Asianet Suvarna News Asianet Suvarna News

ರಾಷ್ಟ್ರಗೀತೆಗೆ ಅಪಮಾನ ಆರೋಪ ಆಶ್ಚರ್ಯ ತಂದಿದೆ: ಬರಗೂರು

ಕೃತಿಯ ಆಶಯ ತಿಳಿಯದೇ ಅಪಾರ್ಥ ಮಾಡಿ ವಿವಾದ ರಾಷ್ಟ್ರಗೀತೆಗೆ ಅಪಮಾನ ಸುಳ್ಳು: ಸಾಹಿತಿ ಬರಗೂರು ರಾಮಚಂದ್ರಪ್ಪ 

Accusation of Insulting the National Anthem is Surprising Says Baraguru Ramachandrappa grg
Author
First Published Aug 31, 2022, 10:29 AM IST

ಬೆಂಗಳೂರು(ಆ.31):  ನಲವತ್ತು ವರ್ಷಗಳ ನಂತರ ನನ್ನ ಕಾದಂಬರಿಯ ಪಾತ್ರವೊಂದು ಕಟ್ಟಿದ ‘ನಗರಿಗೀತೆ’ಗೆ ಈಗ ಆಕ್ಷೇಪ ಕೇಳಿಬಂದಿರುವುದು ಆಶ್ಚರ್ಯ ತಂದಿದೆ. ಇದು ತೀರಾ ಆಕಸ್ಮಿಕವೋ, ಹುನ್ನಾರವೋ ತಿಳಿಯದು. ಕೃತಿಯ ಮೂಲ ಆಶಯ ತಿಳಿಯದೆ ಅಪಾರ್ಥ ಮಾಡಿಕೊಂಡು ವಿವಾದ ಸೃಷ್ಟಿಸುವುದು ಅಪ್ರಸ್ತುತ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. 

ಮಂಗಳವಾರ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂಬ ಬಿಜೆಪಿಯ ಮುಖಂಡರೊಬ್ಬರ ಆರೋಪಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ಭರತ ನಗರಿ’ ಎಂಬ ಕಾದಂಬರಿಯನ್ನು 40 ವರ್ಷಗಳ ಹಿಂದೆ ಬರೆದಿದ್ದೆ. ಆಗ ದೇಶವನ್ನು ಕಾಂಗ್ರೆಸ್‌ ಪಕ್ಷ ಆಳುತ್ತಿತ್ತು. ಹದಗೆಟ್ಟರಾಜಕೀಯ ವ್ಯವಸ್ಥೆಯನ್ನು ವ್ಯಂಗ್ಯ ವಿಡಂಬನೆಗಳಿಂದ ಚಿತ್ರಿಸಿದ ಈ ರೂಪಕಾತ್ಮಕ ಕಾದಂಬರಿಯಲ್ಲಿ ಒಬ್ಬ ಕ್ರಾಂತಿಕಾರಿ ಯುವಕನ ಪಾತ್ರವಿದೆ. ಆತನನ್ನು ಜೈಲಿಗೆ ಹಾಕಿ ಆಳುವ ವರ್ಗವು ತಮ್ಮ ಆಡಳಿತವನ್ನು ಹೊಗಳುವ ಗೀತೆ ಹಾಡಲು ಒತ್ತಾಯಿಸಿದಾಗ ಭಾರತದ ಆಡಳಿತವನ್ನು ವಿಡಂಬಿಸಲು ‘ಜನಗಣಮನ’ದ ಲಯವನ್ನು ಬಳಸಿಕೊಳ್ಳುತ್ತಾನೆ. ಇಷ್ಟಕ್ಕೂ ಹೀಗೆ ಗೀತೆ ಹಾಡಿದ ಆ ಯುವಕ ಗುಂಡೇಟಿಗೆ ಸಾಯುತ್ತಾನೆ. ಆಡಳಿತದ ಶಿಕ್ಷೆಗೆ ಗುರಿಯಾಗುತ್ತಾನೆ ಎಂದಿದ್ದಾರೆ.

