಯಡಿಯೂರಪ್ಪನವರು ಹಾಕಿದ ಶ್ರೀಕಾರದ ಬಲವೂ ಇದೆ. ಕೆಂಪೇಗೌಡರ ಸಂದೇಶವನ್ನು ಜನರಿಗೆ ತಲುಪಿಸಲು ಮುಂದೆಯೂ ನಾವು ಶ್ರಮಿಸಲಿದ್ದೇವೆ ಎಂದು ತಿಳಿಸಿದರು.