ರಾಜ್ಯದಲ್ಲಿ ಆ.16ರಿಂದ 4 ದಿನಗಳ ಕಾಲ ಕೇಂದ್ರ ಸರ್ಕಾರದ ನೂತನ ಸಚಿವರ ಜನಾಶೀರ್ವಾದ ಯಾತ್ರೆ ಸರ್ಕಾರದ ಯೋಜನೆಗಳ ಜನಜಾಗೃತಿಗಾಗಿ ಈ ಯಾತ್ರೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾಹಿತಿ

ಹುಬ್ಬಳ್ಳಿ (ಆ.08): ರಾಜ್ಯದಲ್ಲಿ ಆ.16ರಿಂದ 4 ದಿನಗಳ ಕಾಲ ಕೇಂದ್ರ ಸರ್ಕಾರದ ನೂತನ ಸಚಿವರ ಜನಾಶೀರ್ವಾದ ಯಾತ್ರೆ ನಡೆಯಲಿದೆ. ಸರ್ಕಾರದ ಯೋಜನೆಗಳ ಜನಜಾಗೃತಿಗಾಗಿ ಈ ಯಾತ್ರೆ ನಡೆಯಲಿದ್ದು, ನೂತನ ಕೇಂದ್ರ ಸಚಿವರಾದ ರಾಜೀವ್‌ ಚಂದ್ರಶೇಖರ್‌, ಭಗವಂತ ಖೂಬಾ, ಎ.ನಾರಾಯಣಸ್ವಾಮಿ ಮತ್ತು ಶೋಭಾ ಕರದ್ಲಾಂಜೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೂತನ ಸಚಿವರಿಗೆ ದೇಶಾದ್ಯಂತ ಪ್ರವಾಸ ಕೈಗೊಂಡು, ಸರ್ಕಾರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 16ರಿಂದ 19ರ ವರೆಗೆ ಯಾತ್ರೆ ಕೈಗೊಂಡು ಸಭೆ, ಸಂವಾದಗಳನ್ನು ನಡೆಸಲಿದ್ದಾರೆ ಎಂದು ತಿಳಿಸಿದರು.

43 ಕೇಂದ್ರ ಸಚಿವರ ‘ಜನ ಆಶೀರ್ವಾದ ಯಾತ್ರೆ’: ವಿಪಕ್ಷಗಳಿಗೆ ಮೋದಿ ಸಡ್ಡು!

ಕೌಶಲ್ಯ ಅಭಿವೃದ್ಧಿ ಖಾತೆ ರಾಜ್ಯ ಸಚಿವ ರಾಜೀವ ಚಂದ್ರಶೇಖರ್‌ ನೇತೃತ್ವದ ತಂಡ ಆ.16ರಂದು ಹುಬ್ಬಳ್ಳಿಗೆ, 17ರಂದು ಕೊಡಗು, ದಕ್ಷಿಣ ಕನ್ನಡ, 18ರಂದು ಶಿವಮೊಗ್ಗ, ಉತ್ತರ ಕನ್ನಡ ಹಾಗೂ 19ಕ್ಕೆ ಬೆಂಗಳೂರು ನಗರಕ್ಕೆ ಭೇಟಿ ನೀಡಲಿದೆ. ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ನೇತೃತ್ವದ ತಂಡ 16ಕ್ಕೆ ಬಳ್ಳಾರಿ, ಕೊಪ್ಪಳ, 17ಕ್ಕೆ ರಾಯಚೂರು, ಯಾದಗಿರಿ, 18ಕ್ಕೆ ಕಲಬುರಗಿ, ಬೀದರ್‌ಗೆ, ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ನೇತೃತ್ವದ ತಂಡ 17ರಂದು ಬೆಂಗಳೂರು ಗ್ರಾಮೀಣ, ತುಮಕೂರು, 18ಕ್ಕೆ ಚಿತ್ರದುರ್ಗ, ದಾವಣಗೆರೆ, 19ಕ್ಕೆ ಹಾವೇರಿ, ಗದಗ ಹಾಗೂ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರದ್ಲಾಂಜೆ ನೇತೃತ್ವದ ತಂಡ 17ಕ್ಕೆ ಮಂಡ್ಯ, ಚಾಮರಾಜನಗರ, 18ಕ್ಕೆ ಮೈಸೂರು, ಹಾಸನ, 20ಕ್ಕೆ ಉಡುಪಿಗೆ ಭೇಟಿ ನೀಡಲಿದೆ ಎಂದು ವಿವರಿಸಿದರು.