userpic
user icon
0 Min read

ಚಿನ್ನ ಖರೀದಿಗೆ ಸೀಮಿತವಲ್ಲ ಅಕ್ಷಯ ತೃತೀಯಾ! ಇಂದು ಏನೇನು ಆಚರಣೆ ನಡೆಯುತ್ತೆ ಗೊತ್ತಾ?

Akshaya Tritiya: The Importance of the Auspicious Festival rav

Synopsis

ಕೃತಯುಗದ ಆರಂಭದ ದಿನವಾದ ಅಕ್ಷಯ ತೃತೀಯಾ, ದಾನ-ಧರ್ಮಗಳಿಗೆ ವಿಶೇಷ ಮಹತ್ವದ ದಿನ. ಈ ದಿನದಂದು ನದಿ ಸ್ನಾನ, ದೇವತಾರ್ಚನೆ, ದಾನ, ಪರಶುರಾಮ ಜಯಂತಿ ಆಚರಣೆ ಹಾಗೂ ಉಯ್ಯಾಲೆ ಗೌರಿ ಪೂಜೆ ವಿಶೇಷವಾಗಿದೆ.

ಕೃತ, ತ್ರೇತಾ, ದ್ವಾಪರ ಹಾಗೂ ಕಲಿಯುಗವೆಂದು ನಾಲ್ಕು ಯುಗಗಳ ಕಾಲಮಾನ. ನಮ್ಮ ಸನಾತನ ಸಿದ್ಧಾಂತದ ಪಂಚಾಂಗ ಕ್ರಮದಲ್ಲಿ ಈ ಯುಗಗಳ ಪ್ರಾರಂಭ ದಿನಗಳನ್ನು ಯುಗದ ಆದಿ ದಿನವೆಂದು ಇಂದಿಗೂ ಆಚರಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ತೃತೀಯಾವನ್ನು ಅಕ್ಷಯ ತೃತೀಯಾ ಎನ್ನಲಾಗಿದೆ. ಈ ದಿನವೇ ದೇವ-ಋಷಿ-ಮಾನವರೆಲ್ಲ ಅತೀ ಧರ್ಮಿಷ್ಟರಾಗಿದ್ದ, ಪಾಪವೇ ಇಲ್ಲದ ಕೃತ ಯುಗದ ಪ್ರಾರಂಭದ ದಿನವೆಂದು ಪುರಾಣಗಳು ತಿಳಿಸುತ್ತವೆ. ಅಕ್ಷಯತೃತೀಯಾ, ವಿಜಯದಶಮಿ ಹಾಗೂ ಯುಗಾದಿ ಈ ಮೂರು ದಿನಗಳು ಸ್ವಯಂ ಸಿದ್ಧ ಮುಹೂರ್ತಗಳೆಂದು ತಿಳಿಸಿದ್ದಾರೆ. ಈ ದಿನದಂದು ವಾರ, ನಕ್ಷತ್ರ, ಕರಣ ಇತ್ಯಾದಿಗಳ ಶುದ್ಧಿಯನ್ನು ವಿಚಾರಸಬೇಕಿಲ್ಲ. ಕಾರಣ ಇದನ್ನು ಮೂರುವರೆ ಮುಹೂರ್ತವೆಂದಿದ್ದಾರೆ. ಸಂಪೂರ್ಣ ದಿನವೇ ಪರಮ ಮಂಗಲಕರ ಸಮಯವನ್ನು ಸೂಚಿಸುತ್ತದೆ. ಅಂತಹ ವಿಶೇಷ ದಿನ ಅಕ್ಷಯತೃತೀಯಾ.

