ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ರಾಜ್ಯಕ್ಕೆ ಆಗಮಿಸಲಿದ್ದು ಈ ವೇಳೆ ಸಂಪುಟ ವಿಸ್ತರಣೆ ಚರ್ಚೆಗಳು ನಡೆಯಲಿದೆಯಾ ಎನ್ನುವ ಕುತೂಹಲ ಗರಿಗೆದರಿದೆ. 

ಬೆಂಗಳೂರು [ಜ.17]:  ಶನಿವಾರ ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಮಯ ಲಭಿಸುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

Add Asianetnews Kannada as a Preferred SourcegooglePreferred

ಹಾಗೊಂದು ವೇಳೆ ಮಾತುಕತೆಗೆ ಅವಕಾಶ ಸಿಕ್ಕಿದರೂ ಸಂಪುಟ ವಿಸ್ತರಣೆಗೆ ಅಮಿತ್‌ ಶಾ ಅವರು ಹಸಿರು ನಿಶಾನೆ ತೋರುತ್ತಾರೆಯೇ? ತೋರಿದರೂ ಯಡಿಯೂರಪ್ಪ ಅವರು ವಿದೇಶ ಪ್ರವಾಸಕ್ಕೆ ತೆರಳುವ ಮೊದಲೇ ಸಂಪುಟ ವಿಸ್ತರಣೆ ಸಾಧ್ಯವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸಂಪುಟ ಕಗ್ಗಂಟಲ್ಲ, ಎಲ್ಲವನ್ನೂ ನಿರ್ಧರಿಸಿದ್ಯಂತೆ ಹೈಕಮಾಂಡ್....

ಸದ್ಯದ ಮಾಹಿತಿ ಅನುಸಾರ ಯಡಿಯೂರಪ್ಪ ಅವರು ವಿದೇಶ ಪ್ರವಾಸಕ್ಕೆ ಹೋಗಿ ಬಂದ ನಂತರವೇ ಸಂಪುಟ ವಿಸ್ತರಣೆ ಕೈಗೊಳ್ಳುವುದು ಬಹುತೇಕ ಖಚಿತವಾಗಿದೆ. ಭಾನುವಾರ ತಡರಾತ್ರಿ ವಿದೇಶ ಪ್ರವಾಸಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುವುದರಿಂದ ಒಂದೇ ದಿನದಲ್ಲಿ ಸಂಪುಟ ವಿಸ್ತರಣೆ ನಡೆಸುವ ಬಗ್ಗೆ ಅನುಮಾನವಿದೆ. ಅಮಿತ್‌ ಶಾ ಅವರೊಂದಿಗಿನ ಮಾತುಕತೆ ಯಶಸ್ವಿಯಾಗಿ ವಿಸ್ತರಣೆಗೆ ಅನುಮತಿ ನೀಡಿದಲ್ಲಿ ವಿದೇಶ ಪ್ರವಾಸದಿಂದ ವಾಪಸಾದ ಕೂಡಲೇ ಸಚಿವರನ್ನಾಗಿ ಮಾಡುವ ಬಗ್ಗೆ ಯಡಿಯೂರಪ್ಪ ಅವರು ಅರ್ಹ ಶಾಸಕರಿಗೆ ಭರವಸೆ ನೀಡಿ ತೆರಳುವ ನಿರೀಕ್ಷೆಯಿದೆ.

'BJPಯ ಹಾಲಿನ ವಾತಾವರಣದಲ್ಲಿ ವಿಶ್ವನಾಥ್ ಸಕ್ಕರೆಯಂತೆ ಕರಗ್ತಾರೆ'..!...

ಒಂದು ಖಾಸಗಿ ಕಾರ್ಯಕ್ರಮ ಮತ್ತೊಂದು ಪಕ್ಷದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಮಿತ್‌ ಶಾ ಅವರು ಶನಿವಾರ ಬೆಳಗ್ಗೆ ಅಥವಾ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ನಗರದ ಅರಮನೆ ಮೈದಾನದಲ್ಲಿ ವೇದಾಂತ ಭಾರತಿ ಹಮ್ಮಿಕೊಂಡಿರುವ ವಿವೇಕದೀಪಿನಿ ಮಹಾಸಮರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದು ವೇಳೆ ಬೆಂಗಳೂರಿಗೆ ಕೆಲಹೊತ್ತು ಮುಂಚಿತವಾಗಿ ಬಂದಲ್ಲಿ ಮಾತುಕತೆ ಸಾಧ್ಯವಾಗಬಹುದು. ಇಲ್ಲದಿದ್ದಲ್ಲಿ ನಂತರ ಹುಬ್ಬಳ್ಳಿಯಲ್ಲಿ ಪಕ್ಷದ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಜನ ಜಾಗರಣ ಅಭಿಯಾನದಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದಲ್ಲಿ ತೆರಳುವ ವೇಳೆ ಸಮಯ ಸಿಕ್ಕಲ್ಲಿ ಯಡಿಯೂರಪ್ಪ ಅವರು ವಿಷಯ ಪ್ರಸ್ತಾಪಿಸುವ ಸಾಧ್ಯತೆಯಿದೆ ಎಂದುಪ ತಿಳಿದು ಬಂದಿದೆ.