Asianet Suvarna News Asianet Suvarna News

ನೀರಿಲ್ಲಾ... ನೀರಿಲ್ಲಾ.. ಸಿಲಿಕಾನ್‌ ಸಿಟಿ ಮಂದಿಯ ಗೋಳು ಕೇಳೋರಿಲ್ಲಾ..!

ಈ ಬಾರಿ ಬೆಂಗಳೂರು ಹಿಂದೆಂದಿಗಿಂತಲೂ ನೀರಿನ ಸಮಸ್ಯೆ ಎದುರುಸ್ತಿದೆ. ಇದಿನ್ನೂ ಫೆಬ್ರುವರಿ ತಿಂಗಳು. ಬೇಸಿಗೆ ಶುರುವೇ ಆಗಿಲ್ಲ. ಹೀಗಿರುವಾಗ ನೀರಿನ ಕೊರತೆ ಎಲ್ಲಾ ಕಡೆ ಕಾಣಿಸ್ತಾ ಇದೆ. ಜನರು ಅಕ್ಷರಷಃ ಕಂಗಾಲಾಗಿದ್ದಾರೆ. ಜಲಮಂಡಳಿಯಿಂದ ಸರಿಯಾಗಿ ನೀರು ಪೂರೈಕೆ ಆಗದ್ದಕ್ಕೆ ಜನರು ಖಾಸಗಿ ಟ್ಯಾಂಕರ್ ಗಳನ್ನೇ ನೆಚ್ಚಿಕೊಂಡೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ. ಬಿಬಿಎಂಪಿ ಜಲಮಂಡಳಿ ಕ್ರಮಗಳೇನು? ಇಲ್ಲಿದೆ ವಿವರ

Bengaluru running dry BBMP lists out 58 stressed areas lines up water tanker rav
Author
First Published Feb 25, 2024, 12:54 PM IST

ಬೆಂಗಳೂರು (ಫೆ.25): ನೀರಿಲ್ಲಾ.. ನೀರಿಲ್ಲಾ.. ಬೆಂಗಳೂರಿನಲ್ಲಿ ನೀರಿಲ್ಲಾ..! ಜಲ ಅಭಾವ ನೈಸರ್ಗಿಕವೋ? ಕೃತಕ ಸೃಷ್ಟಿಯೋ? ಏನೂ ತಿಳಿಯದಂತಾಗಿದೆ. ಬೇಸಗೆ ಶುರುವಾಗುವ ಮೊದಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಎದ್ದಿದೆ. ಜಲಮಂಡಳಿಯಿಂದ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕವೂ ಬಂದ್ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿಯವರು ನೀರಿನ ಟ್ಯಾಂಕರ್ ಮೂಲಕ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇತ್ತ ಜಲಮಂಡಳಿಯಿಂದ ಕಾವೇರಿ ನೀರೇ ಬರದಿದ್ರೂ ಬಿಲ್ ಮಾತ್ರ ಐದಾರು ಸಾವಿರ ಬರುತ್ತಿದೆ ಜನರು ಕಂಗಾಲಾಗಿದ್ದಾರೆ, ಬಿಬಿಎಂಪಿ ಅಧಿಕಾರಿಗಳು ಮುಂದೇನು ಎಂಬ ಚಿಂತೆಯಲ್ಲಿ ತಲೆಮೇಲೆ ಕೈಹೊತ್ತು ಕುಳಿತುಬಿಟ್ಟಿದ್ದಾರೆ.

ಈ ಬಾರಿ ಬೆಂಗಳೂರು ಹಿಂದೆಂದಿಗಿಂತಲೂ ನೀರಿನ ಸಮಸ್ಯೆ ಎದುರುಸ್ತಿದೆ. ಇದಿನ್ನೂ ಫೆಬ್ರುವರಿ ತಿಂಗಳು. ಬೇಸಿಗೆ ಶುರುವೇ ಆಗಿಲ್ಲ. ಹೀಗಿರುವಾಗ ನೀರಿನ ಕೊರತೆ ಎಲ್ಲಾ ಕಡೆ ಕಾಣಿಸ್ತಾ ಇದೆ. ಜನರು ಅಕ್ಷರಷಃ ಕಂಗಾಲಾಗಿದ್ದಾರೆ. ಜಲಮಂಡಳಿಯಿಂದ ಸರಿಯಾಗಿ ನೀರು ಪೂರೈಕೆ ಆಗದ್ದಕ್ಕೆ ಜನರು ಖಾಸಗಿ ಟ್ಯಾಂಕರ್ ಗಳನ್ನೇ ನೆಚ್ಚಿಕೊಂಡೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.