ಈ ಬಾರಿಯ ವಿಶೇಷ

ರೋಹಿಣಿ-ಬುಧ ಯೋಗ. ರೋಹಿಣಿ ನಕ್ಷತ್ರ ಹಾಗೂ ಬುಧವಾರ ಅಕ್ಷಯತೃತೀಯಾದಂದು ಕೂಡಿದ್ದು ಈ ಬಾರಿಯ ವಿಶೇಷ. ವೈಶಾಖ ತೃತೀಯಾದಂದು ರೋಹಿಣಿ ನಕ್ಷತ್ರ ಹಾಗೂ ಬುಧವಾರ ಕೂಡಿದರೆ ಆ ದಿನದಂದು ಮಾಡುವ ಎಲ್ಲ ಸತ್ಕಾರ್ಯಗಳೂ ಅನಂತ ಫಲವನ್ನು ನೀಡುತ್ತವೆ. ಈ ದಿನದಂದು ವಿಶೇಷವಾಗಿ ನದಿ ಹಾಗೂ ಸಮುದ್ರ ಸ್ನಾನವನ್ನು ಮಾಡುವುದು ಅತೀ ಶ್ರೇಷ್ಠವೆಂದಿದ್ದಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ಸೂರ್ಯೋದಯಕ್ಕೆ ಮುಂಚಿತವಾಗಿ ಸ್ನಾನ ಮಾಡಿ ದೇವರನ್ನು ಪೂಜಿಸುವುದು ಪುಣ್ಯಕರವಾಗಿದೆ. ಈ ದಿನ ಮಾಡುವ ದಾನ ಅನಂತ ಫಲವನ್ನು ನೀಡುತ್ತದೆ. ಆದ್ದರಿಂದ ಇದನ್ನು ಅನಂತತೃತೀಯಾ ಎಂದೂ ಕರೆದಿದ್ದಾರೆ. ವರ್ಷದ ಬೇರೆ ಬೇರೆ ಮಾಸಗಳಲ್ಲಿ ದೇವತೆಗಳು, ಋಷಿಗಳು, ಪಿತೃಗಳ ಪೂಜೆಯನ್ನು ಆಗಾಗ ಮಾಡಲು ತಿಳಿಸಿದ್ದಾರೆ. ಆದರೆ ಇಂದಿನ ವಿಶೇಷವೆಂದರೆ ದೇವ ಋಷಿ ಪಿತೃ ಎಲ್ಲರ ಆರಾಧನೆಯನ್ನು ಮಾಡುವಂತೆ ವಿಧಿಸಿದ್ದಾರೆ.

ದಾನದ ಮಹತ್ವ

ಸಾಂಪ್ರದಾಯಿಕ ಹಿನ್ನೆಲೆಯನ್ನು ತಿಳಿಯದೇ ಕೆಲವರು ಈ ದಿನವನ್ನು ಕೇವಲ ಚಿನ್ನದ ಖರೀದಿಗೆ ಮೀಸಲಾದ ದಿನವೆಂದು ಭಾವಿಸಿದ್ದಾರೆ. ಅಕ್ಷಯತೃತೀಯಾದ ಆಧ್ಯಾತ್ಮಿಕ ಮೌಲ್ಯವನ್ನು ತಿಳಿಯುವುದು ಬಹಳ ಮುಖ್ಯ. ಪುರಾಣಗಳ ಪ್ರಕಾರ ಬಲಿ ಚಕ್ರವರ್ತಿಯಿಂದ ಸ್ವರ್ಗಾಧಿಪತಿ ಇಂದ್ರ ತನ್ನ ಆಧಿಪತ್ಯವನ್ನು ಕಳೆದುಕೊಂಡು ಅನೇಕ ವರ್ಷಗಳ ಕಾಲ ಮೇರು ಪರ್ವತದ ಗುಹೆಯಲ್ಲಿ ತಪಸ್ಸು ಮಾಡಿದ. ಕಳೆದುಕೊಂಡ ಐಶ್ವರ್ಯವನ್ನೆಲ್ಲ ಮತ್ತೆ ಪಡೆಯಲು ದೇವತೆಗಳ ಗುರುಗಳಾದ ಬೃಹಸ್ಪತ್ಯಾಚಾರ್ಯರ ಉಪದೇಶದಂತೆ ದೇವತೆಗಳೆಲ್ಲರೂ ಸೇರಿ ಅಕ್ಷಯತೃತೀಯಾದಂದು ಅನೇಕ ರೀತಿಯ ದಾನ ಧರ್ಮಗಳನ್ನು ಮಾಡಿದರು. ಆ ಅನಂತ ಪುಣ್ಯದ ಫಲವಾಗಿ ಪುನಃ ಸ್ವರ್ಗವನ್ನು ಪಡೆದರು. ಧರ್ಮಕ್ಕೆ ಜಯವಾಯಿತು. ಅಂದಿನಿಂದಲೇ ಈ ದಿನದಂದು ದಾನ ಮಾಡುವ ವಿಶೇಷ ಪದ್ಧತಿ ಬೆಳೆದುಬಂದಿದೆ.

