Asianet Suvarna News Asianet Suvarna News

ಬಿಜೆಪಿ ಸರ್ಕಾರ ಕೆಂಪೇಗೌಡ ಅನುಯಾಯಿಯೇ? ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ

ಕೆಂಪೇಗೌಡರ ಪ್ರತಿಮೆ ನಿರ್ಮಿಸಿ ಲೋಕಾರ್ಪಣೆ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮುಂದುವರೆಸಿದ್ದಾರೆ. 

BJP government is a follower of Kempegowda Siddaramaiah lashed out SAT
Author
First Published Nov 11, 2022, 1:55 PM IST

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಲೋಕಾರ್ಪಣೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭರ್ಜರಿ ಸ್ವಾಗತ ಸಿಕ್ಕಿದೆ.  ಆದರೆ, ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಆಗಮಿಸಿದ  ಮೋದಿ ಅವರಿಗೆ  ಸ್ವಾಗತ ಕೋರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಸರ್ಕಾರ ಮತ್ತು ಬಿಜೆಪಿ ಕೆಂಪೇಗೌಡರು ಮತ್ತು ಅವರ ಮೌಲ್ಯಗಳ ನಿಜವಾದ ಅನುಯಾಯಿಗಳೇ? ಎಂದು ಪ್ರಶ್ನೆ ಮಾಡಿದ್ದಾರೆ.

ಸಿಲಿಕಾನ್‌ ಸಿಟಿಗೆ (Silicon City) ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಕುಂಟುತ್ತಾ ಸಾಗಿದ್ದ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಕಳೆದೆರಡು ದಿನಗಳಿಂದ ವಿಪಕ್ಷಗಳ ನಾಯಕರು ಕೂಡ ಮೋದಿ ಆಗಮನದ ಕಾರಣದಿಂದಾದರೂ ರಸ್ತೆಗುಂಡಿಗಳಿಗೆ (Road pothole) ಮುಕ್ತಿ ಸಿಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಮೋದಿ ಆಗಮನದ ಬಗ್ಗೆ ಚಕಾರವೆತ್ತದೇ ರಾಜ್ಯ ಸರ್ಕಾರದ (State Government) ವಿರುದ್ಧ ಸಾಮಾಜಿಕ ಜಾಲತಾಣ ಟ್ವಿಟರ್‍‌ನಲ್ಲಿ ಹರಿಹಾಯ್ದಿದ್ದಾರೆ. ಮೊದಲನೆಯದಾಗಿ ರಾಜ್ಯ ಸರ್ಕಾರ ಮತ್ತು ಬಿಜೆಪಿ ಕೆಂಪೇಗೌಡರ (Kempegowda) ಅನುಯಾಯಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು ನಮ್ಮ ಕಾಂಗ್ರೆಸ್‌ (INC) ನಾಡಪ್ರಭು ಕೆಂಪೇಗೌಡರ ಮೌಲ್ಯಗಳ ನೈಜ ಅನುಯಾಯಿ (Follower) ಆಗಿದೆ. ಅವರ ಗೌರವಾರ್ಥ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Airport) ಎಂದು ಹೆಸರಿಟ್ಟಿದ್ದೇವೆ.  ಬೆಂಗಳೂರಿನ ಮುಖ್ಯ ಮೆಟ್ರೋ ನಿಲ್ದಾಣಕ್ಕೂ (Metro Station) ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ ಎಂದು ಅವರ ಸರ್ಕಾರದ ಅವಧಿಯಲ್ಲಿ ಮಾಡಿದ ಕಾರ್ಯಗಳನ್ನು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಕಾರ್ಯಕ್ರಮ ಬರೀ ಗಿಮಿಕ್‌: ಸಿದ್ದು ಟೀಕೆ

