'ವಿಧವಾ ವೇತನದಿಂದ ಸಾಲ ಜಮೆ ಅಪರಾಧ'
ಕಂದಾಯ ಸಚಿವ ಆರ್. ಅಶೋಕ್ ಕನ್ನಡ ಪ್ರಭದ ವರದಿಯೊಂದನ್ನು ಕಲಾಪದ ವೇಳೆ ಪ್ರಸ್ತಾಪಿಸಿದ್ದಾರೆ. ವಿಧವಾ ವೇತನವನ್ನು ಸಾಲದ ಹಣಕ್ಕೆ ಜಮೆ ಮಾಡಿರುವ ಸಂಬಂಧ ಮಾತನಾಡಿದ್ದಾರೆ.
ವಿಧಾನ ಪರಿಷತ್ (ಸೆ.22): ವಿಧವಾ ವೇತನಾ, ವೃದ್ಧಾಪ್ಯ ವೇತನ, ಪಿಂಚಣಿಯ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುವ ಬ್ಯಾಂಕ್ಗಳ ಕ್ರಮ ಅಪರಾಧ. ಈ ರೀತಿ ಮಾಡುವಂತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮಳೆಯಿಂದ ರಾಜ್ಯದಲ್ಲಿ ಆಗಿರುವ ಅನಾಹುತದ ಬಗ್ಗೆ ವಿಧಾನ ಪರಿಷತ್ ನಲ್ಲಿ ನಿಯಮ 68ರಡಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ವಿಧವಾ ವೇತನವೂ ರೈತರ ಸಾಲದ ಖಾತೆಗೆ ಜಮೆ ಎಂಬ ವರದಿಯನ್ನು ಪ್ರಸ್ತಾಪಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ್ ಅರಳಿ, ರೈತರ ಖಾತೆಗೆ ಬೀಳುವ ಪರಿಹಾರ ಹಣ, ವಿಧವಾ, ವೃದ್ಧಾಪ್ಯ ವೇತನ, ಪಿಎಂ ಮತ್ತು ಸಿಎಂ ಕಿಸಾನ್ ಸಮ್ಮಾನ್ ನ ಹಣ ಮುಂತಾದವನ್ನು ರೈತರ ಸಾಲದ ಖಾತೆಗೆ ಜಮೆ ಮಾಡಲಾಗುತ್ತಿದೆ. ಆದ್ದರಿಂದ ಸರ್ಕಾರ ತಕ್ಷಣವೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
' ಕಾಂಗ್ರೆಸ್ ವಿಷಯದಲ್ಲಿ ಬಿಜೆಪಿ ಮುಖಂಡ ತಲೆ ಹಾಕುವ ಚಾಳಿ ಬಿಡಲಿ' .
ಅರಳಿ ಅವರ ಪ್ರಸ್ತಾಪಕ್ಕೆ ಸ್ಪಂದಿಸಿದ ಅಶೋಕ್, ‘ವಿಧವಾ ವೇತನ, ವೃದ್ಧಾಪ್ಯ ವೇತನದ ಹಣವನ್ನು ಸಾಲದ ಖಾತೆಗೆ ಜಮೆ ಮಾಡುವುದು ಅಪರಾಧ. ಪಿಂಚಣಿಯನ್ನು ಸಾಲದ ಖಾತೆಗೆ ಹಾಕುವಂತೆ ಇಲ್ಲ. ಈ ರೀತಿ ಆಗಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ. ನೀವು ನನಗೆ ಮಾಹಿತಿಯನ್ನು ನೀಡಿ. ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ’ ಎಂದು ಆಶೋಕ್ ಸದನಕ್ಕೆ ತಿಳಿಸಿದರು.
ಅರಳಿ ಅವರು ‘ಯಾದಗಿರಿ ಜಿಲ್ಲೆಯಲ್ಲಿ ಪಿಎಂ ಮತ್ತು ಸಿಎಂ ಕಿಸಾನ್ ಸಮ್ಮಾನ್ ನಡಿ ಬರುವ ಹಣ ರೈತರ ಖಾತೆಗೆ ನೀಡುವ ಹಣ ಫಲಾನುಭವಿ ಖಾತೆಗೆ ಹೋಗದೆ ಸಾಲದ ಖಾತೆಗೆ ಹೋಗುತ್ತಿದೆ. ಈ ರೀತಿ ಆಗಬಾರದು’ ಎಂದು ಸರ್ಕಾರದ ಗಮನಕ್ಕೆ ತಂದರು.