'ಬುರ್ಖಾ ಧರಿಸಿದ್ರೆ ಸತ್ತ ಮೇಲೆ ಶವಕ್ಕೆ ಏನೂ ಆಗೋಲ್ಲ..' ಮಕ್ಕಳಿಗೆ ಶಾಲೆಯಲ್ಲೇ ವ್ಯವಸ್ಥಿತವಾಗಿ ಬ್ರೈನ್ ವಾಶ್? ವಿಡಿಯೋ ವೈರಲ್!

Synopsis
ಚಾಮರಾಜನಗರದ ಶಾಲೆಯೊಂದರಲ್ಲಿ ಚಿಕ್ಕ ಮಕ್ಕಳ ಬ್ರೈನ್ ವಾಶ್ ಮಾಡಲಾಗುತ್ತಿದೆ ಎಂಬ ವಿಡಿಯೋ ವೈರಲ್ ಆಗಿದೆ. ಮಕ್ಕಳಲ್ಲಿ ಧರ್ಮಾಂಧತೆ ತುಂಬಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಚಾಮರಾಜನಗರ (ಮಾ.24): ಶಾಲೆಗಳಲ್ಲಿ ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೆ ವ್ಯವಸ್ಥಿತವಾಗಿ ಬ್ರೈನ್ ವಾಶ್ ಮಾಡಲಾಗುತ್ತಿದೆಯಾ? ಏನೂ ಅರಿಯದ ಎಳೆವಯಸ್ಸಿನ ಮಕ್ಕಳ ಮೆದುಳಿನಲ್ಲಿ ಧರ್ಮಾಂಧತೆ, ಮೌಢ್ಯ ತುಂಬಲಾಗುತ್ತಿದೆಯಾ? ಚಾಮರಾಜನಗರ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ ಎನ್ನಲಾದ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಳೆವಯಸಿನ ಮಗುವಿನ ಮಾತು ಕೇಳಿದ್ರೆ ಎಂಥವರನ್ನು ಬೆಚ್ಚಿಬಿಳಿಸುತ್ತೆ ಅಆಇಈ ಎಬಿಸಿಡಿ, ಆಟ-ಪಾಠ ಅಂತ ಆಡುತ್ತಾ ಕಲಿಬೇಕಾದ ಈ ಚಿಕ್ಕಮಕ್ಕಳಿಗೆ ಧರ್ಮಾಂಧತೆ, ಮೌಢ್ಯ ತುಂಬಿದವರು ಯಾರು?
'ಬುರ್ಖಾ ಧರಿಸೋದ್ರಿಂದ ಸತ್ತಮೇಲೆ ಶವಕ್ಕೆ ಏನೂ ಆಗೋಲ್ಲ, ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜೊತೆಗೆ ನಿಮ್ಮ ದೇಹವನ್ನ ಹಾವು ಚೇಳು ತಿನ್ನುತ್ತವೆ' ಎಂಬ ಈ ಮಾತು ಹೇಳಿದ್ದು ವಯಸ್ಕ ಮಹಿಳೆಯಲ್ಲ ಬದಲಾಗಿ ಶಾಲೆಗೆ ಹೋಗುತ್ತಿರುವ ಚಿಕ್ಕ ಮಗು. ಚಾಮರಾಜನಗರ ಖಾಸಗಿ ಶಾಲೆಯೊಂದರ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಈ ಅಘಾತಕಾರಿ ನಡೆದಿದೆ ಎನ್ನಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ 'Karnataka Portfolio' ಅಕೌಂಟ್ ಬಳಕೆದಾರರು ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸದ್ದಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ, ಡಿಜಿಪಿಗೆ ಟ್ವಿಟ್ ಮೂಲಕ ದೂರು ನೀಡಿದ್ದಾರೆ.
ಟ್ವಿಟ್ನಲ್ಲಿ ಏನಿದೆ?
ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದ ವಾಸ್ತವ: ಇದು ಶಿಕ್ಷಣವೇ ಅಥವಾ ವ್ಯವಸ್ಥಿತವಾಗಿ ಬ್ರೈನ್ ವಾಶ್ ಮಾಡುವಿಕೆಯೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕರ್ನಾಟಕದ ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಏನು ಕಲಿಸುತ್ತಿದ್ದಾರೆ? ಇದು 4% ಮೀಸಲಾತಿ ನೀತಿಯ ನಿಜವಾದ ಉದ್ದೇಶವೇ? ಅಥವಾ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಟ್ಟ ₹1000 ಕೋಟಿ ಬಜೆಟ್ನ 'ಉತ್ತಮ' ಬಳಕೆ ಎನ್ನಬೇಕೆ? ಇಷ್ಟು ಚಿಕ್ಕ ವಯಸ್ಸಿನ ಮಕ್ಕಳು ಅದ್ಹೇಗೆ ಇತರ ಸಮುದಾಯದ ಮಹಿಳೆಯರ ವಿರುದ್ಧ ದ್ವೇಷವನ್ನು ಬೆಳೆಸಿಕೊಳ್ಳುವಂತೆ ಬ್ರೈನ್ ವಾಶ್ ಮಾಡಲಾಗಿದೆ? ತಮ್ಮ ಧರ್ಮದ ಮಹಿಳೆಯರು ಮಾತ್ರ ಸ್ವರ್ಗವನ್ನು ಪಡೆಯುತ್ತಾರೆ ಬೇರೆಯವರು ನರಕಕ್ಕೆ ಹೋಗುವುದು ಖಂಡಿತ' ಎಂದು ಹೇಗೆ ಮಾತನಾಡುತ್ತಾರೆ. ಈ ರೀತಿ ಬಾಲ್ಯದಲ್ಲೇ ಮಕ್ಕಳ ಮೆದಳಲ್ಲಿ ಧರ್ಮಾಂಧತೆ, ಮೌಢ್ಯತೆ ಏಕೆ ತುಂಬುತ್ತಾರೆ? ಇದರಿಂದ ಮುಂದಾಗುವ ತೊಂದರೆಗಳಿಗೆ ಯಾರು ಹೊಣೆ? ಸರ್ಕಾರವೇ? ಶಿಕ್ಷಣ ಇಲಾಖೆಯೇ? ಪೋಷಕರೇ? ಎಂದು ಪ್ರಶ್ನಿಸಿದ್ದಾರೆ.
ಈ ಘಟನೆ ಚಾಮರಾಜನಗರದ ಹುಡಾ ಪಬ್ಲಿಕ್ ಸ್ಕೂಲ್ನಲ್ಲಿ ನಡೆದ ವಿಜ್ಞಾನ ಪ್ರದರ್ಶನದಲ್ಲಿ ನಡೆದಿದೆ ಎಂದು ಬಳಕೆದಾರರು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಏನು ಕಲಿಸಲಾಗುತ್ತಿದೆ ಎಂಬ ಕಠೋರ ಸತ್ಯವನ್ನು ಈ ವಿಡಿಯೋ ಬಹಿರಂಗಗೊಳಿಸಿದೆ. ಶಾಲೆಗಳಲ್ಲಿ ಮಕ್ಕಳಿಗೆ ವೈಜ್ಞಾನಿಕ ಮನೋಭಾವ, ತರ್ಕಬದ್ಧ ಚಿಂತನೆ ಮತ್ತು ಸಾಮುದಾಯಿಕ ಸೌಹಾರ್ದತೆಯನ್ನು ಬೆಳೆಸುವ ಬದಲು ಧಾರ್ಮಿಕ ಉಗ್ರವಾದ ತುಂಬುವ ಸೆಂಟರ್ಗಳಾಗುತ್ತಿವೆ. ಇದು ಶಿಕ್ಷಣವಲ್ಲ, ಇದು ಮತಾಂಧತೆ. ಎಳೆವಯಸ್ಸಿನ ಮಕ್ಕಳು, ಯುವಕರನ್ನು ಈ ರೀತಿಯ ಧರ್ಮಾಂಧತೆ, ಒಡಕು ತುಂಬುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕಾರಣ ಕಾಂಗ್ರೆಸ್ ಸರ್ಕಾರದ ನಿರಂತರ ತುಷ್ಟೀಕರಣ ರಾಜಕೀಯ ಮತ್ತು ಕರ್ನಾಟಕ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಇಸ್ಲಾಮೀಕರಣದ ಪರಿಣಾಮವಾಗಿದೆ ಎಂದು ಗಂಭೀರ ಆರೋಪ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣದ ಮುಸುಕಿನಲ್ಲಿ ಉಗ್ರವಾದಿ ಬೇರು ಬೆಳೆಯಲು