ಪಾಲಿಕೆ ಅರ್ಜಿದಾರರಿಗೆ ನೋಟಿಸ್‌ ನೀಡಿರುವುದು ಸರಿಯಲ್ಲ. ದೂರನ್ನು ಗಮನಿಸಿದರೆ ಸಹೋದರರ ನಡುವಿನ ವೈಯಕ್ತಿಕ ಸೇಡಿನ ಹಿನ್ನೆಲೆಯಲ್ಲಿ ಉಂಟಾದ ವ್ಯಾಜ್ಯವಾಗಿದೆ. ವೈಯಕ್ತಿಕ ಸೇಡಿನ ಹಿನ್ನೆಲೆಯಲ್ಲಿ ಸಲ್ಲಿಕೆಯಾಗುವ ದೂರುಗಳ ಬಗ್ಗೆ ಬಿಬಿಎಂಪಿ ಎಚ್ಚರ ವ್ಯವಹರಿಸಬೇಕು ಎಂದು ಸಲಹೆ ನೀಡಿದ ಹೈಕೋರ್ಟ್. 

ಬೆಂಗಳೂರು(ಏ.11):  ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಜನರು ಸಲ್ಲಿಸುವ ದೂರಗಳ ಬಗ್ಗೆ ಬಿಬಿಎಂಪಿ ಎಚ್ಚರದಿಂದ ವ್ಯಹರಿಸುವಂತೆ ಹೈಕೋರ್ಟ್‌ ಸಲಹೆ ನೀಡಿದೆ. ನಗರದ ನಾಗವಾರದ ಎನ್‌.ರಾಮಮೂರ್ತಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನ್ಯಾಯಪೀಠ ಪಾಲಿಕೆಗೆ ಈ ಸಲಹೆ ನೀಡಿದೆ. ಅಲ್ಲದೆ, ರಾಮಮೂರ್ತಿ ವಿರುದ್ಧ ಅವರ ಸಹೋದರ ನೀಡಿದ ದೂರು ಆಧರಿಸಿ ಮುನಿಸಿಪಲ್‌ ಕಾರ್ಪೋರೇಷನ್‌ ಕಾಯ್ದೆ ಸೆಕ್ಷನ್‌-321(3) ಅಡಿಯಲ್ಲಿ ಬಿಬಿಎಂಪಿ ಜಾರಿಗೊಳಿಸಿದ್ದ ನೋಟಿಸನ್ನು ಇದೇ ವೇಳೆ ರದ್ದುಪಡಿಸಿದೆ.

ಪ್ರಕರಣದ ವಿವರ:

ಅರ್ಜಿದಾರರಿಗೆ ಸಂಬಂಧಿಸಿದ ಕಟ್ಟಡವೊಂದರ ಭಾಗವನ್ನು ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ನೆಲಸಮ ಮಾಡಿತ್ತು. ಕಟ್ಟಡ ಮಾಲಿಕರಾದ ಅರ್ಜಿದಾರರು ನೆಲಸಮವಾಗಿದ್ದ ಜಾಗವನ್ನು ಪ್ಲಾಸ್ಟಿಂಗ್‌ ಮಾಡಿಸಿ ರೋಲಿಂಗ್‌ ಶೆಟರ್‌ ಅಳವಡಿಸಿದ್ದರು. ಆ ಸಂಬಂಧ ರಾಮಮೂರ್ತಿ ಮುನಿಸಿಪಲ್‌ ಕಾರ್ಪೋರೇಷನ್‌ ಕಾಯ್ದೆ ಸೆಕ್ಷನ್‌ 321(3) ಅಡಿಯಲ್ಲಿ ಅನುಮತಿ ಪಡೆಯದೆ ಕಟ್ಟಡ ಮಾರ್ಪಡು ಮಾಡುತ್ತಿದ್ದಾರೆ ಎಂದು ಆರೋಪಿಸಿ ಖುದ್ದು ಅವರ ಸಹೋದರ ಎನ್‌. ರಾಧಾಕೃಷ್ಣ ಬಿಬಿಎಂಪಿಗೆ ದೂರು ನೀಡಿದ್ದರು.

ತಾಳಿ ಕಟ್ಟಲು ಪೆರೋಲ್‌: ಅಪರಾಧಿ ಮದ್ವೆಯಾಗಲು ಕೋರ್ಟ್‌ ಮೊರೆ ಹೋದ ಮಹಿಳೆ; ಹೈಕೋರ್ಟ್‌ನಿಂದ ಶಾದಿ ಭಾಗ್ಯ

ಅದನ್ನು ಪರಿಗಣಿಸಿದ ಬಿಬಿಎಂಪಿ ಅರ್ಜಿದಾರರ ರಾಮಮೂರ್ತಿಗೆ ಕಾರಣ ಕೇಳಿ ನೋಟಿಸ್‌ ನೀಡಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಮೇಲ್ಮನವಿ ಪ್ರಾಧಿಕಾರಕ್ಕೆ ತಿರಸ್ಕರಿಸಿತ್ತು. ಹಾಗಾಗಿ, ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಕೆಎಂಸಿ ಕಾಯ್ದೆ ಸೆಕ್ಷನ್‌ 320 ಪ್ರಕಾರ ಕೇವಲ ದುರಸ್ತಿ ಕಾರ್ಯದಿಂದ ಕಟ್ಟಡದ ಸ್ಥಿತಿಗತಿ ಬದಲಾಗುವುದಿಲ್ಲ ಅಥವಾ ಕಟ್ಟಡದ ವಿಸ್ತೀರ್ಣ ಬದಲಾವಣೆ ಆಗುವುದಿಲ್ಲ. ಪ್ರಕರಣದಲ್ಲಿ ಕಟ್ಟಡವನ್ನು ವಾಸಯೋಗ್ಯವನ್ನಾಗಿ ಮಾಡಲು ದುರಸ್ತಿ ಮಾಡಲಾಗಿದೆ. ಹಾಗಾಗಿ ಪಾಲಿಕೆ ಅರ್ಜಿದಾರರಿಗೆ ನೋಟಿಸ್‌ ನೀಡಿರುವುದು ಸರಿಯಲ್ಲ. ದೂರನ್ನು ಗಮನಿಸಿದರೆ ಸಹೋದರರ ನಡುವಿನ ವೈಯಕ್ತಿಕ ಸೇಡಿನ ಹಿನ್ನೆಲೆಯಲ್ಲಿ ಉಂಟಾದ ವ್ಯಾಜ್ಯವಾಗಿದೆ. ವೈಯಕ್ತಿಕ ಸೇಡಿನ ಹಿನ್ನೆಲೆಯಲ್ಲಿ ಸಲ್ಲಿಕೆಯಾಗುವ ದೂರುಗಳ ಬಗ್ಗೆ ಬಿಬಿಎಂಪಿ ಎಚ್ಚರ ವ್ಯವಹರಿಸಬೇಕು ಎಂದು ಸಲಹೆ ನೀಡಿದೆ.