ರಾಷ್ಟ್ರಗೀತೆಗೆ ಅಪಮಾನ: ಬರಗೂರು ವಿರುದ್ಧ ಬಿಜೆಪಿ ದೂರು

ಕೃತಿಕಾರನಾದ ನಾನು ಕಾದಂಬರಿಯ ಎಲ್ಲಾ ಪಾತ್ರಗಳನ್ನೂ ಆಯಾ ಪಾತ್ರಗಳ ಗುಣಧರ್ಮ, ಸ್ವಭಾವಕ್ಕೆ ತಕ್ಕಂತೆ ಚಿತ್ರಿಸಬೇಕಾಗುತ್ತದೆ. ಆ ಪಾತ್ರಗಳ ಮಾತು ಮತ್ತು ನಡವಳಿಕೆ ಕೃತಿಕಾರರದಾಗುವುದಿಲ್ಲ. ಅದು ಆ ಪಾತ್ರದ ಅಭಿಪ್ರಾಯವೇ ಹೊರತು ನನ್ನದಲ್ಲ. ಒಟ್ಟು ಕೃತಿಯು ಹೊರಡಿಸುವ ಆಶಯ ಮಾತ್ರ ಕೃತಿಕಾರರದು. ನಾನು ಆ ಕಾಲದ ಕಾಂಗ್ರೆಸ್‌ ಆಡಳಿತ ವ್ಯವಸ್ಥೆಯನ್ನು ವಿಡಂಬನೆಗೆ ಒಡ್ಡಿ, ಒಟ್ಟು ಬದಲಾವಣೆಗೆ ಆಶಿಸಿದ್ದೇನೆ ಎಂದು ಹೇಳಿದ್ದಾರೆ.
ಜಾತಿ, ವರ್ಗ, ಭ್ರಷ್ಟತೆಗಳನ್ನು ಮೀರಿದ ಭಾರತ ನನ್ನ ಆದರ್ಶ ಎನ್ನುವುದು ಕೃತಿಯಲ್ಲಿರುವ ಆಶಯ. ಸೃಜನಶೀಲ ಕೃತಿಯ ಸ್ವರೂಪವನ್ನು ಅರ್ಥ ಮಾಡಿಕೊಳ್ಳದೆ ನಾನು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದೇನೆಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ಈ ಮೂಲಕ ನಾಡಗೀತೆಗೆ ಅವಮಾನ ಮಾಡಿದವರನ್ನು ಸಮರ್ಥಿಸಿಕೊಳ್ಳುವ ಹುನ್ನಾರ ವ್ಯಕ್ತವಾಗಿದೆ. ಇನ್ನು ಗಂಗೆಯನ್ನು ನಾನು ಅವಮಾನಿಸಿಲ್ಲ. ಗಂಗೆಯಂತಿರುವ ಸತ್ಯ, ಸಮಾನತೆಗಳನ್ನು ಕ್ಷುಲ್ಲಕ ರಾಜಕೀಯ ರಂಗವು ಅತ್ಯಾಚಾರ ಮಾಡುತ್ತಿದೆ ಎಂಬ ಅರ್ಥಕ್ಕಾಗಿ ಆ ಸಾಲುಗಳನ್ನು ಬರೆದಿದ್ದೆ ಎಂದು ಹೇಳಿದ್ದಾರೆ.

ಹಾಗೆಯೇ ಕೆಲವು ತಿಂಗಳ ಹಿಂದೆ ನನ್ನ ಸಮಗ್ರ ಸಾಹಿತ್ಯ ಸಂಪುಟಗಳು ಬಂದಿವೆ. ಅದರಲ್ಲಿ ಪರಿಷ್ಕರಣೆ ಕೂಡ ಮಾಡಿದ್ದೇನೆ. ಅದರಲ್ಲಿ ಭರತ ನಗರಿ ಕಾದಂಬರಿಯೂ ಒಂದು. ರಾಷ್ಟ್ರ ಗೀತೆಯ ಲಯದಲ್ಲಿದ್ದ ಗೀತೆಯನ್ನು ಬಿಟ್ಟಿದ್ದೇನೆ. ಅಂದರೆ ಹಿಂದಕ್ಕೆ ತೆಗೆದುಕೊಂಡು ಸಮತೆ ಮತ್ತು ಮಮತೆಯ ದೇಶ ಕಟ್ಟಬೇಕು ಎಂಬ ಗೀತೆ ಹಾಕಿದ್ದೇನೆ. ಹೀಗಿರುವಾಗ 40 ವರ್ಷಗಳ ಹಿಂದಿನ ಪಠ್ಯ ಇಟ್ಟುಕೊಂಡು ಅಪಾರ್ಥ ಮಾಡಿ ವಿವಾದ ಮಾಡುವುದೇ ಅಪ್ರಸ್ತುತ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios