ಬಾಂಬೆ ಬಾಯ್ಸ್ ಘರ್ ವಾಪ್ಸಿ: ಕಾಂಗ್ರೆಸ್ ಸ್ವಾಗತ, ಬಿಜೆಪಿ ಮುಗುಂ, ಭಾರೀ ರಾಜಕೀಯ ಸಂಚಲನ!
ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರ ಪೈಕಿ ಒಬ್ಬರೆನಿಸಿದ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ(muniratna former minister) ಅವರು ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನದ ವೇಳೆ ಬಿಜೆಪಿಗೆ ಸೇರಿದ್ದ 17 ಶಾಸಕರ ಪೈಕಿ ನಾನಂತೂ ಕಾಂಗ್ರೆಸ್ಗೆ ಹೋಗುವುದಿಲ್ಲ. ಉಳಿದ 16 ಮಂದಿಯ ವಿಚಾರ ನನಗೆ ಗೊತ್ತಿಲ್ಲ. ಕಾಂಗ್ರೆಸ್ಗೆ ಹೋಗುವವರನ್ನು ನಾನು ತಡೆಯುವ ಪ್ರಯತ್ನವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು (ಆ.17) : ‘ಬಾಂಬೆ ಬಾಯ್ಸ್’ ಕಾಂಗ್ರೆಸ್ಗೆ ಘರ್ ವಾಪ್ಸಿ ಆಗುವ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮರಳಿ ಮನೆಗೆ ಬರುವವರಿಗೆ ಸ್ವಾಗತ ಎನ್ನುವ ಮೂಲಕ ಕಾಂಗ್ರೆಸ್ ನಾಯಕರು ಪರೋಕ್ಷವಾಗಿ ಈ ಸುದ್ದಿಯನ್ನು ಪುಷ್ಟೀಕರಿಸಿದ್ದರೆ, ಅದೊಂದು ಗಾಳಿ ಸುದ್ದಿ, ಬಿಜೆಪಿಯಿಂದ ಯಾರೂ ಕಾಂಗ್ರೆಸ್ಗೆ ಹೋಗುವುದಿಲ್ಲ ಎನ್ನುವ ಮೂಲಕ ಬಿಜೆಪಿ ನಾಯಕರು ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸುವ ಸೂಚನೆ ನೀಡಿದ್ದಾರೆ.
ಈ ನಡುವೆ, ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರ ಪೈಕಿ ಒಬ್ಬರೆನಿಸಿದ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ(muniratna former minister) ಅವರು ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನದ ವೇಳೆ ಬಿಜೆಪಿಗೆ ಸೇರಿದ್ದ 17 ಶಾಸಕರ ಪೈಕಿ ನಾನಂತೂ ಕಾಂಗ್ರೆಸ್ಗೆ ಹೋಗುವುದಿಲ್ಲ. ಉಳಿದ 16 ಮಂದಿಯ ವಿಚಾರ ನನಗೆ ಗೊತ್ತಿಲ್ಲ. ಕಾಂಗ್ರೆಸ್ಗೆ ಹೋಗುವವರನ್ನು ನಾನು ತಡೆಯುವ ಪ್ರಯತ್ನವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಎಲ್ಲರ ಮಾತು ಮುಗೀಲಿ, ಬಳಿಕ ಅವರ ಬಣ್ಣ ಬಯಲು: ಡಿ.ಕೆ. ಶಿವಕುಮಾರ್
ತೀವ್ರ ಸಂಚಲನ:
‘ಕನ್ನಡಪ್ರಭ’ದಲ್ಲಿ ಬುಧವಾರ ಬಾಂಬೆ ಬಾಯ್ಸ್(Bombay boys) (ಕಾಂಗ್ರೆಸ್-ಜೆಡಿಎಸ್ನ ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಮುಂಬೈಗೆ ಹೋಗಿದ್ದವರು) ಶಾಸಕರು ಕಾಂಗ್ರೆಸ್ಗೆ ಘರ್ ವಾಪ್ಸಿ(Bombay boys Ghar Wapsi) ಸುದ್ದಿ ಪ್ರಕಟವಾದ ಬೆನ್ನಲ್ಲೇ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟಾಗಿದ್ದು, ಹಲವು ಪ್ರಮುಖ ನಾಯಕರು ಈ ವಿಚಾರಕ್ಕೆ ದೃಶ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಂತೂ ತಪ್ಪು ಸರಿಪಡಿಸಿಕೊಳ್ಳುವವರು ಪಕ್ಷಕ್ಕೆ ವಾಪಸ್ ಬರಬಹುದು. ಒಮ್ಮೊಮ್ಮೆ ಅನುಕೂಲ ಸಿಂಧು ರಾಜಕಾರಣ ಅಗತ್ಯ ಎನ್ನುವ ಮೂಲಕ ಘರ್ ವಾಪ್ಸಿ ಸುದ್ದಿಯನ್ನು ಪುಷ್ಟೀಕರಿಸಿದರು.
ಇನ್ನು ಬಿಜೆಪಿ ನಾಯಕ ಸಿ.ಟಿ.ರವಿ ಮಾಧ್ಯಮಗಳಿಗೆ ಮಾತನಾಡಿ, ಬಿಜೆಪಿಯ ಯಾರೂ ಕಾಂಗ್ರೆಸ್ಗೆ ಹೋಗುವುದಿಲ್ಲ. ನಾವು ಯಾರನ್ನೂ ಅನುಮಾನದಿಂದ ನೋಡುವುದಿಲ್ಲ. ಇದೊಂದು ಗಾಳಿ ಸುದ್ದಿ ಎನ್ನುವ ಮೂಲಕ ತಳ್ಳಿಹಾಕುವ ಪ್ರಯತ್ನ ನಡೆಸಿದರು.
ಅನುಕೂಲಸಿಂಧು ಅಗತ್ಯ:
ಘರ್ವಾಪ್ಸಿಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಒಮ್ಮೊಮ್ಮೆ ಅನುಕೂಲಸಿಂಧು ರಾಜಕಾರಣ ಅಗತ್ಯ. ಅನ್ಯಪಕ್ಷದವರು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆ. ಹೀಗಾಗಿ ಸ್ಥಳೀಯ ನಾಯಕರ ನಿರ್ಧಾರದಂತೆ ಕೆಲವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.
ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆ. ಯಾವುದೇ ಕಾರಣಕ್ಕೂ ದ್ವೇಷ ಸಾಧಿಸಬೇಡಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚು ಮಾಡಿ ಎಂದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ. ಇನ್ನು ಸ್ಥಳೀಯವಾಗಿ ಒಮ್ಮೊಮ್ಮೆ ಅನುಕೂಲಸಿಂಧು ರಾಜಕಾರಣ ಮಾಡಿಕೊಳ್ಳಬೇಕಾಗುತ್ತದೆ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಸ್ಥಳೀಯ ನಾಯಕರಿಗೆ ಬಿಟ್ಟವಿಚಾರ. ದೊಡ್ಡ, ದೊಡ್ಡ ನಾಯಕರನ್ನು ಸೇರಿಸಿಕೊಳ್ಳುತ್ತಿಲ್ಲ, ಅನ್ಯಪಕ್ಷಗಳ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆ ಎಂದು ತಿಳಿಸಿದರು.
ಫಸ್ಟ್ ಬೆಂಚ್ ಸಿಗಲ್ಲ:
ಡಾ.ಜಿ.ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ನಿಂದ ಬಿಜೆಪಿಗೆ ಹೋಗಿರುವವರು ಅಲ್ಲಿ ಅಸಮಾಧಾನವಿದ್ದರೆ ಬರಬಹುದು. ಈ ಹಿಂದೆಯೂ ಪಕ್ಷದಿಂದ ಹೊರಹೋಗಿ ವಾಪಸು ಬಂದಿರುವ ನಿದರ್ಶನಗಳಿವೆ. ಕಾಂಗ್ರೆಸ್ ಸಿದ್ಧಾಂತ, ನಾಯಕತ್ವದಲ್ಲಿ ನಂಬಿಕೆ ವಿಶ್ವಾಸವಿಟ್ಟು ಬಂದರೆ ಬರಬಹುದು. ಈ ಬಗ್ಗೆ ಅಧ್ಯಕ್ಷರೂ ಹೇಳಿಕೆ ನೀಡಿದ್ದಾರೆ. ಅಂತಹವರನ್ನು ಪರಿಶೀಲನೆ ಮಾಡಿ ಪಕ್ಷಕ್ಕೆ ತೆಗೆದುಕೊಳ್ಳುತ್ತೇವೆ. ಆದರೆ ಅವರಿಗೆ ಮೊದಲ ಬೆಂಚ್ ಸಿಗುವುದಿಲ್ಲ, ಬದಲಿಗೆ ಕ್ಲಾಸ್ ರೂಮಿಗೆ ಪ್ರವೇಶ ಸಿಗುತ್ತದೆ. ಅವರು ಮೊದಲ ಬೆಂಚ್ಗೆ ಬರಬೇಕಾದರೆ ತುಂಬಾ ದಿನ ಆಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದರು.
ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ:
ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ. ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ ಅಥವಾ ಬೇಡವಾ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪ್ರಾಥಮಿಕವಾಗಿ ನನಗೆ ಯಾವ ವಿಚಾರವೂ ಗೊತ್ತಿಲ್ಲ. ನಾನು ಕ್ಷೇತ್ರದ ಕಡೆ ಹೆಚ್ಚು ಒತ್ತು ಕೊಡುತ್ತಿದ್ದೇನೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವುದಾದರೆ ಯಾರೇ ಬಂದರೂ ಸ್ವಾಗತ. ಅಂತಿಮವಾಗಿ ಪಕ್ಷ ತೀರ್ಮಾನ ಮಾಡುತ್ತದೆ ಎಂದರು.
ಬಿಜೆಪಿಯಲ್ಲಿ ಯಾರೂ ಉಳಿಯಲ್ಲ:
ಮುನಿರಾಬಾದ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ‘ಬಾಂಬೆ ಬಾಯ್್ಸ ಮಾತ್ರ ಅಲ್ಲ ಬಿಜೆಪಿ, ಜೆಡಿಎಸ್ನ ಯಾವುದೇ ಶಾಸಕರಿಗೂ ಆ ಪಕ್ಷದಲ್ಲಿ ಭವಿಷ್ಯ ಇಲ್ಲ ಎನ್ನುವುದು ಗೊತ್ತಾಗಿದೆ. ಹೀಗಾಗಿ, ಅಲ್ಲಿ ಯಾವೊಬ್ಬ ಶಾಸಕರೂ ಉಳಿಯುವುದಿಲ್ಲ’ ಎಂದು ಹೇಳಿದರು.
ಬಾಂಬೆ ಬಾಯ್್ಸ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಆದರೆ, ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಎರಡೂ ಪಕ್ಷಗಳು ಹತಾಶೆಗೊಂಡಿರುವುದಂತೂ ಸತ್ಯ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ನಲ್ಲಿ ಭವಿಷ್ಯವೇ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದರು.
ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಈ ಬಾರಿ ಆಟ ಆಡಲು ಅವಕಾಶ ಇಲ್ಲದಂತಾಗಿದೆ. ಕಾಂಗ್ರೆಸ್ 136 ಸ್ಥಾನಗಳೊಂದಿಗೆ ಭರ್ಜರಿ ಜಯ ಸಾಧಿಸಿರುವುದರಿಂದ ಅವರ ಮುಂದಿರುವ ಎಲ್ಲ ದಾರಿಗಳು ಮುಚ್ಚಿವೆ. ಇತರರಿಂದ ಅವರು ಹತಾಶೆಗೊಂಡು ಏನೇನೋ ಮಾತನಾಡುತ್ತಿದ್ದಾರೆ ಎಂದರು.
ಯಾರೇ ಬಂದರೂ ಬಾಗಿಲು ತೆರೆದಿದೆ:
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾಂಗ್ರೆಸ್ ಸರ್ಕಾರ ಡಬಲ್ ಡೆಕ್ಕರ್ ಬಸ್ ಇದ್ದಂತೆ. ಯಾವುದೇ ಪಕ್ಷದವರು, ಯಾರೇ ಬಂದರೂ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ. ಯಾರು ಬೇಕಾದರೂ ಬರಬಹುದು. ಬಂದವರನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
Karnataka Politics: ವಲಸೆ ಬಂದ ಶಾಸಕರು ಕಾಂಗ್ರೆಸ್ಗೆ ಮರಳಲ್ಲ: ಬಿಜೆಪಿ ಸ್ಪಷ್ಟನೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಪರೇಷನ್ ಮಾಡುವುದು ನಾವಲ್ಲ, ಜನರು. ಬಿಜೆಪಿಯವರು ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿ ರಾಹುಲ್ ಗಾಂಧಿ ವರ್ಚಸ್ಸು ಕಡಿಮೆ ಮಾಡುವ ಯತ್ನ ಮಾಡಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದರು.