'ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಸಿದ್ದರಾಮಯ್ಯ'!
ಕಾಂಗ್ರೆಸ್ ನಾಯಕರೊಬ್ಬರು ನಿಡಿದ ಪ್ರತಿಕ್ರಿಯೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಕುರ್ಚಿ ಏರುತ್ತರಾ ಎಂಬ ಚರ್ಚೆ ಎದ್ದಿದೆ.
ಚಿಕ್ಕಬಳ್ಳಾಪುರ[ಜ.25]: ಮಹಾಭಾರತದಲ್ಲಿನ ಶಕುನಿಯ ಕುತಂತ್ರದ ಮಾದರಿಯಲ್ಲಿಯೇ ನಡೆದ ಕುತಂತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಲಬೇಕಾಯಿತು ಎಂಬ ಗುಮಾನಿ ಇದೆ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನಗರದ ಹೊರವಲಯದಲ್ಲಿ ಗುರುವಾರ ಆಯೋಜಿಸಿದ್ದ ಕನಕ ಜಯಂತಿಯಲ್ಲಿ ಮಾತನಾಡಿದ ಅವರು, ಮೋಸದ ಪಗಡೆಯಿಂದ ಧರ್ಮರಾಯ ಸೋತ ರೀತಿಯಲ್ಲಿಯೇ ಧರ್ಮರಾಯರಂತಹ ಸಿದ್ದರಾಮಯ್ಯ ಅವರೂ ಸೋಲನುಭವಿಸಿದ್ದಾರೆ. ಅವರು ಧರ್ಮಯುದ್ಧದಲ್ಲಿ ಮತ್ತೆ ಗೆದ್ದು ರಾಜ್ಯದ ಮುಖ್ಯಮಂತ್ರಿಯಾಗಲಿದ್ದು, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಯಾವುದೇ ಜಾತಿಯ ವಿರೋಧಿಯಲ್ಲ. ಅವರು ಒಕ್ಕಲಿಗರ ವಿರೋಧಿಯಾಗಿದ್ದರೆ ಕೆಂಪೇಗೌಡ ಜಯಂತಿಯನ್ನು ಘೋಷಣೆ ಮಾಡುತ್ತಿರಲಿಲ್ಲ ಎಂಬುದನ್ನು ಅರಿಯಬೇಕು. ಎಲ್ಲ ವರ್ಗದ ಜನರಿಗೂ ಸಮಾನವಾಗಿ ಯೋಜನೆಗಳನ್ನು ರೂಪಿಸುವ ಮೂಲಕ ಇಡೀ ದೇಶದಲ್ಲಿಯೇ ಮಾದರಿ ಆಡಳಿತ ನಡೆಸಿದ ವ್ಯಕ್ತಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದು ಶತಃಸಿದ್ಧ ಎಂದು ಹೇಳಿದರು.