ಮಾಜಿ ಸಿಎಂ ಯಡಿಯೂರಪ್ಪ ಚಾಲನೆ ಕೊಟ್ಟ ಕೆ-100 ಜಲಮಾರ್ಗ ಬೊಮ್ಮಾಯಿ ಹೋಗಿ, ಸಿದ್ದರಾಮಯ್ಯ ಬಂದ್ರೂ ಮುಗಿದಿಲ್ಲ!

ಬಿಬಿಎಂಪಿ ಮುಂದಿನ ಕ್ರಮ ಏನು?

ಟ್ಯಾಂಕರ್ ಬಳಸಿ ಉಚಿತ ನೀರು ಪೂರೈಸಲು ನಿರ್ಧಾರ:

ನಗರದಲ್ಲಿ ನೀರಿನ ಸಮಸ್ಯೆ ಇರುವ ಕಡೆ 200ರಿಂದ 300 ಟ್ಯಾಂಕರ್‌ ಬಳಸಿ ಉಚಿತವಾಗಿ ನೀರಿನ ಪೂರೈಕೆ ಮಾಡಲು ಬಿಬಿಎಂಪಿ, ಜಲ ಮಂಡಳಿ ನಿರ್ಧರಿಸಿದೆ. ಈ ಟ್ಯಾಂಕರ್‌ಗಳನ್ನು ಖಾಸಗಿ ವ್ಯಕ್ತಿಗಳಿಂದ ವಶಕ್ಕೆಪಡೆಯಲು ತೀರ್ಮಾನಿಸಿದೆ. ನಗರದಲ್ಲಿ ನೀರಿನ ಸಮಸ್ಯೆ ಕುರಿತು ಶನಿವಾರ ಬಿಬಿಎಂಪಿ ಆಡಳಿತಾಧಿಕಾರಿ, ಮುಖ್ಯ ಆಯುಕ್ತರು ಹಾಗೂ ಬೆಂಗಳೂರು ಜಲ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.

200 ಟ್ಯಾಂಕರ್‌ ವಶಕ್ಕೆ:

ಖಾಸಗಿ ವ್ಯಕ್ತಿಗಳಿಂದ ಪಡೆಯುವ 200 ಟ್ಯಾಂಕರ್‌ ಪೈಕಿ 100 ಟ್ಯಾಂಕರ್‌ಗಳನ್ನು 110 ಹಳ್ಳಿಗಳಿಗೆ, ಉಳಿದ 100 ಟ್ಯಾಂಕರ್‌ಗಳನ್ನು ಕೇಂದ್ರ ಭಾಗದ ವಲಯಗಳ ನೀರಿನ ಸಮಸ್ಯೆ ಇರುವ ಕಡೆ ಪೂರೈಕೆಗೆ ಬಳಕೆ ಮಾಡಲಾಗುವುದು. ಜತೆಗೆ ಜಲ ಮಂಡಳಿಯ 68 ಟ್ಯಾಂಕರ್‌ಗಳನ್ನು ಬಳಕೆ ಮಾಡಲಾಗುವುದು ಎಂದು ತುಷಾರ್‌ ವಿವರಿಸಿದರು.

