ರಾಜ್ಯದ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆಗೆ ಕೇಂದ್ರದ ಮೆಚ್ಚುಗೆ
* ಕಳೆದ ಬಾರಿಯಂತೆ ಎಲ್ಲ ಕೃಷಿ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು
* ‘ಅಗ್ರಿ ಟ್ರೆಂಡ್ ಸೆಟ್ಟರ್’ ಎಂಬ ಹೆಗ್ಗಳಿಕೆಗೂ ಪಾತ್ರವಾದ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ
* ಇತರೆ ರಾಜ್ಯಗಳಿಗೆ ಮಾದರಿಯಾದ ಕರ್ನಾಟಕದ ಕೃಷಿ ಇಲಾಖೆಯ ಸಾಧನೆ
ಬೆಂಗಳೂರು(ಸೆ.01): ರಾಜ್ಯದಲ್ಲಿ ಕಳೆದ ವರ್ಷದಿಂದ ಕೈಗೊಂಡಿರುವ ಮೊಬೈಲ್ ಆ್ಯಪ್ ಮೂಲಕ ನಡೆಸುವ ಬೆಳೆ ಸಮೀಕ್ಷೆ ದೇಶದ ಗಮನ ಸೆಳೆದಿದೆ. ಕೇಂದ್ರದಿಂದ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಮೀಕ್ಷೆ ಈ ಬಾರಿಯೂ ಯಶಸ್ವಿಯಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಪ್ರಗತಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ರಾಜ್ಯಾದ್ಯಂತ ಇತರೆ ಇಲಾಖೆಗಳ ಸಹಯೋಗದಲ್ಲಿ ಬೆಳೆ ಸಮೀಕ್ಷೆ ಕ್ಷಿಪ್ರಗತಿಯಲ್ಲಿ ನಡೆದು ಯಶಸ್ವಿಯಾಗಿತ್ತು. ಇತರೆ ರಾಜ್ಯಗಳಿಗೆ ಕರ್ನಾಟಕದ ಕೃಷಿ ಇಲಾಖೆಯ ಈ ಸಾಧನೆ ಮಾದರಿಯೂ ಆಗಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಬೆಳೆ ಮುಂದೆ ನಿಂತು ಫೊಟೊ ಕಳಿಸಿ ಪರಿಹಾರ ಪಡೆಯಿರಿ
ಕೇಂದ್ರದಿಂದ ‘ಅಗ್ರಿ ಟ್ರೆಂಡ್ ಸೆಟ್ಟರ್’ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಸಾಧನೆ ಇನ್ನು ಮುಂದೆಯೂ ಆಗಬೇಕು. ರೈತ ತಾನೇ ತನ್ನ ಬೆಳೆಗೆ ಪ್ರಮಾಣ ಪತ್ರ ನೀಡುವಂತಹ, ಜಮೀನಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಹನೆಂದು ಹೇಳಿಕೊಳ್ಳುವಂತಹ ಮೊಬೈಲ್ ಬೆಳೆ ಸಮೀಕ್ಷೆ ನಿರಂತರವಾಗಿ ನಡೆಯಬೇಕು. ಕಳೆದ ಬಾರಿಯಂತೆ ಎಲ್ಲಾ ಕೃಷಿ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದ್ದಾರೆ.