ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಅಕ್ರಮ ನಿವಾಸಿಗಳ ತೆರವು ಪ್ರಕರಣದಲ್ಲಿ, ಪುನರ್ವಸತಿಗಾಗಿ ಅರ್ಜಿ ಸಲ್ಲಿಸಿದ್ದ 262 ಕುಟುಂಬಗಳ ಪೈಕಿ ಕೇವಲ 37 ಮಾತ್ರ ಅರ್ಹರೆಂದು ತಿಳಿದುಬಂದಿದೆ. 5 ವರ್ಷಗಳ ನಿರಂತರ ವಾಸದ ದಾಖಲೆಗಳನ್ನು ಹೊಂದಿದವರನ್ನು ಮಾತ್ರ ಪರಿಗಣಿಸಲಾಗಿದೆ.
ಬೆಂಗಳೂರು (ಜ.06): ಬೆಂಗಳೂರು ನಗರದ ಯಲಹಂಕ ಸಮೀಪದ ಕೋಗಿಲು (Kogilu) ಅಕ್ರಮ ನಿವಾಸಿಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುನರ್ವಸತಿ ಪ್ರಕ್ರಿಯೆ ಈಗ ಅಂತಿಮ ಹಂತಕ್ಕೆ ತಲುಪಿದೆ. ಮನೆ ಕಳೆದುಕೊಂಡವರ ಪೈಕಿ ಹೊಸ ಮನೆ ಪಡೆಯಲು ಸಲ್ಲಿಕೆಯಾಗಿದ್ದ 262 ಅರ್ಜಿಗಳ ಪೈಕಿ ಕೇವಲ 37 ಮಂದಿ ಮಾತ್ರ ಅರ್ಹರಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ದಾಖಲೆಗಳ ಕೂಲಂಕಷ ಪರಿಶೀಲನೆ
ರಾಜೀವ್ ಗಾಂಧಿ ವಸತಿ ನಿಗಮದ (Rajiv Gandhi Housing Corporation) ಕಠಿಣ ಷರತ್ತುಗಳ ಅನ್ವಯ ಅಧಿಕಾರಿಗಳು ಅಂತಿಮ ಹಂತದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಒಟ್ಟು 262 ಮಂದಿ ಪುನರ್ವಸತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ನಡೆಸಿದ ಸರ್ವೇಯ ನಂತರ ಕೇವಲ 35 ರಿಂದ 40 ಜನರ ದಾಖಲೆಗಳು ಮಾತ್ರ ಸರಿಯಾಗಿರುವುದು ಕಂಡುಬಂದಿದೆ. ಈ ಪೈಕಿ ಬೆಂಗಳೂರಿನಲ್ಲಿ ದೀರ್ಘಕಾಲದಿಂದ ವಾಸವಿರುವ 37 ಮಂದಿಯನ್ನು ಮಾತ್ರ ಮನೆ ಪಡೆಯಲು ಅರ್ಹರು ಎಂದು ಗುರುತಿಸಲಾಗಿದೆ.
ವಸತಿ ಸಚಿವರಿಗೆ ಮಾಹಿತಿ
ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಜಿಬಿಎ (GBA) ಅಧಿಕಾರಿಗಳು ಸಚಿವ ಕೃಷ್ಣಬೈರೇಗೌಡ (Krishna Byre Gowda) ಹಾಗೂ ಸಚಿವ ಜಮೀರ್ ಅಹ್ಮದ್ (Zameer Ahmed) ಅವರಿಗೆ ನೀಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಲಭ್ಯವಾಗಿರುವ ಅಂಕಿಅಂಶಗಳ ಪ್ರಕಾರ, ತೆರವುಗೊಳಿಸಲಾದ ಮನೆಗಳ ಸಂಖ್ಯೆ 83 ಆಗಿದ್ದರೂ, 119 ಮನೆಗಳ ಸರ್ವೇ ನಡೆಸಲಾಗಿತ್ತು. ಇದರಲ್ಲಿ 118 ಮಂದಿ ಆಧಾರ್ ಕಾರ್ಡ್ ಹೊಂದಿದ್ದರೆ, ಕೇವಲ 77 ಕುಟುಂಬಗಳ ಬಳಿ ರೇಷನ್ ಕಾರ್ಡ್ (Ration Card) ಇದೆ. ಆದಾಯ ಪ್ರಮಾಣ ಪತ್ರ (Income Certificate) ಕೇವಲ 63 ಕುಟುಂಬಗಳ ಬಳಿ ಮಾತ್ರ ಇರುವುದು ಪತ್ತೆಯಾಗಿದೆ.
