ಉದ್ಯಾನವನ, ಸ್ಮಶಾನ ಹಾಗೂ ಆಟದ ಮೈದಾನ ಸೇರಿದಂತೆ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನು ಐದು ವರ್ಷದಲ್ಲಿ ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರಗಳು ಸ್ವಾಧೀನಪಡಿಸಿಕೊಳ್ಳದಿದ್ದರೆ ಅಂತಹ ಮೀಸಲಾತಿ ರದ್ದಾಗಲಿದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು (ಜ.4) : ಉದ್ಯಾನವನ, ಸ್ಮಶಾನ ಹಾಗೂ ಆಟದ ಮೈದಾನ ಸೇರಿದಂತೆ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನು ಐದು ವರ್ಷದಲ್ಲಿ ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರಗಳು ಸ್ವಾಧೀನಪಡಿಸಿಕೊಳ್ಳದಿದ್ದರೆ ಅಂತಹ ಮೀಸಲಾತಿ ರದ್ದಾಗಲಿದೆ ಎಂದು ಹೈಕೋರ್ಟ್‌ ಆದೇಶಿಸಿದೆ.

Add Asianetnews Kannada as a Preferred SourcegooglePreferred

ಬೆಂಗಳೂರಿನ ಜಯಮಹಲ್ ಮುಖ್ಯ ರಸ್ತೆಯಲ್ಲಿರುವ ಜಯಮಹಲ್ ಪ್ಯಾಲೇಸ್ ಹೋಟೆಲ್ ಮಾಲೀಕ ಎಚ್.ಎಚ್. ಜೋತೇಂದ್ರ ಸಿನ್ಹಾಜಿ ಮತ್ತು ಅವರ ಉತ್ತರಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ಪೀಠ ಈ ಆದೇಶ ಮಾಡಿದೆ.

ಲಂಚ ಕೇಳಿದ್ದಕ್ಕೂ, ಪಡೆದಿದ್ದಕ್ಕೂ ಸಾಕ್ಷ್ಯ ಬೇಕು: ಹೈಕೋರ್ಟ್‌

ಅರ್ಜಿದಾರರ ಭೂಮಿಯನ್ನು ಪರಿಷ್ಕೃತ ಕ್ರಿಯಾ ಯೋಜನೆಯಡಿ 2007ರ ಜೂ.25ರಂದು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆದೇಶ ಹೊರಡಿಸಿತ್ತು. ಆ ಅವಧಿ 2012ರ ಜೂ.24ಕ್ಕೆ ಕೊನೆಗೊಂಡಿದೆ. ಆ ಭೂಮಿಯನ್ನು ಐದು ವರ್ಷದಲ್ಲಿ ಬಿಡಿಎ ಸ್ವಾಧೀನ ಪಡಿಸಿಕೊಂಡಿಲ್ಲ. ಇದರಿಂದ ಸಾರ್ವಜನಿಕ ಬಳಕೆಗೆ ಮೀಸಲಿಟ್ಟಿರುವುದು ಕರ್ನಾಟಕ ನಗರ ಮತ್ತು ಪಟ್ಟಣ ಯೋಜನೆ ಸೆಕ್ಷನ್ 12(1)(ಸಿ) ಅನ್ವಯ ರದ್ದಾಗಲಿದೆ. ಹಾಗಾಗಿ, ಭೂ ಮಾಲೀಕರು ತಮ್ಮ ಭೂಮಿಯನ್ನು ಮರು ನಿಯೋಜಿಸಲು (ರಿ-ಡೆಸಿಗ್ನೇಟ್) ಮಾಡಲು ಅರ್ಜಿ ಸಲ್ಲಿಸಬಹುದು ಎಂದು ಆದೇಶಿಸಿದೆ.

