Asianet Suvarna News Asianet Suvarna News

ಅಮಿತ್‌ ಶಾ ಸಮಾವೇಶದಲ್ಲಿ ನಷ್ಟ ಎದುರಿಸಿದ್ದ ವ್ಯಾಪಾರಿ, ಹಣ ಪಾವತಿ ಮಾಡಿದ ಪ್ರತಾಪ್‌ ಸಿಂಹ!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಲಕ್ಷ್ಮೇಶ್ವರ ಕಾರ್ಯಕ್ರಮದಲ್ಲಿ ನಷ್ಟ ಅನುಭವಿಸಿ ಕಣ್ಣೀರಿಟ್ಟಿದ್ದ ಕೂಲ್‌ ಡ್ರಿಂಕ್ಸ್‌ ವ್ಯಾಪಾರಿ ಸಮೀರ್‌ ಅವರಿಗೆ ಅವರ ನಷ್ಟದ ಹಣವನ್ನು ತುಂಬಿಕೊಡುವ ಮೂಲಕ ಮೈಸೂರಿನ ಸಂಸದ ಪ್ರತಾಪ್‌ ಸಿಂಹ ಮಾನವೀಯತೆ ಮೆರೆದಿದ್ದಾರೆ.
 

Amit Shah Rally in Lakshmeshwar Mysuru MP Pratap Simha bears the Loss of Cool Drinks Seller Sameer san
Author
First Published May 1, 2023, 11:26 AM IST

ಗದಗ (ಮೇ.1): ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಏಪ್ರಿಲ್ 28 ರಂದು ನಡೆದಿದ್ದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಕೂಲ್‌ ಡ್ರಿಂಕ್ಸ್‌ ವ್ಯಾಪಾರ ಮಾಡಲು ಬಂದಿದ್ದ ಸಮೀರ್ ಸಾಬ್, ನೆರದಿದ್ದ ಜನರ ವರ್ತನೆಯಿಂದ ನಷ್ಟ ಅನುಭವಿಸಿದ್ದ.. ಸಮೀರ್ ಗೆ ಆಗಿರೋ ನಷ್ಟವನ್ನ ಸಂಸದ ಪ್ರತಾಪ್ ಸಿಂಹ ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಧ್ಯರಾತ್ರಿ 12ರ ಸುಮಾರಿಗೆ ಸಮೀರ್‌ಗೆ ಫೋನ್ ಮಾಡಿದ್ದ ಪ್ರತಾಪ್ ಸಿಂಹ ನಷ್ಟವಾಗಿರೋ ಬಗ್ಗೆ ಮಾಹಿತಿ ಕೇಳಿದ್ದರು. ನಂತರ, ಸಮೀತರ್‌ ಒಟ್ಟಾರೆ 30 ಸಾವಿರ ನಷ್ಟವಾಗಿರಬಹುದು ಎಂದು ಹೇಳಿದ್ದರು. ಆದರೆ, ಪ್ರತಾಪ್‌ ಸಿಂಹ್‌ 35 ಸಾವಿರ  ಹಣ ಪಾವತಿಸಿ ಸ್ಕ್ರೀನ್ ಶಾಟ್ ಸಮೇತ್ ಫೋಟೋ ಟ್ವೀಟ್ ಮಾಡಿದ್ದಾರೆ.. ಅದಲ್ಲದೆ, ಸಮೀರ್ ಸಾಬ್ ಗೆ ಹಣ ಕಳುಹಿಸಿದ್ದೇನೆ..ಸಾರಿ ಬ್ರದರ್‌, ಧನ್ಯವಾದ ಅಂತಾ ಬರೆದುಕೊಂಡಿದ್ದಾರೆ. ಸಂಸದ ಪ್ರತಾಪ್‌ ಸಿಂಹ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಏಪ್ರಿಲ್‌ 28 ರಂದು ಅಮಿತ್‌ ಶಾ ಲಕ್ಷ್ಮೇಶ್ವರ ಪಟ್ಟಣಕ್ಕೆ ಬಂದಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಪರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತಯಾಚನೆ ಮಾಡಿದ್ದರು. ಮಧ್ಯಾಹ್ನದ ಸಮಯ ಆಗಿದ್ದರಿಂದ ಜನ ಬಾಯಾರಿಕೆಯಿಂದ ಬಳಲಿ ಹೋಗಿದ್ದರು. ನೀತಿಸಂಹಿತೆ ಇರುವ ಕಾರಣದಿಂದ, ನೀರು ಊಟದ ವ್ಯವಸ್ಥೆ ಕಷ್ಟ ಅಂತಾ ಆಯೋಜಕರು ಮೈಕ್ ನಲ್ಲಿ ಹೇಳಿದ್ದರು.

ಆದರೆ, ಬಿಸಿಲಿನ ತಾಪ ತಾಳಲು ಸಾಧ್ಯವಾಗಿರಲಿಲ್ಲ. ಅಲ್ಲಿನ ಹೆಣ್ಣುಮಕ್ಕಳ ಒತ್ತಾಯಕ್ಕೆ ಮಣಿದು ನೀರಿನ ಪೌಚ್‌ಗಳನ್ನು ತರಿಸೋದಕ್ಕೆ ಆಯೋಜಕರು ಮುಂದಾಗಿದ್ದರು.  ಈ ವೇಳೆ ಬಿಜೆಪಿ ಕಾರ್ಯಕರ್ತ, ಸಮೀರ್ ಅವರಿಗೆ 30 ನೀರಿನ ಪ್ಯಾಕೆಟ್‌ಗಳನ್ನು ಆಯೋಜಕರು  ಆರ್ಡರ್ ಕೊಟ್ಟಿದ್ದರು. ಸಮೀರ್‌ ಕೂಲ್‌ ಡ್ರಿಂಕ್ಸ್‌ ಇರುವ ವಾಹನದಲ್ಲಿ ನೀರಿನ ಪ್ಯಾಕೆಟ್‌ ತುಂಬಿಕೊಂಡು ಸಮಾವೇಶ ನಡೆಯುವ ಸ್ಥಳಕ್ಕೆ ಬಂದಿದ್ದರು. 

