#MeToo ಕೇಸ್ : ಸರ್ಜಾಗೆ ನ್ಯಾಯಾಲಯ ತಿಳಿಸಿದ್ದೇನು..?
ನಟಿ ಶ್ರುತಿ ಹರಿಹರನ್ ಅಪಮಾನಕರ ಹೇಳಿಕೆಗಳನ್ನು ನೀಡಿ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ನಟ ಅರ್ಜುನ್ ಸರ್ಜಾ ಸಲ್ಲಿಸಿದ್ದ ಐದು ಕೋಟಿ ರು.ಗಳ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
ಬೆಂಗಳೂರು : ತಮ್ಮ ವಿರುದ್ಧ ನಟಿ ಶ್ರುತಿ ಹರಿಹರನ್ ಅಪಮಾನಕರ ಹೇಳಿಕೆಗಳನ್ನು ನೀಡಿ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ನಟ ಅರ್ಜುನ್ ಸರ್ಜಾ ಸಲ್ಲಿಸಿದ್ದ ಐದು ಕೋಟಿ ರು.ಗಳ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ನಗರದ 22ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನ.19ಕ್ಕೆ ಮುಂದೂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶ್ರುತಿ ಹರಿಹರನ್ ಅವರು ಸಲ್ಲಿಸಿರುವ ಆಕ್ಷೇಪಣೆಗೆ ಪ್ರತಿ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯದಲ್ಲಿ ಅರ್ಜುನ್ ಸರ್ಜಾ ಪರ ವಕೀಲರು ಮತ್ತೆ ಕಾಲಾವಕಾಶ ಕೋರಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ವಿಚಾರಣೆಯನ್ನು ನ.19ಕ್ಕೆ ಮುಂದೂಡಿ ಆದೇಶಿಸಿದರು.
ಅರ್ಜುನ್ ಸರ್ಜಾ ಅವರಿಗೆ ಮಾನಹಾನಿಯಾಗುವಂತಹ ಹೇಳಿಕೆಯನ್ನು ನಾನು ನೀಡಿಲ್ಲ. ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ಅರ್ಜುನ್ ಸರ್ಜಾ ಪರವಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಲು ಅವರ ಸಂಬಂಧಿ ಧ್ರುವ ಸರ್ಜಾ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಪಡೆದಿದ್ದಾರೆ. ಆದರೆ, ಜಿಪಿಎಗೆ ಅರ್ಜುನ್ ಸರ್ಜಾ ಸಹಿ ಹಾಕಿಲ್ಲ. ಹೀಗಿರುವಾಗ ಜಿಪಿಎಗೆ ಕಾನೂನು ಸಮ್ಮತಿ ದೊರೆಯುವುದಿಲ್ಲ, ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಶ್ರುತಿ ಆಕ್ಷೇಪಣೆ ಸಲ್ಲಿಸಿದ್ದರು.