ಚಿತ್ರದುರ್ಗದಲ್ಲಿ ಕೊಲೆಯಾದ ರೇಣುಕಾಸ್ವಾಮಿ ಅವರ ಮಗನಿಗೆ ಶಶಿಧರ ಸ್ವಾಮಿ ಎಂದು ನಾಮಕರಣ ಮಾಡಲಾಗಿದೆ. ಮಗನಿಲ್ಲದ ನೋವಿನಲ್ಲಿ ತಾಯಿ ರತ್ನಪ್ರಭಾ ಕಣ್ಣೀರಿಟ್ಟಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ರೇಣುಕಾಸ್ವಾಮಿ ತಂದೆ ಆಗ್ರಹಿಸಿದ್ದಾರೆ.

ಚಿತ್ರದುರ್ಗ (ಫೆ.23): ಗೋಡೆ ಮೇಲೆ ಫೋಟೋವಾಗಿ ಹಾರ ಹಾಕಿಸಿಕೊಂಡಿರುವ ಅಪ್ಪ ರೇಣುಕಾಸ್ವಾಮಿ ಮುಂದೆ ಮಗನಿಗೆ ನಾಮಕರಣ. ಮಗನನ್ನು ನೆನೆನು ಗೋಡಗೆ ಒರಗಿಕೊಂಡು ರೇಣುಕಾಸ್ವಾಮಿಯ ತಾತಿ ರತ್ನಪ್ರಭಾ ಅವರು ಗಳಗಳನೇ ಕಣ್ಣೀರು ಹಾಕಿದ್ದಾರೆ.

ಕನ್ನಡ ಚಿತ್ರರಂಗದ ನಟ ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆಯಾಗಿದ್ದು, ಇದೀಗ ಎಲ್ಲ ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಆರಾಮವಾಗಿದ್ದಾರೆ. ಆದರೆ, ಇಲ್ಲಿ ರೇಣುಕಾಸ್ವಾಮಿ ಅನುಪಸ್ಥಿತಿಯಲ್ಲಿ ಆತನ ಮಗನಿಗೆ ಮನೆಯವರು ಶಶಿಧರ ಸ್ವಾಮಿ ಎಂದು ನಾಮಕರಣ ಮಾಡಿದ್ದಾರೆ. ಆದರೆ, ರೇಣುಕಾಸ್ವಾಮಿಯ ತಾಯಿ ಮಗ ಇಲ್ಲಿದಿರವುದನ್ನು ನೆನೆದು ಕ್ಯಾಮೆರಾ ನೋಡಿದಾಕ್ಷಣ ಗೋಡೆಗೆ ಒರಗಿ ಕಣ್ಣೀರು ಹಾಕಿದ್ದಾರೆ.

ಚಿತ್ರದುರ್ಗದಲ್ಲಿ ಇಂದು ರೇಣುಕಾಸ್ವಾಮಿ ಪುತ್ರನಿಗೆ ಶಶಿಧರಸ್ವಾಮಿ ಎಂದು ನಾಮಕರಣ ಮಾಡಲಾಗಿದೆ. ಈ ನಾಮಕರಣ ಶಾಸ್ತ್ರದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಲು ಬಂದ ರೇಣುಕಾಸ್ವಾಮಿಯ ತಾಯಿ ರತ್ನ ಪ್ರಭಾ ಅವರು ಟಿವಿ ಕ್ಯಾಮೆರಾ ಕಾಣುತ್ತಿದ್ದಂತೆ ತನ್ನ ಮಗನನ್ನು ನೆನೆದು ಗೋಡೆಗೆ ಒರಗಿ ಕಣ್ಣೀರು ಹಾಕಿದ್ದಾರೆ. ನಂತರ ಸಮಾಧಾನ ಮಾಡಿಕೊಂಡು ಮಾತನಾಡಿದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರು, ನನ್ನ ಪುತ್ರ ರೇಣುಕಾಸ್ವಾಮಿಯೇ ಹುಟ್ಟಿ ಬಂದಿದ್ದಾನೆ. ಆತ ಬದುಕಿದ್ದರೆ ಇಂದು ಇನ್ನೂ ಸಂಭ್ರಮದಿಂದ ನಾಮಕರಣ ಕಾರ್ಯಕ್ರಮ ಮಾಡುತ್ತಿದ್ದೆವು ಎಂದು ಹೇಳಿದರು.