ರಸ್ತೆಗುಂಡಿ, ಪ್ರವಾಹಕ್ಕೆ ಪ್ರಸಿದ್ಧಿ: 
ರಾಜ್ಯದಲ್ಲಿ ಪ್ರತಿ ವರ್ಷ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವ ವೈಭವೋಪೇತ ಸಂಪ್ರದಾಯಕ್ಕೆ ಚಾಲನೆ ನೀಡಿದ್ದು ಕಾಂಗ್ರೆಸ್‌ ಸರ್ಕಾರ. ಬೆಂಗಳೂರಿನ ಸಂಸ್ಥಾಪಕರಿಗೆ ಸಂಬಂಧಿಸಿದ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಲು ನಾಡಪ್ರಭು ಕೆಂಪೇಗೌಡ ಪ್ರಾಧಿಕಾರವನ್ನು ಸ್ಥಾಪಿಸಿದ್ದೇವೆ. ಈಗ ಕೇವಲ ಪ್ರತಿಮೆ ನಿರ್ಮಾಣ ಮಾಡಿ ಉದ್ಘಾಟನೆಗೆ ಮುಂದಾಗಿರುವ ಬಿಜೆಪಿ ಸರ್ಕಾರ ಕೆಂಪೇಗೌಡರ ದಕ್ಷ ಆಡಳಿತ (Adminitration)ಮತ್ತು ಸಮಾಜ ಸೇವೆಯ ಮೌಲ್ಯಗಳನ್ನು (Social Service Valuves) ಏಕೆ ಅನುಸರಿಸುತ್ತಿಲ್ಲ? ನಾಡಪ್ರಭು ನಿರ್ಮಿಸಿದ ಈ ಕನಸಿನ ನಗರವು ಒಂದು ಕಾಲದಲ್ಲಿ ವಿಶ್ವದಾದ್ಯಂತ ಪ್ರಗತಿ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ಈಗ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬೆಂಗಳೂರು ಶೇ.40 ಕಮಿಷನ್, ರಸ್ತೆ ಗುಂಡಿಗಳು ಮತ್ತು ಪ್ರವಾಹಗಳಿಂದ ಮುಳುಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು ಸ್ಟಾರ್ಟ್‌ಅಪ್‌ ಕ್ಯಾಪಿಟಲ್‌, ಕೆಂಪೇಗೌಡರ ಕೊಡುಗೆ ಅಪಾರ: ಪ್ರಧಾನಿ ನರೇಂದ್ರ ಮೋದಿ


ಕಳೆದೆರಡು ದಿನದಿಂದ ವಾಗ್ದಾಳಿ:
ಪ್ರಧಾನಿ ನರೇಂದ್ರ ಮೋದಿ ಅವರು ಕನಕದಾಸ (Kanakadasa) ಹಾಗೂ ವಾಲ್ಮೀಕಿ (Valmiki)ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡುವುದು, ಕೆಂಪೇಗೌಡರ ಪ್ರತಿಮೆ ಉದ್ಘಾಟಿಸುವುದು ಇವೆಲ್ಲವೂ ಕೇವಲ ರಾಜಕೀಯ ಗಿಮಿಕ್‌ ಅಷ್ಟೆ ಎಂದು ಗುರುವಾರ ಟೀಕಿಸಿದ್ದರು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ವಾಲ್ಮೀಕಿ ಪ್ರತಿಮೆ, ಕನಕದಾಸರ ಪ್ರತಿಮೆ, ಕನಕಗುರು ಪೀಠ ಸ್ಥಾಪನೆ, ಕೆಂಪೇಗೌಡರ ಜಯಂತಿ, ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ.  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿದ್ದು ಕೂಡ ನಮ್ಮ ಸರ್ಕಾರ. ಆದರೂ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮತ್ತು ಉದ್ಘಾಟನೆ ಬಗ್ಗೆ ಸಚಿವರಾದ ಅಶ್ವತ್ಥನಾರಾಯಣ, ಡಾ.ಕೆ. ಸುಧಾಕರ್‌ ನಮಗೆ ಒಂದು ಮಾತನ್ನೂ ಹೇಳಿಲ್ಲ ಎಂದು ತಿಳಿಸಿದ್ದರು.

 

Follow Us:
Download App:
  • android
  • ios