Asianet Suvarna News Asianet Suvarna News

Jamia Masjid Srirangapatna: ಶ್ರೀರಂಗಪಟ್ಟಣ ದೇಗುಲ ಕೆಡವಿ ಮಸೀದಿ: ಪಿಐಎಲ್‌

ಟಿಪ್ಪು ಸುಲ್ತಾನ್‌ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ‘ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯ’ವನ್ನು ಧ್ವಂಸಗೊಳಿಸಿ ಜಾಮಿಯಾ ಮಸೀದಿ ನಿರ್ಮಿಸಿದರು ಎನ್ನಲಾದ ವಿವಾದ ಇದೀಗ ಹೈಕೋರ್ಟ್‌ ಅಂಗಳಕ್ಕೆ ತಲುಪಿದೆ. 

Bajrang Sena Petition to High Court seeking direction for survey of Srirangapatna Jamia Masjid gvd
Author
First Published Nov 18, 2022, 8:22 AM IST

ಬೆಂಗಳೂರು (ನ.18): ಟಿಪ್ಪು ಸುಲ್ತಾನ್‌ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ‘ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯ’ವನ್ನು ಧ್ವಂಸಗೊಳಿಸಿ ಜಾಮಿಯಾ ಮಸೀದಿ ನಿರ್ಮಿಸಿದರು ಎನ್ನಲಾದ ವಿವಾದ ಇದೀಗ ಹೈಕೋರ್ಟ್‌ ಅಂಗಳಕ್ಕೆ ತಲುಪಿದೆ. ಈ ಕುರಿತು ಭಜರಂಗ ಸೇನೆ ಸಂಘಟನೆಯು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನ-ಜಾಮಿಯಾ ಮಸೀದಿ ಜಾಗದ ಬಗ್ಗೆ ಪುರಾತತ್ವ ಶಾಸ್ತ್ರ ಅಧ್ಯಯನ, ಸರ್ವೆ ಹಾಗೂ ಉತ್ಖನನ ನಡೆಸಿ 30 ದಿನಗಳಲ್ಲಿ ಹೈಕೋರ್ಟ್‌ಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದೆ.

ಹಾಗೆಯೇ, ಆನಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯ ಕುರುಹುಗಳಾಗಿರುವ ಗರುಡ ಕಂಬ, ಕಲ್ಯಾಣಿ, ಸ್ತೂಪ, ಸ್ತಂಭ, ಹಿಂದೂ ದೇವ-ದೇವತೆಗಳ ಕಲ್ಲಿನ ಕೆತ್ತನೆಗಳು ಹಾಗೂ ಭೂಗತ ದೇವಸ್ಥಾನದ ಭಾಗ, ದೇವಸ್ಥಾನದ ವಾಸ್ತು ಶಿಲ್ಪ, ದೇವಸ್ಥಾನದ ವಿನ್ಯಾಸ, ಹೂತಿಟ್ಟವಿಗ್ರಹಗಳನ್ನು ಸಂರಕ್ಷಿಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಲಾಗಿದೆ.

Mandya: ಹೈಕೋರ್ಟ್‌ ಅಂಗಳಕ್ಕೆ ಜಾಮೀಯಾ ಮಸೀದಿ ವಿವಾದ

ಅರ್ಜಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಜರಾಯಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ, ರಾಜ್ಯ ಧಾರ್ಮಿಕ ಪರಿಷತ್‌ ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಅನಾದಿ ಕಾಲದಿಂದಲೂ ಈ ಪವಿತ್ರ ದೇವಸ್ಥಾನ ಹಾಗೂ ತೀರ್ಥಯಾತ್ರ ಸ್ಥಳವಾಗಿತ್ತು. ವಿಜಯನಗರ ಸಾಮ್ರಾಜ್ಯ, ಮೈಸೂರು ಸಾಮ್ರಾಜ್ಯ ಹಾಗೂ ‘ದಳವಾಯಿ ದೊಡ್ಡಯ್ಯ’ ಸೇರಿ ಅನೇಕ ಆಡಳಿತಗಾರರು ದೇವಾಲಯವನ್ನು ಆರಾಧನೆ, ಸಂರಕ್ಷಣೆ, ನಿರ್ವಹಣೆ ಹಾಗೂ ಜೀರ್ಣೋದ್ಧಾರ ಮಾಡುತ್ತಾ ಬಂದಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಶ್ರೀರಂಗಪಟ್ಟಣ ಮಸೀದಿಯಲ್ಲಿ ಚಾಲೀಸಾ ಪಠಣ: ಹಿಂದು ಸಂಘಟನೆಗಳ ಪ್ರತಿಭಟನೆ ಬೆನ್ನಲ್ಲೇ ವಿಡಿಯೋ ವೈರಲ್‌

ಮೈಸೂರು ಪ್ರದೇಶದ ಆಡಳಿತ ನಡೆಸಿದ್ದ ಟಿಪ್ಪು ಸುಲ್ತಾನ್‌ ಅವರು 1786ರಿಂದ 1789ರ ನಡುವೆ ಮೂಡಲ ಭಾಗಿಲು ಆಂಜನೇಯ ಸ್ವಾಮಿ ದೇವಸ್ಥಾನವನ್ನು ಭಾಗಶಃ ಧ್ವಂಸಗೊಳಿಸಿ ಅಕ್ರಮವಾಗಿ ಜಾಮಿಯಾ ಮಸೀದಿಯಾಗಿ ಪರಿವರ್ತಿಸಿದರು. ಆದ್ದರಿಂದ ಟಿಪ್ಪು ಸುಲ್ತಾನ್‌ ಅವರಿಂದ ನಡೆದಿರುವ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವುದು ಸರ್ಕಾರ ಮತ್ತು ಸಂಬಂಧಪಟ್ಟಪ್ರಾಧಿಕಾರಗಳ ಜವಾಬ್ದಾರಿಯಾಗಿದೆ. ಆದ್ದರಿಂದ ಜಾಮಿಯಾ ಮಸೀದಿ ಜಾಗದ ಬಗ್ಗೆ ಪುರಾತತ್ವಶಾಸ್ತ್ರ ಅಧ್ಯಯನ, ಸರ್ವೆ ಹಾಗೂ ಉತ್ಖನನ ನಡೆಸಲು ರಾಜ್ಯ ಸರ್ಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ಆದೇಶಿಸಬೇಕು ಎಂದು ಅರ್ಜಿದಾರ ಸಂಘಟನೆ ಕೋರಿದೆ.

Follow Us:
Download App:
  • android
  • ios