ರೇಣುಕಾಸ್ವಾಮಿ ಇದ್ದಿದ್ದರೆ ದೊಡ್ಡ ಸಭಾಂಗಣದಲ್ಲಿ ನನ್ನ ಮೊಮ್ಮಗನಿಗೆ ನಾಮಕರಣ ಮಾಡಿ ಸಂಭ್ರಮಿಸುತ್ತಿದ್ದೆವು. ರೇಣುಕಾಸ್ವಾಮಿಗೆ ಪುತ್ರ ಹುಟ್ಟಿ ಬಂದಿದ್ದು ಖುಷಿ ಆಗಿದೆ. ಸೊಸೆ, ಮೊಮ್ಮಗನನ್ನು ಮನೆ ತುಂಬಿಸಿಕೊಂಡಿದ್ದು ಖುಷಿ ಆಗಿದೆ. ಮಗು ನೋಡಿ ಸಂತೋಷ ಆಗಿದೆ, ಒಳಗೆ ದುಃಖ ಇದ್ದೇ ಇದೆ ಎಂದು ರೇಣುಕಾಸ್ವಾಮಿಯನ್ನು ನೆನೆದು ಅವರ ತಾಯಿ ರತ್ನಪ್ರಭಾ ಕಣ್ಣೀರಿಟ್ಟರು.

ಇದನ್ನೂ ಓದಿ: ದರ್ಶನ್ ಮನೆಗೆ ಹೋಗಿದ್ದೆವು ಎಂಬುದು ಸುಳ್ಳು: ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು

ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಮಾತನಾಡಿ, ಹರಿಹರದಿಂದ ನನ್ನ ಸೊಸೆ ಸಹನಾ, ಮೊಮ್ಮಗ ಮನೆಗೆ ಬಂದಿದ್ದಾರೆ. ಮಗುವಿಗೆ 5 ತಿಂಗಳಲ್ಲಿದ್ದು ಇಂದು ನಾಮಕರಣ ಶಾಸ್ತ್ರ ಮಾಡಿದ್ದೇವೆ. ನಮ್ಮ ಸಂಪ್ರದಾಯದಂತೆ ನಾಮಕರಣ ಶಾಸ್ತ್ರ ಮಾಡಿದ್ದೇವೆ. ಶಶಿಧರ ಎಂದು ಮಗುವಿಗೆ ನಾಮಕರಣ ಮಾಡಿದ್ದೇವೆ. ಗುರುಗಳ ಆಶೀರ್ವಾದದಿಂದ ನಾಮಕರಣ, ಸಂಕ್ಷಿಪ್ತ ಕಾರ್ಯಕ್ರಮ. ಪುತ್ರ ರೇಣುಕಾಸ್ವಾಮಿಯೇ ಹುಟ್ಟಿಬಂದಷ್ಟು ಖುಷಿ ಆಗಿದೆ. ಸಂತೋಷ ಇದೆ, ಆದರೆ ಹಳೆಯ ಕಹಿ ಘಟನೆ ಮರೆಯಲು ಆಗದು. ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಸೊಸೆ, ಮೊಮ್ಮಗನ ಭವಿಷ್ಯ ರೂಪಿಸುವಲ್ಲಿ ನಮ್ಮೆಲ್ಲರ ಜವಬ್ದಾರಿಯಿದೆ. ಹೀಗಾಗಿ, ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸೊಸೆಗೆ ನೌಕರಿ ನೀಡಲು ಮನವಿ ಮಾಡಿದ್ದೇವೆ. ಸೊಸೆ ಸಹನಾ ಜೀವನಕ್ಕೆ ಆಧಾರ ನೀಡುವ ಕೆಲಸ ಆಗಬೇಕು. ಆದರೆ, ಸರ್ಕಾರಿ ಕೆಲಸದ ಬಗ್ಗೆ ಕಾನೂನಲ್ಲಿ ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ. ಪುನರ್ ಪರಿಶೀಲಿಸುವಂತೆ ನಾವು ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದೇವೆ. ಕಣ್ವಕುಪ್ಪೆ, ರಂಭಾಪುರಿ ಸಲಹೆ ಪಡೆದು ಇಂದು ನಾಮಕರಣ ಮಾಡಿದ್ದು, ನಿನ್ನೆ ನಮ್ಮ ಸಂಬಂಧಿಕರು ಕೊಟ್ಟೂರೇಶ್ವರನ ದರ್ಶನ ಪಡೆದು ಬಂದಿದ್ದಾರೆ ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಹೇಳಿದರು.

ಇದನ್ನೂ ಓದಿ: ನಟ ದರ್ಶನ್‌ಗೆ ಜಾಮೀನು: ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ, ರೇಣಕಾಸ್ವಾಮಿ ತಂದೆ