ಅಲ್ಲದೆ, ನ್ಯಾಯಾಲಯಕ್ಕೆ ಅರ್ಜಿದಾರರ ಭೂಮಿಯ ಸುತ್ತಲಿನ ಪ್ರದೇಶಗಳ ಅಭಿವೃದ್ಧಿ ಆಧರಿಸಿ ತಮ್ಮ ಭೂಮಿ ಮರು ನಿಯೋಜಿಸುವ ಬಗ್ಗೆ ಬಿಡಿಎ ಹೊಸದಾಗಿ ಅರ್ಜಿ ಸಲ್ಲಿಸಬಹುದು. ಅದನ್ನು 180 ದಿನಗಳಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಪರಿಷ್ಕೃತ ಮಾಸ್ಟರ್‌ ಯೋಜನೆಯಲ್ಲಿ (ಆರ್‌ಎಂಪಿ) ಈಗಾಗಲೇ ಆಗಿರುವ ಅಭಿವೃದ್ಧಿಗಳು ಮತ್ತು ಉದ್ದೇಶಿಸಿರುವ ಅಭಿವೃದ್ಧಿ ಯೋಜನೆ ಎರಡೂ ಸಹ ಒಳಗೊಂಡಿರಬೇಕು. ಈಗಾಗಲೇ ಆಗಿರುವ ಅಭಿವೃದ್ಧಿಗಳನ್ನು ಬದಲಾಯಿಸಲಾಗದು ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರ

ಅರ್ಜಿದಾರರ ಭೂಮಿ ಹಾಗೂ ಜಯಮಹಲ್ ಪ್ಯಾಲೇಸ್ ಪ್ರದೇಶವನ್ನು 1995ರಲ್ಲಿ ಅನುಮೋದನೆಗೊಂಡ ಸಮಗ್ರ ಅಭಿವೃದ್ಧ ಯೋಜನೆ (ಸಿಡಿಪಿ) 2011ರ ಅಡಿಯಲ್ಲಿ ವಸತಿ ಪ್ರದೇಶವೆಂದು ಘೋಷಿಸಲಾಗಿತ್ತು. ಆದರೆ, 2007ರಲ್ಲಿ ಅನುಮೋದಿತ ಪರಿಷ್ಕೃತ ಮಾಸ್ಟರ್ ಪ್ಲಾನ್-2015ರ ಅಡಿಯಲ್ಲಿ ಆ ಜಾಗವನ್ನು ಉದ್ಯಾನವನ ಮತ್ತು ಹಸಿರುಜಾಗ/ಕ್ರೀಡಾ ಉದ್ದೇಶ ಆಟದ ಮೈದಾನ, ಸ್ಮಶಾನ ಎಂದು ಮೀಸಲಿಡಲಾಗಿತ್ತು. 

ಗುತ್ತಿಗೆ ನೌಕರರಿಗೂ ಗ್ರ್ಯಾಚ್ಯುಟಿ ಅನ್ವಯ; ಹೈಕೋರ್ಟ್ ಮಹತ್ವದ ಆದೇಶ!

ಅದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅರ್ಜಿದಾರರು, ತಮ್ಮ ಜಾಗದಲ್ಲಿ ಈ ಮೊದಲೇ ಹೋಟೆಲ್‌ ಇತ್ತು. ಅದು ವಾಣಿಜ್ಯ ಉದ್ದೇಶದ ಕಟ್ಟಡ. ಆ ವಿಚಾರ ಬಿಡಿಎಗೂ ತಿಳಿದಿದೆ. ಆದರೆ, ಪರಿಷ್ಕೃತ ಮಾಸ್ಟರ್ ಪ್ಲಾನ್ ನಲ್ಲಿ ಆ ಜಾಗವನ್ನು ಪಾರ್ಕ್ ಮತ್ತು ಮುಕ್ತ ಪ್ರದೇಶವೆಂದು ಘೋಷಿಸಿದೆ. ಬಿಡಿಎ ಆ ಜಾಗವನ್ನು ಸ್ವಾಧೀನಪಡಿಸಿಕೊಂಡಿರಲಿಲ್ಲ. ಹಾಗಾಗಿ ಆ ಮೀಸಲಿಟಿದ್ದ ಜಾಗದ ಅವಧಿ ಕೊನೆಗೊಂಡಿದ್ದು, ಸಹಜವಾಗಿಯೇ ಕರ್ನಾಟಕ ನಗರ ಮತ್ತು ಪಟ್ಟಣ ಯೋಜನೆ ಅನ್ವಯ ಮೀಸಲು ಆದೇಶ ರದ್ದಾಗಲಿದೆ ಎಂದು ವಾದಿಸಿದ್ದರು.