ಸುಮಾರು 90 ವರ್ಷದ ಬಳಿಕ ಮುಸ್ಲಿಂ ಖಾಜಿಗಳಿಂದ ಕುರಾನ್‌ ಪಠಣ ಮಾಡದೇ ಬೇಲೂರಿನ ಶ್ರೀ ಚನ್ನಕೇಶವ ರಥೋತ್ಸವ ನೆರವೇರಿಸಲಾಗಿದೆ.

ಹಾಸನ (ಏ.04): ಸುಮಾರು 90 ವರ್ಷದ ಬಳಿಕ ಮುಸ್ಲಿಂ ಖಾಜಿಗಳಿಂದ ಕುರಾನ್‌ ಪಠಣ ಮಾಡದೇ ಬೇಲೂರಿನ ಶ್ರೀ ಚನ್ನಕೇಶವ ರಥೋತ್ಸವ ನೆರವೇರಿಸಲಾಗಿದೆ. ಈ ಹಿಂದೆ ರಥೋತ್ಸವದ ಮುಂದೆ ಮುಸ್ಲಿಂ ಖಾಜಿಗಳು ಕುರಾನ್‌ ಪಠಣ ಮಾಡುತ್ತಿದ್ದರು. ಈ ವರ್ಷದಿಂದ ನಿಯಮಾವಳಿ ಬದಲಾಯಿಸಲಾಗಿದ್ದು, ದೇವಾಲಯದ ಬಾವಿ ಬಳಿ ಮುಸ್ಲಿಂ ಖಾಜಿಗಳಿಗೆ ಪ್ರಾರ್ಥನೆ ಮಾಡಲಿಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. 

Add Asianetnews Kannada as a Preferred SourcegooglePreferred

ಕನ್ನಡ ನಾಡನ್ನಾಳಿದ ಹೊಯ್ಸಳ ಸಾಮ್ರಾಜ್ಯದ ಆರಾಧ್ಯ ದೈವವಾದ ಹಾಗೂ ರಾಜ್ಯದ ವಾಸ್ತುಶಿಲ್ಪ ಮತ್ತು ಕಲೆಗಳಿಗೆ ಪ್ರಸಿದ್ಧಿಯಾಗಿರುವ ಬೇಲೂರಿನ ಚನ್ನಕೇಶವ ದೇವಾಲಯದ ಮುಂದೆ ಮುಸ್ಲಿಂ ಖಾಜಿಗಳಿಂದ ರಥದ ಮುಂದೆ ಕುರಾನ್‌ ಪಠಣ ಮಾಡಲಾಗುತ್ತಿತ್ತು. ಈ ಬಗ್ಗೆ ಸುಮಾರು 90 ವರ್ಷಗಳ ಹಿಂದೆ ದೇವಾಲಯದ ಆಡಳಿತ ಕೈಪಿಡಿಯಲ್ಲಿ ಸೇರಿಸಲಾಗಿತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಹಿಂದೂಪರ ಸಂಘಟನೆಗಳಿಂದ ಕುರಾನ್‌ ಪಠಣದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೈಪಿಡಿಯನ್ನು ಪರಿಶೀಲನೆ ಮಾಡಿದಾಗ ದೇವಾಲಯದ ಮೆಟ್ಟಿಲುಗಳ ಬಳಿ ಮುಸ್ಲಿಂ ಖಾಜಿಗಳಿಂದ ಗೌರವ ಸಲ್ಲಿಸಲು ಹೇಳಲಾಗಿದೆ. ಆದ್ದರಿಂದ ಹಿಂದೆ ಇದ್ದ ನಿಯಮಾವಳಿಗಳನ್ನು ಬದಲಿಸಲಾಗಿದೆ.

ಬೇಲೂರು ಜಾತ್ರೋತ್ಸವದ ವೇಳೆ ಕುರಾನ್ ಪಠಣ: ಹಿಂದೂ ದೇವರ ಮುಂದೆ ಅಲ್ಲನೇ ಎಲ್ಲಾ ಎಂದರೆ ಒಪ್ಪಿಕೊಳ್ಳೋದು ಹೇಗೆ?