ಅವಕಾಶ ಮಾಡಿಕೊಟ್ಟಿದೆ. ಮಕ್ಕಳಿಗೆ ಜ್ಞಾನ ಮತ್ತು ನೈತಿಕ ಮೌಲ್ಯಗಳನ್ನು ನೀಡಬೇಕಾದ ಶಾಲೆಗಳು ದ್ವೇಷ ಮತ್ತು ವಿಭಜನೆಯನ್ನು ಉತ್ತೇಜಿಸುವ ಸೈದ್ಧಾಂತಿಕ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ಇದಕ್ಕಾಗಿ ತೆರಿಗೆದಾರರ ಹಣವನ್ನು ಖರ್ಚು ಮಾಡಬೇಕೆ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಶಿಕ್ಷಣದೊಂದಿಗೆ ಧರ್ಮವನ್ನು ಬೆರೆಸಬೇಡಿ
'ಶಿಕ್ಷಣದೊಂದಿಗೆ ಧರ್ಮಾಂಧತೆ ಬೆರೆಸಬೇಡಿ' ಈ ರೀತಿ ಕೆಲ ರಾಜಕಾರಣಿಗಳು ಹೇಳುತ್ತಾರೆ. ಆದರೆ ಇದು ಕೇವಲ ಹಿಂದೂಗಳಿಗೆ ಮಾತ್ರ ಅನ್ವಯಿಸಲಾಗಿದೆಯೇ? ಶಾಲೆಗಳಲ್ಲಿ ಹಿಂದು ಸಂಪ್ರಾದಯ, ಆಚಾರ ಮತ್ತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಸ್ವಲ್ಪವೂ ಉಲ್ಲೇಖಿಸಿದರೆ ಗದ್ದಲ ಎಬ್ಬಿಸುವವರು, ಜಾತ್ಯಾತೀತೆ ಬಗ್ಗೆ ಮಾತಾಡ್ತಾರೆ. ಆದ್ರೆ ಕೆಲವು ಶಾಲೆಗಳಲ್ಲಿ ಸ್ಪಷ್ಟವಾಗಿ ಧಾರ್ಮಿಕ ಮತಾಂಧತೆ ನಡೆದಾಗ, ಕಾಂಗ್ರೆಸ್ ನೇತೃತ್ವದ ಸರ್ಕಾರ ಕಣ್ಣು ಮುಚ್ಚಿಕೊಳ್ಳುತ್ತದೆ. ಈ ದ್ವಿಮುಖತೆಯನ್ನು ಖಂಡಿಸಬೇಕಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಡಿಕೆ ಶಿವಕುಮಾರ ನೇತೃತ್ವದ ಸರ್ಕಾರವು ಶಿಕ್ಷಣ ವ್ಯವಸ್ಥೆಯಲ್ಲಿ ಇಂಥ ಉಗ್ರವಾದ ಬೇರೂರಲು ಅವಕಾಶ ನೀಡಿದ್ದಕ್ಕೆ ಅವರೇ ಜವಾಬ್ದಾರರಾಗಬೇಕು. ಶಾಲೆಗಳಲ್ಲಿ ಈ ರೀತಿಯ ದ್ವೇಷವನ್ನು ಹರಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಅಪಾಯಕಾರಿ ಪ್ರವೃತ್ತಿ ಮುಂದುವರಿದರೆ, ಕರ್ನಾಟಕದ ಭವಿಷ್ಯದ ಪೀಳಿಗೆಗಳು ಸಾಮುದಾಯಿಕ ದ್ವೇಷವನ್ನು ಸಾಮಾನ್ಯವೆಂದು ಪರಿಗಣಿಸುವ ಅಪಾಯವಿದೆ. ಕೈಮೀರುವ ಮೊದಲು ರಾಜ್ಯದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.
The Reality of Congress Rule in Karnataka: Education or Systematic Brainwashing?
— Karnataka Portfolio (@karnatakaportf) March 23, 2025
What are teachers and parents in Karnataka under the Congress government teaching their children? Is this the real purpose of the 4% reservation policy, or should we say this is the “best” use of… pic.twitter.com/Aiy4kaDWlS