ಇದು ವೈಶಾಖ ಮಾಸವಾದ್ದರಿಂದ ಜಲಕುಂಭದಾನ ಪರಮಪುಣ್ಯಕರ. ಬಾಯಾರಿದವರಿಗೆ ನೀರನ್ನು ಕೊಡುವುದು ಅನ್ನದಾನಕ್ಕಿಂತಲೂ ಶ್ರೇಷ್ಠವೆಂದಿದೆ ಶಾಸ್ತ್ರ. ಅಂತೆಯೇ ಈ ದಿನ ಕೊಡ ಅಥವಾ ತಂಬಿಗೆಯಲ್ಲಿ ನೀರನ್ನು ತುಂಬಿಸಿ ದಾನ ಕೊಡುವುದು ಮಹಾ ಫಲದಾಯಕ.

‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಸಂದೇಶವನ್ನು ಸಾರುವ ನಮ್ಮ ಸನಾತನ ಧರ್ಮದಲ್ಲಿ ಎಲ್ಲ ಹಬ್ಬ ಹರಿದಿನಗಳ ಆಚರಣೆಗಳು ಈ ಸಂದೇಶವನ್ನೇ ಸಾರಿವೆ. ಪ್ರಾಚೀನ ಸಂಪ್ರದಾಯಗಳನ್ನು ಗೌರವಿಸುವ ಹಿನ್ನೆಲೆಯಲ್ಲಿ ಇಂದಿಗೂ ಈ ದಿನದಂದು ಎಲ್ಲೆಡೆ ಯಾವುದೇ ಜಾತಿ ಮತ ಪಂಥ ಎನ್ನದೇ ಸಾರ್ವಜನಿಕವಾಗಿ ಮಜ್ಜಿಗೆ ಪಾನಕ ಕೋಸಂಬರಿ ವಿತರಣೆ, ಅನ್ನದಾನ ನಡೆಯುತ್ತದೆ. ಹಸಿದವರಿಗೆ ನೀಡಿದ ಅನ್ನ, ನೀರು ಅಕ್ಷಯ ಫಲವನ್ನು ನೀಡುತ್ತದೆ ಎಂದಿದ್ದಾರೆ ಹಿರಿಯರು. ಆದ್ದರಿಂದಲೇ ಈ ದಿನದಂದು ದಾನಕ್ಕೆ ವಿಶೇಷ ಮಹತ್ವ. ಗೋಧಿಯ ದಾನವನ್ನು ವಿಶೇಷವಾಗಿ ಮಾಡಬೇಕು. ಇದನ್ನು ಪಾಪಪರಿಹಾರಕ ಹಾಗೂ ಇಷ್ಟ ಪ್ರಾಪ್ತಿಗೆ ನಾಂದಿ ಅಂತಲೂ ಪರಿಗಣಿಸಲಾಗಿದೆ.