ಅಗತ್ಯ ಬಿದ್ದರೆ ಎಲ್ಲಾ ಟ್ಯಾಂಕರ್‌ ವಶಕ್ಕೆ:

ನಗರದಲ್ಲಿ ಸುಮಾರು 3 ಸಾವಿರ ಟ್ಯಾಂಕರ್‌ಗಳಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಎಲ್ಲ ಟ್ಯಾಂಕರ್‌ಗಳನ್ನು ವಿಪತ್ತು ನಿರ್ವಹಣೆ ಕಾಯ್ದೆಯಡಿ ವಶಕ್ಕೆ ಪಡೆಯಲಾಗುವುದು. ಖಾಸಗಿ ಟ್ಯಾಂಕರ್‌ ದರ ನಿಗದಿಗೆ ಸದ್ಯಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನರಿಂದ ಅತ್ಯಧಿಕ ಪ್ರಮಾಣ ಹಣ ವಸೂಲಿ ಮಾಡುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಬೇಕಾಗಲಿದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

 58 ಕಡೆ ನೀರಿನ ಸಮಸ್ಯೆ:

ಸದ್ಯ ನಗರದಲ್ಲಿ 58 ಕಡೆ ನೀರಿನ ಸಮಸ್ಯೆಯಿದ್ದು, ಈ ಪೈಕಿ ಮಹದೇವಪುರ 16, ಆರ್.ಆರ್.ನಗರ 25, ಬೊಮ್ಮನಹಲ್ಳಿ 5 ಕಡೆ, ಯಲಹಂಕ ಹಾಗೂ ದಾಸರಹಳ್ಳಿ ತಲಾ 3 ಕಡೆ ನೀರಿನ ಅಭಾವ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾದರೆ ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತದೆ.

ನೀರಿಗಾಗಿ ₹131 ಕೋಟಿ

ನೀರಿನ ಸಮಸ್ಯೆ ಇರುವ ಕಡೆ ಕೊಳವೆ ಬಾವಿ ಕೊರೆಯುವುದಕ್ಕೆ ₹90 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ವೆಚ್ಚದಲ್ಲಿ ಸುಮಾರು ಒಂದು ಸಾವಿರ ಕೊಳವೆ ಬಾವಿ ಕೊರೆಯಬಹುದಾಗಿದೆ. ಭೂಗರ್ಭ ಶಾಸ್ತ್ರಜ್ಞ ತಾಂತ್ರಿಕ ಅಭಿಪ್ರಾಯ ಪಡೆದು ಕೊರೆಯಲಾಗುವುದು. ಉಳಿದ ಹಣವನ್ನು ಇನ್ನುಳಿದ ಕಾರ್ಯಗಳಿಗೆ ಬಳಕೆ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ ತಿಳಿಸಿದ್ದಾರೆ.

ಇದಲ್ಲದೇ, ಉಪ ಮುಖ್ಯಮಂತ್ರಿಗಳ ವಿವೇಚನೆಯಲ್ಲಿ ಮೀಸಲಿಟ್ಟ ಅನುದಾನದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹10 ಕೋಟಿ ನೀಡಲಾಗಿದೆ. ಆ ಹಣವನ್ನೂ ಬಳಕೆ ಮಾಡಿಕೊಂಡು ಕೊಳವೆ ಬಾವಿ ಕೊರೆಯಲಾಗುವುದು. ಜಲ ಮಂಡಳಿಯು ನೀರಿನ ಸಮಸ್ಯೆ ಇರುವ ಕಡೆ ಕೊಳವೆ ಬಾವಿ ಕೊರೆಯುವುದಕ್ಕೆ ₹20 ಕೋಟಿ ಮೀಸಲಿಟ್ಟಿದ್ದು, ಅಗತ್ಯಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಿದೆ,

ಜಲಮಂಡಳಿ ಅಧಿಕಾರಿ ಬಿಬಿಎಂಪಿಗೆ ಅಧೀನಕ್ಕೆ

ನೀರಿನ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ 110 ಹಳ್ಳಿ ವ್ಯಾಪ್ತಿಯಲ್ಲಿ ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನಕ್ಕೆ ನಿಯೋಜನೆ ಮಾಡಿರುವ ಜಲ ಮಂಡಳಿಯ ಅಧಿಕಾರಿ ಸಿಬ್ಬಂದಿಯನ್ನು ಒಂದು ವಾರದಲ್ಲಿ ಬಿಬಿಎಂಪಿಯ ಆಯಾ ವಲಯ ಆಯುಕ್ತರ ಅಧೀನಕ್ಕೆ ನೀಡಲಾಗುವುದು. ನೀರಿನ ಸಮಸ್ಯೆ ಬಂದರೆ ಆಯಾ ವಲಯ ಆಯುಕ್ತರು ನಿರ್ದೇಶನದಂತೆ ಪಾಲಿಕೆ ಮತ್ತು ಜಲಮಂಡಳಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.

