ಆ. 5ರಿಂದ ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ..!
* ಉತ್ತರ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಭಾರ ಕುಸಿತ
* ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’
* ಕಾರವಾರ ಹಾಗೂ ಕಲಬುರಗಿಯಲ್ಲಿ ತಲಾ 31.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
ಬೆಂಗಳೂರು(ಆ.02): ರಾಜ್ಯದಲ್ಲಿ ಆ.5ರಿಂದ ಮಳೆ ಮತ್ತೆ ಚುರುಕಾಗುವ ಸಂಭವವಿದ್ದು, ಕರಾವಳಿಯ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಗುಡುಗು, ಗಾಳಿ ಸಹಿತ 11 ಸೆಂ.ಮೀ.ಗೂ ಹೆಚ್ಚು ಮಳೆ ನಿರೀಕ್ಷೆ ಇರುವುದರಿಂದ ಆ.5ಮತ್ತು 6ರಂದು ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಈ ಭಾಗದಲ್ಲಿ ಸದ್ಯ ಹಗುರದಿಂದ ಸಾಧಾರಣವಾಗಿ ಕಂಡು ಬರುತ್ತಿರುವ ಮಳೆ ಹಂತ ಹಂತವಾಗಿ ಹೆಚ್ಚಾಗುವ ಸಂಭವವಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ತುಂತುರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆತಂಕಕಾರಿ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮಿಜಿ : ಎಚ್ಚರಿಕೆ ಸೂಚನೆ
ಉತ್ತರ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯುಭಾರ ಕುಸಿತಗೊಂಡಿದೆ. ಇದರ ಪ್ರಭಾವದಿಂದ ರಾಜ್ಯದ ಅನೇಕ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಹವಾಮಾನ ಏರಿಳಿತ ಹೀಗೆ ಮುಂದುವರಿದರೆ ಆ.5ರಿಂದ ಮತ್ತೆ ಮಳೆ ಆರ್ಭಟಿಸುವ ಸಂಭವವಿದೆ.
ಸುಬ್ರಹ್ಮಣ್ಯದಲ್ಲಿ ಅತ್ಯಧಿಕ ಮಳೆ:
ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಲ್ಲಿ 7 ಸೆಂ.ಮೀ, ಶಿವಮೊಗ್ಗದ ತಾಳಗುಪ್ಪ 5 ಸೆಂ.ಮೀ, ಚಿಕ್ಕಮಗಳೂರಿನ ಶೃಂಗೇರಿ, ಶಿವಮೊಗ್ಗದ ತುಮ್ರಿ ತಲಾ 4, ಉತ್ತರ ಕನ್ನಡದ ಸಿದ್ದಾಪುರ, ಉಡುಪಿಯ ಕೊಲ್ಲೂರು, ದಕ್ಷಿಣ ಕನ್ನಡದ ಧರ್ಮಸ್ಥಳ, ಶಿವಮೊಗ್ಗದ ಆಗುಂಬೆ, ಚಿಕ್ಕಮಗಳೂರಿನ ಜಯಪುರ, ಕೊಡಗು ಜಿಲ್ಲೆಯ ಸಂತೆಹಳ್ಳಿಯಲ್ಲಿ ತಲಾ 3 ಸೆಂ.ಮೀ. ಮಳೆ ಬಿದ್ದಿದೆ. ಕಾರವಾರ ಹಾಗೂ ಕಲಬುರಗಿಯಲ್ಲಿ ತಲಾ 31.6 ಡಿಗ್ರಿ ಸೆಲ್ಸಿಯಸ್ ರಾಜ್ಯದ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.