'ಯಡಿಯೂರಪ್ಪ ಮುಖ ನೋಡಿ ಅನುದಾನ ನೀಡ್ತಾರೆ, ಕಟೀಲ್ಗೆ ಶಾಸಕರಿಂದ ದೂರು'
ಕ್ಷೇತ್ರಕ್ಕೆ ಅನುದಾನ ಸಿಗ್ತಿಲ್ಲ ಎಂದು ಕಟೀಲ್ಗೆ ದೂರು ನೀಡಿದ ಶಾಸಕರು| ಕಟೀಲ್ ಭೇಟಿ ಮುನ್ನ ಅರವಿಂದ್ ಬೆಲ್ಲದ್ ನಿವಾಸದಲ್ಲಿ ಸಭೆ| ಶಾಸಕಾಂಗ ಪಕ್ಷದ ಸಭೆ ಕರೆಯಲು ಶಾಸಕರ ಒತ್ತಾಯ| ಶಾಸಕರ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿದ ಕಟೀಲ್|
ಬೆಂಗಳೂರು(ಜೂ.19): ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರು ಮುಖ ನೋಡಿ ಅನುದಾನ ನೀಡುತ್ತಾರೆ. ಈ ಮೂಲಕ ನಮ್ಮ ಕ್ಷೇತ್ರಗಳಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿಯ ಹತ್ತು ಶಾಸಕರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಅರವಿಂದ್ ಬೆಲ್ಲದ್, ಡಾ. ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಬಸನಗೌಡ ಪಾಟೀಲ ಯತ್ನಾಳ್, ಅಭಯ್ ಪಾಟೀಲ್, ಬೆನಕೆ, ಸೇರಿ ಹತ್ತು ಶಾಸಕರು ನಳೀನ್ ಕುಮಾರ್ ಕಟೀಲ್ ಜೊತೆ ಚರ್ಚೆ ನಡಸಿದ್ದಾರೆ. ವಿಭಾಗವಾರು ಸಭೆ ಕರೆಯಿರಿ, ಅದಾದ ಬಳಿಕ ಶಾಸಕಾಂಗ ಪಕ್ಷದ ಸಭೆ ಕರೆಯಲು ಹತ್ತೂ ಶಾಸಕರು ಒತ್ತಾಯಿಸಿದ್ದಾರೆ. ಶಾಸಕರ ಬೇಡಿಕೆಗಳಿಗೆ ನಳೀನ್ ಕುಮಾರ್ ಕಟೀಲ್ ಪೂರಕವಾಗಿ ಸ್ಪಂದಿಸಿದ್ದು, ಸಿಎಂ ಯಡಿಯೂರಪ್ಪ ಅವರ ಜೊತೆ ಮಾತನಾಡುತ್ತೇನೆ. ವಿಭಾಗವಾರು ಸಭೆ ಕರೆಯುತ್ತೇನೆ. ಬಳಿಕ ಶಾಸಕಾಂಗ ಪಕ್ಷದ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಪರಿಷತ್ ಚುನಾವಣೆ: 'BSY ಮಾತಿನ ಮೇಲೆ ನಿಲ್ಲುವ ನಾಯಕ, ನನಗೆ ಅವಕಾಶ ಸಿಕ್ಕೇ ಸಿಗುತ್ತೆ'
ಕಟೀಲ್ ಭೇಟಿಗೂ ಮುನ್ನ ಈ ಹತ್ತೂ ಜನ ಶಾಸಕರು ಅರವಿಂದ್ ಬೆಲ್ಲದ್ ಅವರ ನಿವಾಸದಲ್ಲಿ ಸುಮಾರು ಎರಡು ಗಂಟೆ ಸಭೆ ನಡೆಸಿದ್ದರು. ಬಳಿಕ ಕಟೀಲ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.