ದೇವಾಲಯ ಸಮಿತಿ ಅಧ್ಯಕ್ಷ ಡಾ.ನಾರಾಯಣ ಸ್ವಾಮಿ ಸ್ಪಷ್ಟನೆ: ಹಾಸನ ಬೇಲೂರಿನ ಚನ್ನಕೇಶವ ಸ್ವಾಮಿ ರಥೋತ್ಸವದ ವೇಳೆ ಮುಸ್ಲಿಂ ಖಾಜಿಯವರು ಖುರಾನ್ ಪಠಣ ಮಾಡಿಲ್ಲ, ಕೇವಲ ಪ್ರಾರ್ಥನೆ ಮಾಡಿದ್ದಾರೆ. ಈ ಮೂಲಕ ಯಾವುದೇ ಗೊಂದಲ ಆಗಿಲ್ಲ ಎಂದು ರಥೋತ್ಸವದ ಬಳಿಕ ಮಾದ್ಯಮಗಳಿಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಪಷ್ಟನೆ ನೀಡಿದ್ದಾರೆ. ಖಾಜಿಯವರು ಬಂದು ರಥದ ಸಮೀಪ ಇರೋ ಬಾವಿ ಎದುರು ದೇವರಿಗೆ ನಮಿಸಿ ಪ್ರಾರ್ಥನೆ ಮಾಡಿದ್ದಾರೆ. ಇನ್ನು ಅವರು ಪ್ರಾರ್ಥನೆ ಮಾಡಿದ್ದಕ್ಕೆ ದೇವಾಲಯದಿಂದ ಗೌರವ ಸಮರ್ಪಣೆ ಮಾಡಲಾಗಿದೆ. ತಾನು ಖುರಾನ್ ಪಠಣ ಮಾಡಿಲ್ಲ ಪ್ರಾರ್ಥನೆ ಮಾಡಿ ಗೌರವ ಸ್ವೀಕಾರ ಮಾಡಿದ್ದೇನೆ ಎಂದು ಬರೆದು ಸಹಿ ಮಾಡಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಕೇವಲ ಪ್ರಾರ್ಥನೆ ಮಾಡಿದ್ದೇನೆಂದ ಮುಸ್ಲಿಂ ಖಾಜಿ: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುಸ್ಲಿಂ ಖಾಜಿ ಸಜ್ಜದ್ ಭಾಷಾ ಖಾದ್ರಿ ಸಾಹೇಬ್ ಅವರು, ಇಂದು ಬೆಳಗ್ಗೆ ನಡೆದ ಬೇಲೂರಿನ ಚನ್ನಕೇಶವ ಸ್ವಾಮಿ ರಥೋತ್ಸವದ ವೇಳೆ ದಾರ್ಮಿಕ ದತ್ತಿ ಆಯುಕ್ತರ ಆದೇಶದಂತೆ ಈ ದಿನ ನಾನು ದೇವಾಲಯ ದ ಮೆಟ್ಟಿಲ ಬಳಿ ನಮ್ಮ ರೀತಿಯಂತೆ ದೇವರಿಗೆ ಶ್ಲೋಕ ಹೇಳಿ ವಂದನೆ ಸಮರ್ಪಣೆ ಮಾಡಿದ್ದೇನೆ. ದೇವಾಲಯದ ವತಿಯಿಂದ ನೀಡಿದ ಮರ್ಯಾದೆಯನ್ನು ಸ್ವೀಕರಿಸುತ್ತೇನೆ. ಈ ದಿನ ನಾನು ಖುರಾನ್ ಪಠಣ ಮಾಡಿಲ್ಲ ಎಂದು ಮಾಹಿತಿ ನೀಡಿದರು.

ಬೇಲೂರು ಚನ್ನಕೇಶವ ರಥದ ಮುಂದೆ ಕುರಾನ್ ಪಠಣ ಮಾಡಬೇಕೆಂದು ಹೇಳಿಲ್ಲ!: ಕೈಪಿಡಿಯ ಮಾಹಿತಿ ಹೀಗಿದೆ.!

ಕುರಾನ್‌ ಓದಿಲ್ಲ ಎಂದು ಪತ್ರದಲ್ಲಿ ಸಹಿ: ಚನ್ನಕೇಶವರ ರಥದ ಎದುರು ಮುಸ್ಲಿಂ ಧಾರ್ಮಿಕ ವಿಧಿಯಂತೆ ನಮಿಸಿದ ಬಗ್ಗೆ ಮುಸ್ಲಿಂ ಖಾಜಿ ಸಜ್ಜದ್ ಭಾಷಾ ಖಾದ್ರಿ ಸಾಹೇಬ್ ಅವರು ಪತ್ರ ಬರೆದು ಸಹಿ ಮಾಡಿಕೊಟ್ಟಿದ್ದಾರೆ. ದೇವಾಲಯ ದ ಲೆಟರ್ ಹೆಡ್‌ನಲ್ಲಿ ಬರೆದು ಸಹಿ ಮಾಡಿಕೊಟ್ಟಿದ್ದಾರೆ. ಇನ್ನು ದೇವರ ರಥದ ಮುಂದೆ ಖುರಾನ್ ಪಠಣಕ್ಕೆ ತೀವ್ರ ವಿರೊಧ ವ್ಯಕ್ತವಾಗಿತ್ತು. ಹಾಗಾಗಿ ವಿರೋಧದ ನಡುವೆ ಕೂಡ ರಥದ ಸಮೀಪ ಪ್ರತ್ಯೇಕ ಜಾಗದಲ್ಲಿ ಖುರಾನ್ ಪಠಣಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ಕೇಳಿಬಂದಿದೆ. ಆದರೆ, ಖುರಾನ್ ಸಾಲುಗಳನ್ನು ಹೇಳಿದ ಮುಸ್ಲಿಂ ಖಾಜಿ ಅವರೇ ಸ್ವತಃ ತಾನು ಕುರಾನ್ ಓದಿಲ್ಲ ಎಂದು ಪತ್ರ ಬರೆದುಕೊಟ್ಟಿದ್ದಾರೆ.