ಅರ್ಹತೆಗೆ ಮಾನದಂಡವೇನು? ಅರ್ಹ ಫಲಾನುಭವಿಗಳನ್ನು ಗುರುತಿಸಲು ಅಧಿಕಾರಿಗಳು ಹಲವು ಕಠಿಣ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.
- ಕಳೆದ 5 ವರ್ಷಗಳ ದಾಖಲಾತಿ (Documents of last 5 years) ಕಡ್ಡಾಯವಾಗಿರಬೇಕು.
- ಬೆಸ್ಕಾಂ (BESCOM) ಅಧಿಕಾರಿಗಳಿಂದ ವಿದ್ಯುತ್ ಸಂಪರ್ಕದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.
- ಕಳೆದ ಚುನಾವಣೆಯ ಮತದಾನದ ಪಟ್ಟಿ (Voter List) ಪರಿಶೀಲಿಸಿ, ಅವರು ಇಲ್ಲಿಯೇ ವೋಟ್ ಹಾಕಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ.
- ಆಧಾರ್ ಮತ್ತು ವೋಟರ್ ಐಡಿ ವಿತರಣೆಯಾದ ಸಮಯವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ.
ರೇಷನ್ ಕಾರ್ಡ್ ಪಡೆದುಕೊಂಡಿದ್ದರ ಬಗ್ಗೆ ತನಿಖೆ
ಕೋಗಿಲು ಲೇಔಟ್ನಲ್ಲಿ ಅಕ್ರಮ ನಿವಾಸಿಗಳ ದಾಖಲಾತಿ ಪರಿಶೀಲನೆ ಕಾರ್ಯಕ್ಕೆ ಚುರುಕು ನಿಡಲಾಗಿದೆ. ಶತಾಯ ಗತಾಯ ಇವ್ತೇ ಪಟ್ಟಿ ಫೈನಲ್ ಮಾಡಲು ಸರ್ಕಸ್ ಮಾಡಲಾಗುತ್ತಿದೆ. ಕಳೆದ ಚುನಾವಣೆಯ ಮತದಾನದ ಪಟ್ಟಿ ಪರಿಶೀಲನೆ ಮಾಡಲಾಗುತ್ತಿದೆ. ಇಲ್ಲಿರುವ ಜನರು ವೋಟ್ ಹಾಕಿದ್ದಾರಾ ಅನ್ನೋದರ ಪರಿಶೀಲನೆಯನ್ನೂ ಮಾಡಲಾಗುತ್ತಿದೆ. ಜೊತೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂಂ) ಅಧಿಕಾರಿಗಳಿಂದ ಕರೆಂಟ್ ಕನೆಕ್ಷನ್ ಹೇಗೆ ಪಡೆದುಕೊಮಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸರ್ಕಾರದಿಂದ ರೇಷನ್ ಕಾರ್ಡ್ ವಿತರಣೆ ಮಾಡಿಲ್ಲ. ಆದರೂ, ಇವರು ಯಾವಾಗ ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ, ಇದಕ್ಕೆ ಏನೆಲ್ಲಾ ಆಧಾರಗಳನ್ನು ಒದಗಿಸಿದ್ದಾರೆ ಎಂಬ ಮಾಹಿತಿ ಕಲೆಹಾಕಲಾಗಿದೆ.
5 ವರ್ಷಗಳ ದಾಖಲೆ ಇದ್ದವರಿಗೆ ಮಾತ್ರ ಮನೆ
ಕೋಗಿಲು ಬಡಾವಣೆಯಲ್ಲಿ ಅಕ್ರಮ ನಿವಾಸಿಗಳ ಬಳಿ ಕಳೆದ 5 ವರ್ಷದ ಡಾಕ್ಯುಮೆಂಟ್ ಇದೆಯಾ ಅನ್ನೋದರ ಪರಿಶೀಲನೆ ಕಾರ್ಯವನ್ನು ಮಾಡಲಾಗಿದೆ. ಇದರಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಯಾವಾಗ ವಿತರಣೆಯಾಗಿದ್ದು ಅನ್ನೋದರ ತನಿಖೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ 5 ವರ್ಷಗಳ ದಾಖಲಾತಿ ಇದ್ದವರಿಗೆ ಮಾತ್ರ ರಾಜೀವ್ ಗಾಂಧಿ ವಸತಿ ನಿಗಮದಡಿ ನಿರ್ಮಿಸಲಾದ ಮನೆಯನ್ನು ನೀಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ ಎಂಬುದು ಹೊರಬಿದ್ದಿದೆ.


