Asianet Suvarna News Asianet Suvarna News

ಭೀಕರ ಮಳೆ: ಉತ್ತರಾಖಂಡದಲ್ಲಿ 96 ಕನ್ನಡಿಗರು ಅತಂತ್ರ

*  ರಸ್ತೆ ಸಂಪರ್ಕ ಕಡಿತದಿಂದ ಸಮಸ್ಯೆ
*  ನಾಲ್ವರ ಕುರಿತು ಮಾಹಿತಿ ಲಭಿಸಿಲ್ಲ: ತುಷಾರ್‌
*  ಸಿಂದಗಿಯ ಸೇನಾ ವೈದ್ಯೆ ಸುರಕ್ಷಿತ
 

96 Kannadigas Faces Problems in Uttarakhand due to Heavy Rain  grg
Author
Bengaluru, First Published Oct 21, 2021, 12:57 PM IST

ಬೆಂಗಳೂರು(ಅ.21):  ಉತ್ತರಾಖಂಡದಲ್ಲಿ(Uttarakhand) ಉಂಟಾಗಿರುವ ಭೀಕರ ಮಳೆಯಿಂದಾಗಿ(Rain) ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ 96 ಮಂದಿ ಕನ್ನಡಿಗರು(Kannadigas) ಬದರಿನಾಥದ(Badrinath) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಲುಕಿದ್ದು, 92 ಮಂದಿ ಸುರಕ್ಷಿತರಾಗಿದ್ದಾರೆ. ಉಳಿದ ನಾಲ್ಕು ಮಂದಿಯ ಸಂಪರ್ಕಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಕಂದಾಯ ಇಲಾಖೆ(Revenue Department) ಪ್ರಧಾನ ಕಾರ್ಯದರ್ಶಿ ಹಾಗೂ ನೋಡಲ್‌ ಅಧಿಕಾರಿಯಾಗಿರುವ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಕರ್ನಾಟಕದಿಂದ(Karnataka) ಪ್ರವಾಸಕ್ಕೆ(Tour) ತೆರಳಿದ್ದ ಬೆಂಗಳೂರಿನ(Bengaluru) ಆರ್‌.ಟಿ.ನಗರ, ಬಸವೇಶ್ವರನಗರ, ಯಲಹಂಕದ ನಾಲ್ಕು ಮಂದಿ ಸೇರಿ 10 ಮಂದಿ, ಅನಿತಾ ಟ್ರಾವೆಲ್ಸ್‌ ಮೂಲಕ ಪ್ರವಾಸಕ್ಕೆ ಹೋಗಿರುವ 60 ಮಂದಿ ಹಾಗೂ ಆರು ಸಿಬ್ಬಂದಿ ಸೇರಿ 66 ಮಂದಿ ಸೇರಿದಂತೆ ಈವರೆಗೆ 96 ಮಂದಿ ಕನ್ನಡಿಗರು ಉತ್ತರಾಖಂಡದಲ್ಲಿ ಸಿಲುಕಿರುವ ಮಾಹಿತಿಯಿದೆ.

ಉತ್ತರಾಖಂಡ್‌ನಲ್ಲಿ ಭೀಕರ ಮಳೆ: ಪ್ರವಾಹಕ್ಕೆ ಸಿಲುಕಿದ 500ಕ್ಕೂ ಅಧಿಕ ಪ್ರವಾಸಿಗರು!

‘ಕನ್ನಡಪ್ರಭ’ (Kananda Prabha) ಜತೆ ಮಾತನಾಡಿದ ತುಷಾರ್‌ ಗಿರಿನಾಥ್‌, ಉತ್ತರಾಖಂಡದಲ್ಲಿ 96 ಮಂದಿ ಕನ್ನಡಿಗರು ಸಿಲುಕಿರುವುದು ತಿಳಿದುಬಂದಿದೆ. ಅಷ್ಟೂ ಮಂದಿ ಪ್ರವಾಹ ಸ್ಥಿತಿ ಇಲ್ಲದಂತಹ ಬದರಿನಾಥದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಲುಕಿದ್ದಾರೆ. ಈ ಭಾಗದಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ 40 ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಅವರು ಪ್ರವಾಸದಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ. ಅವರೆಲ್ಲರೂ ಸುರಕ್ಷಿತ ಸ್ಥಳಗಳಲ್ಲಿದ್ದಾರೆ. ಪ್ರವಾಹ ಸ್ಥಿತಿ ಉಂಟಾಗಿರುವ ನೈನಿತಾಲ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ಕನ್ನಡಿಗರು ಸಿಲುಕಿರುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಸಂಪರ್ಕಕ್ಕೆ ಸಿಗದ ನಾಲ್ಕು ವ್ಯಕ್ತಿಗಳಲ್ಲಿ ಒಬ್ಬರು ಸೇನೆಯಲ್ಲಿರುವವರು(Army). ಇವರೆಲ್ಲರೂ ಬದರಿನಾಥದ ಸುತ್ತಮುತ್ತಲಿನ ಸ್ಥಗಳಲ್ಲೇ ಇದ್ದಾರೆ. ಹೀಗಾಗಿ ಅವರು ಸುರಕ್ಷಿತವಾಗಿರುವ ವಿಶ್ವಾಸವಿದ್ದು, ಸಂಪರ್ಕಕ್ಕೆ ಮಾತ್ರ ಸಿಗುತ್ತಿಲ್ಲ. ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದು, ಅವರನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಈ ಎಲ್ಲರ ಸ್ಥಿತಿ ಬಗ್ಗೆ ಆಗಿಂದಾಗ್ಗೆ ಉತ್ತರಾಖಂಡ ಸರ್ಕಾರದ(Government of Uttarakhand) ಜತೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.