ಉಯ್ಯಾಲೆ ಗೌರಿ ಪೂಜೆ

ಚೈತ್ರ ಮಾಸದ ತೃತೀಯಾದಂದು ಸ್ಥಾಪಿಸುವ ಗೌರಿಯನ್ನು ‘ಚೈತ್ರಗೌರಿ’ ಅಥವಾ ‘ಉಯ್ಯಾಲೆ ಗೌರಿ’ ಎಂದು ಕರೆದಿದ್ದಾರೆ. ಉಯ್ಯಾಲೆಯ ಮೇಲೆ ಕುಳಿತಿರುವ ಗೌರಿಯನ್ನು ಶಿವನೊಂದಿಗೆ ಪೂಜಿಸುತ್ತಾರೆ. ಒಂದು ಮಾಸದವರೆಗೂ ಪೂಜೆಗೊಳ್ಳುವ ಗೌರಿಯನ್ನು ಕೊನೆಯ ದಿನವಾದ ಅಕ್ಷಯ ತೃತೀಯಾದಂದು ವಿಶೇಷವಾಗಿ ಪೂಜಿಸಿ, ನೆರೆಯ ಸುಮಂಗಲಿಯರನ್ನೆಲ್ಲಾ ಆಮಂತ್ರಿಸಿ ಪಾನಕ, ಕೋಸಂಬರಿ ಕುಂಕುಮ ಕೊಟ್ಟು ಗೌರವಿಸಿ ಮರುದಿನ ಗೌರಿಯನ್ನು ವಿಸರ್ಜಿಸುತ್ತಾರೆ.

ಗಂಧಲೇಪನ

ಈ ದಿನ ಮಠ-ಮಂದಿರಗಳಲ್ಲಿ ಭಗವಂತನ ಪ್ರತಿಮೆಗೆ ಸಂಪೂರ್ಣವಾಗಿ ಗಂಧಲೇಪವನ್ನು ಮಾಡಲಾಗುತ್ತದೆ. ಬಿಸಿಲಿನ ತಾಪವನ್ನು ನೀಗಿಸಿ, ದೇಹದ ದುರ್ಗಂಧ ಹಾಗೂ ಮನಸ್ಸಿನಲ್ಲಿಯ ದ್ವೇಷ ಅಸೂಯೆಗಳೆಂಬ ದುರ್ಗಂಧವನ್ನು ಭಗವಂತ ನಿವಾರಿಸಲಿ ಎಂಬ ಪ್ರಾರ್ಥನೆಯೊಂದಿಗೆ ದೇವರ ಪ್ರತಿಮಗೆ ಗಂಧಲೇಪ ಮಾಡಬೇಕೆಂಬ ಈ ಆಚರಣೆಯನ್ನು ಸ್ಕಂದ ಹಾಗೂ ಭವಿಷ್ಯೋತ್ತರ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಪರಶುರಾಮ ಜಯಂತೀ

ಜಮದಗ್ನಿ ಋಷಿಗಳು ಹಾಗೂ ರೇಣುಕಾದೇವಿಯ ಪುತ್ರರಾಗಿ ಸಾಕ್ಷಾತ್ ವಿಷ್ಣುವೇ ಪರಶುರಾಮನಾಗಿ ಅವತರಿಸಿದ ದಿನವಿದು. ಬ್ರಾಹ್ಮಣರಾಗಿ ಹುಟ್ಟಿದರೂ ಅಧರ್ಮದ ನಾಶಕ್ಕಾಗಿ ಕ್ಷತ್ರಿಯರಂತೆ ಆಯುಧ ಹಿಡಿದವರು, 21 ಬಾರಿ ಭೂಪ್ರದಕ್ಷಿಣೆ ಮಾಡಿ ದುಷ್ಟ ಕ್ಷತ್ರಿಯರ ಅಟ್ಟಹಾಸವನ್ನು ಮುರಿದು ಅವರನ್ನೆಲ್ಲ ತಮ್ಮ ಕೊಡಲಿಯಿಂದ ಸಂಹರಿಸಿದವರು ಪರಶುರಾಮರು. ಧರ್ಮಕ್ಕೆ ಚ್ಯುತಿ ಬಾರದಂತೆ ಆ ಭಗವಂತ ಒಂದಿಲ್ಲೊಂದು ರೂಪದಿಂದ ದುಷ್ಟ ಭಯೋತ್ಪಾದಕರನ್ನು ನಿರ್ಣಾಮಗೊಳಿಸಿ ಧಾರ್ಮಿಕರಿಗೆ ರಕ್ಷಣೆ ನೀಡಲೆಂಬ ಪ್ರಾರ್ಥನೆಯೊಂದಿಗೆ ಪರಶುರಾಮರ ಸ್ಮರಣೆ ವಿಶೇಷವಾಗಿದೆ.

Download App

Latest Videos