Asianet Suvarna News Asianet Suvarna News

ನಾಯಕತ್ವ ಬದಲು ಚರ್ಚೆ ಮಧ್ಯೆಯೂ ಸಿಎಂ ಕೆಲಸ!

* 13 ಜಿಲ್ಲೆಗಳ ಡೀಸಿ, ಸಿಇಒಗಳ ಜತೆ ಯಡಿಯೂರಪ್ಪ ಪ್ರವಾಹ ಸಭೆ

* ನಾಯಕತ್ವ ಬದಲು ಚರ್ಚೆ ಮಧ್ಯೆಯೂ ಸಿಎಂ ಕಾಯಕ!

* ಭೂಕುಸಿತ ಪ್ರದೇಶಗಳಿಂದ ಜನರ ಸ್ಥಳಾಂತಕ್ಕೆ ತಾಕೀತು

* ಒಂದು ವಾರದಿಂದ ಮಳೆಯಾಗುತ್ತಿದೆ, ಮುನ್ನೆಚ್ಚರಿಕೆ ಕೈಗೊಳ್ಳಿ

* ಪರಿಹಾರ ಕ್ರಮ ತುರ್ತಾಗಿ ಮಾಡಿ: ಯಡಿಯೂರಪ್ಪ

Amid Of Leadership Change Talks BS Yediyurappa Gives Priority To Public Work pod
Author
Bangalore, First Published Jul 21, 2021, 8:02 AM IST

ಬೆಂಗಳೂರು(ಜು.21): ನಾಯಕತ್ವ ಬದಲಾವಣೆ ಕುರಿತ ವದಂತಿ ತೀವ್ರವಾಗಿ ಹಬ್ಬಿ, ರಾಜಕೀಯ ವಲಯದಲ್ಲಿ ಸಂಚಲನವಾಗುತ್ತಿದ್ದರೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಾತ್ರ ತಮ್ಮ ಕಾಯಕ ಮುಂದುವರಿಸಿದ್ದಾರೆ. ರಾಜಕೀಯ ಬೆಳವಣಿಗೆಗಳ ನಡುವೆಯೂ ಅವರು ಮಂಗಳವಾರ ಪ್ರವಾಹಪೀಡಿತ ಜಿಲ್ಲೆಗಳ ಅಧಿಕಾರಿಗಳ ಜತೆ ಸಭೆ ನಡೆಸಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ ಮಾಡಿದ್ದಾರೆ.

ಪ್ರವಾಹ ಪೀಡಿತ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಬಹುದಾದ ಪ್ರದೇಶಗಳಲ್ಲಿರುವ ಜನರನ್ನು ಮುಂಚಿತವಾಗಿಯೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುಮಾರು 13 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಸಭೆ ನಡೆಸಿ ಮಳೆಯಿಂದಾಗುತ್ತಿರುವ ಹಾನಿ ಮತ್ತು ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡ ಅವರು, ಕಳೆದ ಒಂದು ವಾರದಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪರಿಹಾರ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸೂಚಿಸಿದರು.

ಪ್ರವಾಹ ತಡೆಯಲು ಅತ್ಯಾಧುನಿಕ ಉಪಕರಣಗಳನ್ನು ಖರೀದಿಸಲು ಹಣ ಬಿಡುಗಡೆ ಮಾಡಲಾಗುವುದು. ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಗಳಲ್ಲಿ ಈಗಾಗಲೇ ಲಭ್ಯ ಇರುವ ಮೊತ್ತವನ್ನು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಬಳಕೆ ಮಾಡಬೇಕು. ನದಿ ಮತ್ತು ಭೂ ಕುಸಿತ ಉಂಟಾಗುವ ಸ್ಥಳಗಳನ್ನು ಗುರುತಿಸಲು ವಿಶೇಷ ತಂಡವನ್ನು ರಚಿಸಲು ಕ್ರಮ ಕೈಗೊಳ್ಳಬೇಕು. ಬೆಳೆ ನಷ್ಟಉಂಟಾಗಿರುವ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಿದರೆ ಪರಿಹಾರ ವಿತರಣೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್‌.ಅಶೋಕ್‌, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌, ಕೃಷಿ ಸಚಿವ ಬಿ.ಸಿ.ಪಾಟೀಲ್‌, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೊಡಗು, ಬಳ್ಳಾರಿ, ಹಾಸನ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ವಿಜಯಪುರ, ಕಲಬುರಗಿ, ಮೈಸೂರು, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪಾಲ್ಗೊಂಡಿದ್ದರು.

ಸಿಎಂ ಸೂಚನೆಗಳು

- ನೆರೆ ತಡೆಗೆ ಅತ್ಯಾಧುನಿಕ ಉಪಕರಣ ಖರೀದಿಸಿ

- ಅಗತ್ಯ ಹಣ ಬಿಡುಗಡೆ ಮಾಡಲಾಗುವುದು

- ಡೀಸಿಗಳ ಖಾತೆಯಲ್ಲಿರುವ ಹಣ ನೆರೆ ನಿಯಂತ್ರಣಕ್ಕೆ ಬಳಸಿ

- ಬೆಳೆ ನಷ್ಟಪರಿಹಾರ ವಿತರಣೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು

- ಭೂಕುಸಿತ ಸ್ಥಳ ಗುರುತಿಸಲು ವಿಶೇಷ ತಂಡ ರಚಿಸಿ

Follow Us:
Download App:
  • android
  • ios