*  ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲಾತಿ ನೀಡಬೇಕೆಂಬ ಕೂಗು ಮತ್ತೆ ಮುನ್ನಲೆಗೆ* ಸಚಿವ ಶ್ರೀರಾಮುಲು ವಿರುದ್ಧ ವಾಲ್ಮೀಕಿ ಸಮುದಾಯ ಆಕ್ರೋಶ* ನಮ್ಮ ಸಮಾಜಕ್ಕೆ ಶ್ರೀರಾಮುಲು ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಕಿಡಿ 

ಬಾಗಲಕೋಟೆ, (ಫೆ.12): ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲಾತಿ (Reservation) ನೀಡಬೇಕೆಂಬ ಕೂಗು ಮತ್ತೆ ಮುನ್ನಲೆಗೆ ಬಂದಿದ್ದು, ಸಚಿವ ಶ್ರೀರಾಮುಲು (Sriramulu) ಸೇರಿದಂತೆ ಸ್ವ ಸಮುದಾಯದ ಶಾಸಕರ ವಿರುದ್ಧ ಬಾಗಲಕೋಟೆ ವಾಲ್ಮೀಕಿ ಸಮುದಾಯದ (Valmiki Community) ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಗಲಕೋಟೆಯಲ್ಲಿ(Bagalakot) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವಾಲ್ಮೀಕಿ ಸಮುದಾಯದ ಅಧ್ಯಕ್ಷ ದ್ಯಾಮಣ್ಣ ಗಾಳಿ, ನಮ್ಮವರೇ ಶ್ರೀರಾಮುಲು ಸಮಾಜ ಕಲ್ಯಾಣ ಸಚಿವರಿದ್ದರೂ ಅದನ್ನ ಮಾಡಲಿಲ್ಲ.. ನಮ್ಮ ಸಮಾಜಕ್ಕೆ ಶ್ರೀರಾಮುಲು ದೊಡ್ಡ ಅನ್ಯಾಯ ಮಾಡಿದ್ದಾರೆ. ನಮಗೆ ಬೇರೆಯವರು ಅನ್ಯಾಯ ಮಾಡಿಲ್ಲ ನಮ್ಮ ಸಮಾಜದ ಮಂತ್ರಿಗಳೇ ಮಾಡಿದ್ದಾರೆ. ಉಪ ಸಮಿತಿ ಅಧ್ಯಕ್ಷರಾಗಿಯೂ ಮಾಡಲಿಲ್ಲ ಎಂದು ಶ್ರೀರಾಮುಲು ವಿರುದ್ಧ ಕಿಡಿಕಾರಿದರು.

ಬೊಮ್ಮಾಯಿ ಸರ್ಕಾರಕ್ಕೆ ಖಡಕ್‌ ಎಚ್ಚರಿಕೆ ಕೊಟ್ಟ ಮತ್ತೊಬ್ಬ ಸ್ವಾಮೀಜಿ..!

ನಮ್ಮ ಬೇಡಿಕೆಯನ್ನ ಎಲ್ಲ ಸರಕಾರಗಳು ತಾರತಮ್ಯ ಮಾಡಿ, ನಮ್ಮ ಸಮಾಜದ ಮೇಲೆ ಸವಾರಿ ಮಾಡುತ್ತಾ ಬಂದಿವೆ. ನಮ್ಮನ್ನ ಕೇವಲ ಓಟಿಗಾಗಿ ಬಳಸಿಕೊಂಡು, ಯಾವ ಸರ್ಕಾರನೂ ಮೀಸಲಾತಿ ಕೊಟ್ಟಿಲ್ಲ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿ ಕೊಟ್ಟ ಬಳಿಕ ಮತ್ತೆ ಉಪ ಸಮಿತಿ ರಚನೆ ಮಾಡಿದ್ರು ಎಂದು ಕಿಡಿಕಾರಿದರು.

ವಾಲ್ಮೀಕಿ ಸಮುದಾಯದ ಗುರುಗಳು ಬೆಂಗಳೂರಿನಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. 7.5 ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿ ಖಂಡಿಸುತ್ತೇವೆ. ನಮ್ಮ ಮೀಸಲಾತಿ ಹೋರಾಟ ಇವತ್ತಿನದಲ್ಲ. ಕಳೆದ 30 ವರ್ಷಗಳಿಂದ ನಮ್ಮ ಬೇಡಿಕೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು ಮೂರನೇ ಜಾತ್ರೆಯಲ್ಲಿ ಮೂರು ತಿಂಗಳಲ್ಲಿ ಮಾಡ್ತೇನೆ ಎಂದು ಮಾತು ಕೊಟ್ಟಿದ್ರು. ಅಂಗಲಾಚಿ ಬೇಡಿಕೊಂಡರು ಮೂರು ತಿಂಗಳಲ್ಲಿ ಇಳಿದು ಹೋದ್ರು. ಬಸವರಾಜ ಬೊಮ್ಮಾಯಿ ಹಿಂದೆ ಗೃಹ ಸಚಿವರಿದ್ದಾಗ ಸ್ವಾಮೀಜಿಗೆ ಮಾತು ಕೊಟ್ಟಿದ್ರು. ನೀತಿ ಸಂಹಿತೆ ಕಾರಣ ಹೇಳಿ ಸುಳ್ಳು ಭರವಸೆ ಕೊಟ್ಟಿದ್ರು. ಹೋರಾಟಕ್ಕೆ ಯಾವುದೇ ಬೆಲೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ನಮ್ಮ ಸಮಾಜದವರು 17 ಜನ ಶಾಸಕರಿದ್ದಾರೆ. ಮೀಸಲಾತಿ ಹೋರಾಟದ ಬಗ್ಗೆ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಸಚಿವರು, ಶಾಸಕರ ರಾಜ್ಯ ಪ್ರವಾಸದ ವೇಳೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿ, ಅವರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡುತ್ತೇವೆ ಎಂದ ಮುಖಂಡರು ಎಚ್ಚರಿಕೆ ನೀಡಿದರು.

ಪರಿಶಿಷ್ಟ ಪಂಗಡಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 7.5 ರಷ್ಟು ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕ್ರಮಕೈಗೊಳ್ಳದಿದ್ದರೆ, ಸಮುದಾಯದವರೆಲ್ಲರೂ ಸೇರಿ ಅವರನ್ನು ಮನೆಗೆ ಕಳುಹಿಸುತ್ತೇವೆ ಎಂದು ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಸಿದ್ದರು.