ಇನ್ನೇನು ನೀರಿನ ಪ್ಯಾಕೆಟ್‌ಗಳನ್ನು ಇಳಿಸಿ ವಾಪಾಸ್‌ ತೆರಳು ಸಮೀರ್‌ ಮುಂದಾಗುವಾಗ ಆಯೋಜಕರು ಜನರು ಇದ್ದ ಕಡೆ ನೀರಿ ಪ್ಯಾಕೆಟ್‌ಗಳನ್ನು ಇಳಿಸುವಂತೆ ಸಮೀರ್‌ಗೆ ಸೂಚನೆ ನೀಡಿದ್ದರು. ಮೊದಲೇ ಬಾಯಾರಿಕೆಯಿಂದ ಬೇಸತ್ತಿದ್ದ ಜನ, ನೀರಿ‌ನ ಗಾಡಿ ನೋಡಿ, ಆಯೋಜಕರೇ ವ್ಯವಸ್ಥೆ ಮಾಡಿದ್ದಾರೆ ಅಂತಾ ಅಲ್ಲಿದ್ದ ನೀರಿನ ಬಾಟಲ್‌ಗಳೊಂದಿಗೆ ಬಹುತೇಕ ಕೂಲ್‌ ಡ್ರಿಂಕ್ಸ್ ಖಾಲಿ ಮಾಡಿದ್ದರು. ಮುಗಿಬಿದ್ದು ಗಾಡಿ ಮೇಲೆ ಹತ್ತಿ ನೀರಿನ ಬಾಟಲ್ ತೆಗೆದುಕೊಂಡಿದ್ದರು. ಜನರನ್ನ ಕಂಟ್ರೋಲ್ ಮಾಡಲು ಸಾಧ್ಯವಾಗದೇ, ಸಮೀರ್ ಕಣ್ಣೀರು ಹಾಕುತ್ತ ಅಸಹಾಯಕರಾಗಿ ನಿಂತಿದ್ದರು. ನಂತರ ಪೊಲೀಸರು ಸ್ಥಳಕ್ಕೆ ಬಂದು ಜನರನ್ನ ಚದುರಿಸಿದರೂ, ಅದಾಗಲೇ ದೊಡ್ಡ ನಷ್ಟ ಸಮೀರ್‌ಗೆ ಆಗಿತ್ತು. ಇದರಿಂದಾಗಿ ಸ್ಥಳದಿಂದ ಅಳುತ್ತಲೇ ಸಮೀರ್ ಹೊರ ನಡೆದಿದ್ದರು.

'ಮೋದಿ ವಿಷ ಸರ್ಪ': ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಾಪ್‌ ಸಿಂಹ ಆಕ್ರೋಶ

ವಿಷಯ ತಿಳಿದು ಕಾಂಗ್ರೆಸ್ ಮುಖಂಡ ಸರ್ಫರಾಜ್ ಸೂರಣಗಿ ಮತ್ತು ತಂಡ, ಸಮೀರ್ ಮನೆಗೆ ತೆರಳಿ 20 ಸಾವಿರ ರೂಪಾಯಿ ಕೊಟ್ಟಿದ್ದರು. ಈಗ ಪ್ರತಾಪ್ ಸಿಂಹ ಅವರೂ 35 ಸಾವಿರ ರೂಪಾಯಿ ಹಣ ಕೊಟ್ಟಿದ್ದಾರೆ.  ಘಟನೆಯಲ್ಲಿ 30-35 ಸಾವಿರ ರೂಪಾಯಿ ಮೌಲ್ಯದ ನೀರಿನ ಬಾಟಲ್ ಗಳು, ಕೂಲ್‌ ಡ್ರಿಂಕ್ಸ್‌ ಬಾಟಲ್ ಲಾಸ್ ಆಗಿವೆ. ನನಗೆ ಅಷ್ಟೆ ಹಣ ಸಾಕು, ಕಾಂಗ್ರೆಸ್ ಮುಖಂಡರನ್ನ ಸಂಪರ್ಕಿಸಿ ಹೆಚ್ಚುವರಿಯಾಗಿ ಬಂದ ಹಣ ಹಿಂತಿರುಗಿಸುತ್ತೇನೆ.. ಇಲ್ಲವೇ ಆಸ್ಪತ್ರೆ, ವೃದ್ದಾಶ್ರಮಕ್ಕೆ ದಾನ ಮಾಡಲಿದ್ದೇನೆ ಎಂದು ಸಮೀರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಹೇಳಿದ್ದಾರೆ. ಪುಕ್ಸಟ್ಟೆಯಾಗಿ ಸಿಕ್ಕರೇ ನನಗೂ ಇರಲಿ, ನನ್ನ ಮನೆಯವರಿಗೂ ಇರಲಿ ಅನ್ನೋರ ಮಧ್ಯ ಸಮೀರ್ ವಿಭಿನ್ನವಾಗಿ ನಿಲ್ಲುತ್ತಾರೆ.

ಸಿದ್ದರಾಮನ ಹುಂಡಿ ಏನು ಸಿದ್ದರಾಮಯ್ಯ ಸಂಸ್ಥಾನನಾ?: ಪ್ರತಾಪ್ ಸಿಂಹ ಆಕ್ರೋಶ 

Follow Us:
Download App:
  • android
  • ios