ಹಲವು ಕಡೆ ಆರ್‌ಒ ಘಟಕ ಸ್ಥಗಿತ

ಆರ್‌.ಆರ್‌.ನಗರ ವಲಯದ ವ್ಯಾಪ್ತಿಯಲ್ಲಿ 35, ಮಹದೇವಪುರದಲ್ಲಿ 22 ಹಾಗೂ ಪೂರ್ವ ವಲಯದಲ್ಲಿ 12 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಆರ್‌ಒ ಫ್ಲಾಂಟ್‌ಗಳಿಗೆ ನೀರಿನ ವ್ಯವಸ್ಥೆ ಮಾಡುವವರೆಗೆ ತಾತ್ಕಾಲಿಕವಾಗಿ ನೀರಿನ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ₹9 ಕೋಟಿ ನೀಡಲಾಗಿದೆ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬೆಂಗಳೂರು ಕಾವೇರಿ ನೀರುಗಳ್ಳರಿಗೆ ಜಲಮಂಡಳಿ ಬಿಗ್ ಶಾಕ್ ; ಅಕ್ರಮ ನೀರಿನ ಸಂಪರ್ಕಕ್ಕೆ ದಂಡ ಅಷ್ಟೇ ಅಲ್ಲ, ಜೈಲೂಟ ಫಿಕ್ಸ್!

1,214 ಬೋರ್‌ವೆಲ್‌ ಖಾಲಿ

 ಬೆಂಗಳೂರು ವ್ಯಾಪ್ತಿಯಲ್ಲಿ ವಾರ್ಷಿಕವಾಗಿ 19 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗುತ್ತಿದ್ದು, ಪ್ರತಿನಿತ್ಯ ಸುಮಾರು 1,472 ಎಂ.ಎಲ್.ಡಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಫೆಬ್ರವರಿಯಿಂದ ಜುಲೈವರೆಗೆ ಅಂದಾಜು 9.48 ಟಿಎಂಸಿ ನೀರು ಅವಶ್ಯಕತೆಯಿದೆ. ನಗರದಲ್ಲಿ ಜಲಮಂಡಳಿಯಿಂದ 10.84 ಲಕ್ಷ ನೀರಿನ ಸಂಪರ್ಕ ಹೊಂದಿವೆ. ನಗರದಲ್ಲಿ 10,955 ಕೊಳವೆ ಬಾವಿಗಳಲ್ಲಿ 1,214 ಕೊಳವೆ ಬಾವಿಗಳು ಬತ್ತಿದ್ದು, 3,700 ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಸಂಬಂಧ ಸರಿಪಡಿಸಬಹುದಾದ ಕೊಳವೆ ಬಾವಿಗಳನ್ನು ಗುರುತಿಸಿ ಅಂತಹವುಗಳನ್ನು ಫ್ಲಷಿಂಗ್ ಹಾಗೂ ಮರು ಕೊರೆಯುವುದಕ್ಕೆ ಕ್ರಮವಹಿಸಲಾಗುತ್ತಿದೆ.

ಏಪ್ರಿಲ್‌ ಅಂತ್ಯ ಹಾಗೂ ಮೇ ಮೊದಲ ವಾರದಲ್ಲಿ ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆ ಆರಂಭಗೊಳ್ಳಲಿದೆ. ಆಗ ಹೆಚ್ಚುವರಿ 772 ಎಂಎಲ್‌ಡಿ ಹೆಚ್ಚುವರಿ ನೀರು ನಗರಕ್ಕೆ ಲಭ್ಯವಾಗಲಿದೆ. ಆ ನೀರನ್ನು 110 ಹಳ್ಳಿ ವ್ಯಾಪ್ತಿಗೆ ಪೂರೈಕೆ ಮಾಡಲಾಗುತ್ತದೆ.

Follow Us:
Download App:
  • android
  • ios