PSI Recruitment : ಪರೀಕ್ಷೆ ಅಕ್ರಮದಲ್ಲಿ ಜೈಲು ಸೇರಿದ್ದ 26 ಆರೋಪಿಗಳಿಗೆ ಜಾಮೀನು
ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಈವರೆಗಿನ ಅತಯಂತ ದೊಡ್ಡ ಹಗರಣವೆಂದೇ ಹೇಳಲಾಗುತ್ತಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಆರೋಪದಲ್ಲಿ ಜೈಲು ಪಾಲಾದ 26 ಜನರಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಕಲಬುರಗಿ (ಜ.05): ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಈವರೆಗಿನ ಅತಯಂತ ದೊಡ್ಡ ಹಗರಣವೆಂದೇ ಹೇಳಲಾಗುತ್ತಿರುವ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಆರೋಪದಲ್ಲಿ ಜೈಲು ಪಾಲಾದ 26 ಆರೋಪಿಗಳಿಗೆ ಇಂದು ಜಾಮೀನು ಮಂಜೂರು ಲಭ್ಯವಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿ ಆರೋಪದ ಮೇಲೆ 26 ಜನರು ಜೈಲು ಪಾಲಾಗಿದ್ದರು. ಕಿಂಗ್ ಪಿನ್ ದಿವ್ಯಾ ಹಾಗರಗಿ , ಮಂಜುನಾಥ್ ಮೇಳಕುಂದಿ , ಕಾಶಿನಾಥ್ ಚಿಲ್ , ಡಿ ವೈ ಎಸ್ ಪಿ ಮಲ್ಲಿಕಾರ್ಜುನ ಸಾಲಿ ಸೇರಿ 26 ಜನರಿಗೆ ಜಾಮೀನು ಲಭ್ಯವಾಗಿದೆ. ಇನ್ನು ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧಿಶರಾದ ಕೆ ಬಿ ಪಾಟೀಲ್ ರಿಂದ ಜಾಮೀನು ಮಂಜೂರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ನ್ಯಾಯಲಯದಿಂದ ಎಲ್ಲ ಆರೋಪಿಗಳಿಗೆ ಷರತ್ತು ಬದ್ದ ಜಾಮೀನು ನೀಡಿ ಆದೇಶ ಹೊರಡಿಸಲಾಗಿದೆ.
ಮಹಾಂತೇಶ ಪಾಟೀಲ್ಗೆ ಭರ್ಜರಿ ಸ್ವಾಗತ: ಪಿ.ಎಸ್.ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬೇಲ್ ಮೇಲೆ ಡಿಸೆಂಬರ್ 17ರಂದು ಹೊರಗೆ ಬಂದಿದ್ದ ಕಾಂಗ್ರೆಸ್ ಮುಖಂಡನಿಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಅಕ್ರಮದ ಕಿಂಗ್ ಪಿನ್ ಆರ್.ಡಿ ಪಾಟೀಲ್ ಸಹೋದರ ಮಹಾಂತೇಶ ಪಾಟೀಲ್ಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಮಾಜಿ ಎಂಎಲ್ಸಿ ಅಲ್ಲಮ ಪ್ರಭು ಪಾಟೀಲ್ ಇನ್ನಿತರಿಂದ ಮಹಾಂತೇಶ್ ಪಾಟೀಲ್ಗೆ ಸನ್ಮಾನ ಮಾಡಲಾಗಿದೆ. ಮಹಾಂತೇಶ ಪಾಟೀಲ್ ಬೇಲ್ ಮೇಲೆ ಹೊರ ಬರುತ್ತಿದ್ದಂತೆಯೇ ಮನೆಗೆ ಹೋಗಿ ಅಲ್ಲಮಪ್ರಭು ಪಾಟೀಲ್ ಸನ್ಮಾನ ಮಾಡಿದ್ದರು.
ಪಿಎಸ್ಐ ಹಗರಣದ ಕಿಂಗ್ಪಿನ್ ಆರ್ಡಿಪಿಗೆ ಮತ್ತೊಂದು ಸಂಕಷ್ಟ?