ಸಿಂದಗಿಯ ಸೇನಾ ವೈದ್ಯೆ ಸುರಕ್ಷಿತ

ಉತ್ತರಾಖಂಡ ಸಮೀಪದ ಹಲದವಾಣಿ ಗ್ರಾಮದ ಬಳಿ ಭಾರೀ ಮಳೆಯಿಂದ ಭೂಕುಸಿತ(Landslide) ಉಂಟಾಗಿ ವಿಜಯಪುರ(Vijayapura) ಜಿಲ್ಲೆಯ ಸೇನಾ ವೈದ್ಯೆಯೊಬ್ಬರು(Army Doctor) ಮಾರ್ಗ ಮಧ್ಯದಲ್ಲೇ ಸಿಲುಕಿಕೊಂಡಿದ್ದು, ಸದ್ಯ ಅವರು ಸುರಕ್ಷಿತವಾಗಿದ್ದಾರೆ.

Uttarakhand Rains: ಉತ್ತರಾಖಂಡ, ಮೇಘಸ್ಫೋಟಕ್ಕೆ 42 ಜನ ಬಲಿ!

ವಿಜಯಪುರ ಜಿಲ್ಲೆಯ ಸಿಂದಗಿ(Sindagi) ಪಟ್ಟಣದ ಡಾ. ಅನಿತಾ ಶಂಕರಪ್ಪ ಪಂಪಣ್ಣವರ ಉತ್ತರಾಖಂಡದ ಹಲದವಾಣಿ ಬಳಿ ಸಿಲುಕಿಕೊಂಡಿದ್ದಾರೆ. ಅವರೀಗ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಕುಟುಂಬದವರು ಬುಧವಾರ ಮಾಹಿತಿ ನೀಡಿದ್ದಾರೆ.

ಮೂಲತಃ ಸಿಂದಗಿ ಪಟ್ಟಣದ ಶಂಕರಪ್ಪ ಪಂಪಣ್ಣನವರ ಪುತ್ರಿ ಐದು ವರ್ಷಗಳ ಹಿಂದೆ ಸೇನೆಯಲ್ಲಿ ವೈದ್ಯರಾಗಿ ಸೇವೆಗೆ ಸೇರಿದ್ದರು. ಸದ್ಯ ಉತ್ತರಾಖಂಡದ ಪಿತೋಘರ ಸೇನಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ನಾಲ್ಕು ದಿನಗಳ ಹಿಂದೆ ದೀಪಾವಳಿ ಹಬ್ಬಕ್ಕೆ ರಜೆ ಪಡೆದು ತವರೂರಿಗೆ ವಾಪಸಾಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಹಲದವಾಣಿ ಗ್ರಾಮದ ಬಳಿ ಮಳೆಯಿಂದಾಗಿ ಸಂಭವಿಸಿದ ಭಾರೀ ಭೂ ಕುಸಿತದಿಂದಾಗಿ ಸಿಕ್ಕಿಹಾಕಿಕೊಂಡಿದ್ದಾರೆ. ರಸ್ತೆಯ ಎರಡೂ ದಿಕ್ಕಿನಲ್ಲೂ ಭೂಕುಸಿತ ಸಂಭವಿಸಿದ್ದರಿಂದ ಡಾ.ಅನಿತಾ ಸೇರಿ ಕೆಲ ಕುಟುಂಬಗಳು ಸೇನಾ ವಾಹನದಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ.

ಸುರಕ್ಷಿತ: 

ನಾನು ಇಲ್ಲಿ ಸುರಕ್ಷಿತವಾಗಿದ್ದೇನೆ. ಇದೊಂದು ಸಣ್ಣ ಘಟನೆ. ರಸ್ತೆ ಮೇಲೆ ಭಾರಿ ಪ್ರಮಾಣದ ಕಲ್ಲು, ಮಣ್ಣಿನ ರಾಶಿಯೇ ಬಿದ್ದಿದೆ. ತೆರವು ಕಾರ್ಯಾಚರಣೆ ಭರದಿಂದ ನಡೆದಿದೆ. ನಮ್ಮ ರಕ್ಷಣೆಗೆ ಸೇನೆ ಇದೆ. ನಾನು ಹಾಗೂ ಇತರರು ಇಲ್ಲಿ ಸುರಕ್ಷಿತವಾಗಿದ್ದೇವೆ. ಭಯ ಪಡುವ ಅಗತ್ಯವಿಲ್ಲ ಎಂದು ಅನಿತಾ ತಮ್ಮ ಸೋದರ ಅನಿಲ್‌ ಕುಮಾರ್‌ಗೆ ಕರೆ ಮಾಡಿ ತಿಳಿಸಿದ್ದಾರೆ.
 

Follow Us:
Download App:
  • android
  • ios