ಕಾಲ್ತುಳಿತ ದುರಂತದ ನಂತರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಕೆಎಸ್‌ಸಿಎ, ಸರ್ಕಾರ ನೇಮಿತ ತಜ್ಞರ ಸಮಿತಿಗೆ ಮಾಹಿತಿ ನೀಡಿದೆ. ವಿಸ್ತೃತ ಪ್ರವೇಶ ದ್ವಾರಗಳಂತಹ ಬದಲಾವಣೆಗಳನ್ನು ಪರಿಶೀಲಿಸಿದ ಸಮಿತಿ IPL ಆಯೋಜನೆಗೆ ಶೀಘ್ರದಲ್ಲೇ ಅನುಮತಿ ನೀಡುವ ನಿರೀಕ್ಷೆಯಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಶುಕ್ರವಾರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳ ಆಯೋಜನೆಗೆ ನಡೆಯುತ್ತಿರುವ ಸಿದ್ಧತೆ ಬಗ್ಗೆ ರಾಜ್ಯ ಸರ್ಕಾರ ನೇಮಿಸಿರುವ ತಜ್ಞರ ಸಮಿತಿಗೆ ಸಂಪೂರ್ಣ ಮಾಹಿತಿ ನೀಡಿತು.

Add Asianetnews Kannada as a Preferred SourcegooglePreferred

2025ರ ಜೂ.4ರಂದು ಆರ್‌ಸಿಬಿ ತಂಡದ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಮತ್ತೆ ಪಂದ್ಯಗಳ ಆಯೋಜನೆಗೆ ಸರ್ಕಾರ ನೇಮಿಸಿದ್ದ ನ್ಯಾ.ಕುನ್ಹಾ ಸಮಿತಿ ಹಲವು ಬದಲಾವಣೆಗಳನ್ನು ಮಾಡಲು ಶಿಫಾರಸು ಮಾಡಿತ್ತು. ಜೊತೆಗೆ ಕೆಎಸ್‌ಸಿಎನಲ್ಲಿ ಆಗಬೇಕಿರುವ ಬದಲಾವಣೆಗಳ ಮೇಲ್ವಿಚಾರಣೆಗೆ ಸರ್ಕಾರ, ಹಲವು ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಿರುವ ತಜ್ಞರ ಸಮಿತಿಯನ್ನೂ ರಚಿಸಿತ್ತು.

ಸಮಿತಿಯಿಂದ ಕೆಎಸ್‌ಸಿಎ ಕೈಗೊಂಡಿರುವ ಕೆಲಸಗಳ ಪರಿಶೀಲನೆ

ಈ ಸಮಿತಿ ಶುಕ್ರವಾರ ಕ್ರೀಡಾಂಗಣಕ್ಕೆ ಆಗಮಿಸಿ, ಕೆಎಸ್‌ಸಿಎ ಕೈಗೊಂಡಿರುವ ಕೆಲಸಗಳನ್ನು ಪರಿಶೀಲಿಸಿತು. ಈ ವೇಳೆ ಆರ್‌ಸಿಬಿ ಸಿಬ್ಬಂದಿ ಕೂಡ ಇದ್ದರು. ಕ್ರೀಡಾಂಗಣಕ್ಕೆ ಆಗಮಿಸುವ ಪ್ರೇಕ್ಷಕರ ಸುರಕ್ಷತೆಗಾಗಿ ಗೇಟ್‌ಗಳ ಸಂಖ್ಯೆ ಹೆಚ್ಚಿಸಿರುವ ಕೆಎಸ್‌ಸಿಎ, ಪ್ರವೇಶ ದ್ವಾರಗಳನ್ನು 9 ಮೀ.ಗೆ ವಿಸ್ತರಿಸಿದೆ. ಅಲ್ಲದೇ ಇನ್ನೂ ಹಲವು ಕ್ರಮಗಳನ್ನು ಕೈಗೊಂಡಿದೆ. ಎಲ್ಲದರ ಮಾಹಿತಿ ಪಡೆದಿರುವ ತಜ್ಞರ ಸಮಿತಿ, ಸೋಮವಾರ ಪಂದ್ಯಗಳ ಆಯೋಜನೆಗೆ ಅಧಿಕೃತವಾಗಿ ಹಸಿರು ನಿಶಾನೆ ತೋರುವ ನಿರೀಕ್ಷೆ ಇದೆ.

ಆರಂಭಿಕ 20 ಐಪಿಎಲ್‌ ಪಂದ್ಯಗಳ ವೇಳಾಪಟ್ಟಿ ಪ್ರಕಟ

ಈಗಾಗಲೇ ಐಪಿಎಲ್‌ನ ಆರಂಭಿಕ 20 ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಂಡಿದ್ದು ಉದ್ಘಾಟನಾ ಪಂದ್ಯದ ಆತಿಥ್ಯವನ್ನು ಬೆಂಗಳೂರಿಗೆ ನೀಡಲಾಗಿದೆ. ಅಲ್ಲದೇ ಮೊದಲ ಹಂತದಲ್ಲಿ ಏ.5ರಂದು ಮತ್ತೊಂದು ಪಂದ್ಯ ನಿಗದಿಯಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಬೇಕಿದೆ. ಹೀಗಾಗಿ, ಮುಂದಿನ ವಾರದಲ್ಲಿ ಕೆಎಸ್‌ಸಿಎ ಕ್ರೀಡಾಂಗಣವನ್ನು ಆರ್‌ಸಿಬಿಗೆ ಬಿಟ್ಟುಕೊಡಲಿದೆ.