ಬಿಜೆಪಿಗೆ ಬಿಸಿತುಪ್ಪವಾಯ್ತು ಸಿಎಂ ಕುಮಾರಸ್ವಾಮಿ ಬಾಣ
ಮುಖ್ಯಮಂತ್ರಿ ಕುಮಾರಸ್ವಾಮಿ ಕುಮಾರಸ್ವಾಮಿ ಅವರ ಈ ನಿರ್ಧಾರ ಇದೀಗ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಬೆಂಗಳೂರು : ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿಯಾಗಿ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ ಭರವಸೆ ವಿಚಾರದಲ್ಲಿ ಬಿಜೆಪಿಯು ಇಕ್ಕಟ್ಟಿಗೆ ಸಿಲುಕಿದಂತೆ ಕಂಡುಬಂದಿದ್ದು, ಈ ಸಂಬಂಧ ಪಕ್ಷದ ನಾಯಕರು ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡುವಂತೆ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೂಕ್ಷ್ಮವಾಗಿ ಮೌಖಿಕ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಘೋಷಿಸುವ ವಿಚಾರದಲ್ಲಿ ಬಿಜೆಪಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ಒಂದು ವೇಳೆ ಘೋಷಿಸದಂತೆ ವಿರೋಧ ವ್ಯಕ್ತಪಡಿಸಿದರೆ, ಉತ್ತರ ಕರ್ನಾಟಕದ ಜನತೆಯ ವಿರೋಧ ವ್ಯಕ್ತವಾಗಲಿದೆ. ಘೋಷಿಸುವಂತೆ ಒತ್ತಾಯಿಸಿದರೆ ಬೆಳಗಾವಿ ಜಿಲ್ಲೆಯಲ್ಲಿನ ಮರಾಠ ಸಮುದಾಯದ ಮತದಾರರ ಒಲವು ಕಳೆದುಕೊಳ್ಳಬೇಕಾಗಿ ಬರಬಹುದು ಎಂಬ ಆತಂಕವಿದೆ. ಜತೆಗೆ ಭರವಸೆ ನೀಡಿದ ಕುಮಾರ ಸ್ವಾಮಿಗೆ ಸುಲಭವಾಗಿ ‘ಮೈಲೇಜ್’ ನೀಡಿದಂತಾಗುತ್ತದೆ. ಅಲ್ಲದೆ, ನೆರೆಯ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮುಜುಗರ ಉಂಟಾಗಬಹುದೇನೋ ಎಂಬ ಕಾರಣ ಕ್ಕಾಗಿ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರ ಮತ್ತು ಬೆಳಗಾವಿ ಗಡಿ ವಿವಾದ ಈವರೆಗೂ ಬಗೆಹರಿದಿಲ್ಲ. ಈ ಸಂಬಂಧ ಶಿವಸೇನೆಯು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ ಬೇಕೆಂದು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಈವರೆಗೂ ಬಗೆಹರಿದಿಲ್ಲ. ಈಗಾಗಲೇ ಬೆಳಗಾವಿಯನ್ನು ಎರಡನೇ ರಾಜಧಾನಿ ಯನ್ನಾಗಿ ಘೋಷಿಸುವ ಬಗ್ಗೆ ಶಿವಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇದರ ನಡುವೆಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯನ್ನು ಎರಡನೇ ರಾಜ ಧಾನಿಯಾಗಿ ಘೋಷಿಸುವ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ಹೇಳಿರುವುದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಹೀಗಾಗಿ, ಎರಡೂ ರಾಜ್ಯದ ಒಲವು ಗಳಿಸುವ ಆಲೋಚನೆಯಲ್ಲಿರುವ ರಾಜ್ಯದ ಬಿಜೆಪಿ ನಾಯಕರು, ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ದಿಕ್ಕು ತೋಚದಂತಾಗಿದ್ದಾರೆ. ಹೀಗಾಗಿ ಯಾವುದೇ ರೀತಿಯಲ್ಲಿ ದ್ವಂದ್ವ ಹೇಳಿಕೆಗಳನ್ನು ನೀಡಬಾರದು ಎಂದು ಪಕ್ಷದ ವತಿಯಿಂದ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.