ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತಿಪಟೂರು ನಿವಾಸದ ಮುಂದೆ ಬುಧವಾರ ಪ್ರತಿಭಟನೆ ನಡೆಸಿ, ದಾಳಿ ನಡೆಸುವ ಸಂಬಂಧ ಎರಡು ದಿನಗಳ ಮೊದಲೇ ಚರ್ಚೆ ನಡೆದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ತುಮಕೂರು (ಜೂ.03): ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತಿಪಟೂರು ನಿವಾಸದ ಮುಂದೆ ಬುಧವಾರ ಪ್ರತಿಭಟನೆ ನಡೆಸಿ, ದಾಳಿ ನಡೆಸುವ ಸಂಬಂಧ ಎರಡು ದಿನಗಳ ಮೊದಲೇ ಚರ್ಚೆ ನಡೆದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಕ್ಲಬ್ಹೌಸ್ ಆ್ಯಪ್ನ ಆಲದ ಮರದ ಗ್ರೂಪ್ನಲ್ಲಿ 6 ಮಂದಿ ಸುಮಾರು 2 ಗಂಟೆಗಳ ಕಾಲ ಪ್ರತಿಭಟನೆ ಹೇಗೆ ನಡೆಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದರು. ಈ 6 ಮಂದಿ ಪ್ರತಿಭಟನೆಯ ರೂಪುರೇಷೆ ಕುರಿತು ಮಾತನಾಡಿದ್ದರು ಎಂದು ತಿಳಿದುಬಂದಿದೆ. ಆಲದ ಮರ ಎಂಬ ಈ ಗ್ರೂಪ್ನ ಅಡ್ಮಿನ್ ಶಶಾಂಕ್ ಎಂಬುವವರಾಗಿದ್ದು, ಇವರು ತಿಪಟೂರು ಕಾಂಗ್ರೆಸ್ ಮುಖಂಡರೂ ಎಂದು ತಿಳಿದುಬಂದಿದೆ.
12 ದಿನ ನ್ಯಾಯಾಂಗ ಬಂಧನ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತಿಪಟೂರು ಮನೆಗೆ ಮುತ್ತಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎನ್ಎಸ್ಯುಐನ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯ 12 ದಿವಸ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪಠ್ಯ ಬಗ್ಗೆ ಬರಗೂರು ಜತೆ ಚರ್ಚೆಗೆ ಸಿದ್ಧ: ಸಚಿವ ನಾಗೇಶ್
ಕಳೆದ ಎರಡು ದಿವಸಗಳ ಹಿಂದೆ ಎನ್ಎಸ್ಯುಐನ ಕಾರ್ಯಕರ್ತರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತಿಪಟೂರು ಮನೆಗೆ ಮುತ್ತಿಗೆ ಹಾಕಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತಿಪಟೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಂಧಿತ 15 ಮಂದಿ ಆರೋಪಿಗಳನ್ನು ಬುಧವಾರ ತುಮಕೂರು ಜಿಲ್ಲಾ ನ್ಯಾಯಾಲಯಕ್ಕೆ ಪೊಲೀಸರು ಗುರುವಾರ ಹಾಜರುಪಡಿಸಿದ್ದರು. ನ್ಯಾಯಾಲಯ ಇದೇ ತಿಂಗಳ 14 ರವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಮನೆ ಗೇಟ್ ಮುರಿದು ಒಳಬಂದರು: ಮನೆ ಮೇಲೆ ಎನ್ಎಸ್ಯುಐ ಕಾರ್ಯಕರ್ತರು ನಡೆಸಿದ ದಾಳಿಯ ಬಗ್ಗೆ, ಸಚಿವರ ಪುತ್ರ ವಿಶ್ವದೀಪ್ ಪ್ರತಿಕ್ರಿಯೆ ನೀಡಿದ್ದು, ಬುಧವಾರ ಮಧ್ಯಾಹ್ನ 15 ರಿಂದ 20 ಜನ ಮನೆ ಗೇಟ್ ಮುರಿದು ಒಳಗೆ ಬಂದರು, ಜೋರಾಗಿ ಘೋಷಣೆಗಳನ್ನು ಕೂಗಿದರು. ಆರ್ಎಸ್ಎಸ್ ಸಮವಸ್ತ್ರವಾಗಿದ್ದ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದರು. ಪ್ರತಿಭಟನಾಕಾರರರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದಂತೆ ಕಂಡು ಬರಲಿಲ್ಲ ಎಂದು ವಿಶ್ವದೀಪ್ ತಿಳಿಸಿದ್ದಾರೆ.
ಶಿಕ್ಷಣ ಸಚಿವರ ಮನೆ ಮುತ್ತಿಗೆ ಸರಿಯಲ್ಲ: ಶಾಲಾ ಮಕ್ಕಳ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಿರುವ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತಿಪಟೂರು ನಗರದ ಮನೆಗೆ ಎನ್ಎಸ್ಯುಐ ಕಾರ್ಯಕರ್ತರು ಮುತ್ತಿಗೆ ಹಾಕಿ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಇಂತಹ ಗೂಂಡಾ ಪ್ರವೃತ್ತಿಯ ವರ್ತನೆ ಎಂದು ವಿಧಾನ ಪರಿಷತ್ತು ಸದಸ್ಯ ಡಿ.ಎಸ್.ಅರುಣ್ ಆರೋಪಿಸಿದ್ದಾರೆ.
ಈ ರೀತಿ ಏಕಾಏಕಿಯಾಗಿ ಸಚಿವರ ಮನೆ ಮುಂದೆ ಗಲಾಟೆ ಮಾಡುವುದು ಉತ್ತಮ ಬೆಳವಣಿಗೆಯಲ್ಲ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಾಡಿನ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಪಠ್ಯ ಪುಸ್ತಕ ರೂಪಿಸಲು ಶ್ರಮಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಭಗತ್ಸಿಂಗ್ ಪಠ್ಯ ಬಿಟ್ಟಿಲ್ಲ-ಪೂರ್ಣ ಸತ್ಯ ಹೇಳಲು ಪಠ್ಯ ಪರಿಷ್ಕರಣೆ: ಸಚಿವ ನಾಗೇಶ್
ಪಠ್ಯಪುಸ್ತಕದಲ್ಲಿ ಏನಾದರೂ ಲೋಪದೋಷಗಳು ಅಥವಾ ವ್ಯತ್ಯಾಸಗಳು ಕಂಡುಬಂದರೆ, ಆ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯವರು, ಶಿಕ್ಷಣ ತಜ್ಞರು ಹಾಗೂ ನಾಡಿನ ಸಾಹಿತಿಗಳು ಹಾಗೂ ಲೇಖಕರು ಸರ್ಕಾರದ ಜೊತೆಗೆ ಕೈಜೋಡಿಸಿ ಒಂದೆಡೆ ಕುಳಿತು ಚರ್ಚಿಸಿ, ವಿಮರ್ಶೆ ನಡೆಸಿ ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡು ಸರಿಪಡಿಸಬಹುದು. ಈ ವಿಷಯವಾಗಿ ಕೆಲವು ಶಿಕ್ಷಣ ತಜ್ಞರು, ಕವಿಗಳು, ಲೇಖಕರು ಮತ್ತು ಕೆಲವು ಜನಪ್ರತಿನಿಧಿಗಳು ಮಾಧ್ಯಮಗಳಿಗೆ ದಿನಕ್ಕೊಂದು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತ, ಜನಸಾಮಾನ್ಯರನ್ನು ಗೊಂದಲಕ್ಕೆ ಈಡು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ.