ಕಾಂಗ್ರೆಸ್ ನಡೆಗೆ ಸಾರ್ವಜನಿಕರು ಆಕ್ರೋಶ: ಒಂದಡೆ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಪಿ.ಎಸ್.ಐ ಅಕ್ರಮದ ಬಗ್ಗೆ ಸರಕಾರದ ವಿರುದ್ದ ಕಿಡಿಕಾರುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ನಾಯಕರು ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳಿಗೆ ಭರ್ಜರಿ ಸ್ವಾಗತ ನೀಡುವ ಮೂಲಕ ಸುದ್ದಿಯಾಗಿದ್ದರು. ಜಾಮೀನಿನ ಮೇಲೆ ಹೊರಬಂದ ಮಹಾಂತೇಶ ಪಾಟೀಲ್ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿದ್ದರು. ಮಹಾಂತೇಶ ಪಾಟೀಲ್ ಮನೆಗೆ ತೆರಳಿ ಶಾಲು ಹೊದಿಸಿ, ಮಾಲೆ ಹಾಕಿ ಅವರ ಬೆಂಬಲಿಗರು ಸನ್ಮಾನ ಮಾಡಿದ್ದರು.
ಜಾಮೀನು ಷರತ್ತು ಪಾಲಿಸದ ಹಿನ್ನೆಲೆಯಲ್ಲಿ ನೋಟಿಸ್: ಪೊಲೀಸ್ ಇಲಾಖೆಯ 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದ ರೂವಾರಿ, ಜೈಲಿನಿಂದ ಹೊರಬಂದಿದ್ದ ಆರ್ಡಿ ಪಾಟೀಲ್ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಂಭವಗಳಿವೆ. ಜಾಮೀನು ಮೇಲೆ ಬಿಡುಗಡೆಗೊಂಡಿರುವ ಆರ್ಡಿ ಪಾಟೀಲ್ ಜೈಲಿನಿಂದ ಬಿಡುಗಡೆ ನಂತರ ಜಾಮೀನಿನ ಷರತ್ತು ಪಾಲಿಸಿಲ್ಲ ಎನ್ನುವ ಕಾರಣಕ್ಕೆ ಸಿಐಡಿ ನೋಟಿಸ್ ಜಾರಿ ಮಾಡಿತ್ತು. ಪಾಸ್ಪೋರ್ಟ್ ಹ್ಯಾಂಡೋವರ್, ಸಿಐಡಿ ಕಚೇರಿಗೆ ಹಾಜರ್ ಆಗುವ ವಿಚಾರ ಸೇರಿದಂತೆ ಜಾಮೀನು ಕೊಡುವಾಗ ಹೈಕೋರ್ಟ್ ವಿಧಿಸಿದ್ದ ಹಲವು ಷರತ್ತುಗಳನ್ನು ಆರ್ಡಿ ಪಾಟೀಲ್ ಉಲ್ಲಂಘಿಸಿದ್ದಾರೆಂದು ಸಿಐಡಿ ಅಧಿಕಾರಿಗಳ ತಂಡ ಆರ್ಡಿ ಪಾಟೀಲ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
PSI Recruitment Scam: ಕೋರ್ಟ್ನಲ್ಲಿ ಪ್ರಕರಣ ಇತ್ಯರ್ಥ ನಂತರ ಸರ್ಕಾರದ ನಿಲುವು, ಆರಗ ಜ್ಞಾನೇಂದ್ರ
ಕೋರ್ಟ್ ತೀರ್ಪು ಬಂದ ಮೇಲೆಯೇ ಸರ್ಕಾರದ ನಿಲುವು: 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ನ್ಯಾಯಾಲಯದಲ್ಲಿದೆ. ಸಿಐಡಿ ತನಿಖಾ ವರದಿ ಬರಬೇಕಿದ್ದು, ನ್ಯಾಯಾಲಯದಲ್ಲೂ ಪ್ರಕರಣ ಇತ್ಯರ್ಥವಾಗಬೇಕಿದೆ. ನಂತರ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದು ಕಳೆದ ಹದಿನೈದು ದಿನಗಳ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದರು. ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಆಯ್ಕೆಯಾಗಿರುವ ನಮಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿ ಬಸ್ತವಾಡ ಬಳಿಯಿರುವ ಪ್ರತಿಭಟನಾ ವೇದಿಕೆಯಲ್ಲಿ ನೊಂದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಸಚಿವರು, ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದವರ ನೋವು ನನಗೂ ಅರ್ಥವಾಗುತ್ತದೆ. ಆದರೆ, ತನಿಖೆ ಪೂರ್ಣವಾಗುವವರೆಗೂ ನಾವು ಕಾಯಬೇಕಾಗುತ್ತದೆ ಎಂದು ತಿಳಿಸಿದ್ದರು.