ಅಪಘಾತ : ಧಾರಾವಾಹಿ ಕ್ಯಾಮರಾಮ್ಯಾನ್ ಸಾವು
ಬೈಕ್ ಡಿಕ್ಕಿಯಾಗಿ ಕಿರುತೆರೆಯ ಕ್ಯಾಮೆರಾಮ್ಯಾನ್ವೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು : ರಸ್ತೆ ದಾಟುವಾಗ ಬೈಕ್ ಡಿಕ್ಕಿಯಾಗಿ ಕಿರುತೆರೆಯ ಕ್ಯಾಮೆರಾಮ್ಯಾನ್ವೊಬ್ಬರು ಮೃತಪಟ್ಟಿರುವ ಘಟನೆ ನಾಗರಬಾವಿ ಸಮೀಪದ ಮಾತಾ ನಗರದಲ್ಲಿ ನಡೆದಿದೆ.
ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರದ ನಿವಾಸಿ ಸಿ.ಪಿ.ರಾಜೇಶ್ (26) ಮೃತ ದುರ್ದೈವಿ. ನಾಗರಬಾವಿ ಸಮೀಪ ಗೆಳೆಯನನ್ನು ಭೇಟಿಯಾಗಿ ಮಂಗಳವಾರ ರಾತ್ರಿ 8.50 ರ ಸುಮಾರಿಗೆ ರಾಜೇಶ್ ಮರಳುವಾಗ ಈ ಅವಘಡ ಸಂಭವಿಸಿದೆ. ಈ ಪ್ರಕರಣದ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹುಲಿಯೂರುದುರ್ಗ ಸಮೀಪದ ಚೌಡನಕುಪ್ಪೆ ಗ್ರಾಮದ ಮೃತ ರಾಜೇಶ್, ಧಾರವಾಹಿಗಳಲ್ಲಿ ಕ್ಯಾಮೆ ರಾಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ಸಹ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದ ಧಾರವಾಹಿಯೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡು ಮನೆಗೆ ಮರಳಿದ್ದರು.
ನಾಗರಬಾವಿಯಲ್ಲಿ ತಮ್ಮ ಸ್ನೇಹಿತ ವಿಜಯ್ ಅವರನ್ನು ಭೇಟಿಯಾಗಿ ರಾಜೇಶ್ ಮನೆಗೆ ಹೊರಟ್ಟಿದ್ದರು. ಆಗ ಅವರಿಗೆ ಸುಮನಹಳ್ಳಿ ಜಂಕ್ಷನ್ ಕಡೆಯಿಂದ ನಾಯಂಡಹಳ್ಳಿಗೆ ತೆರಳುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.