ರಾಜ್ಯದಲ್ಲಿ ಒಂದೇ ದಿನ 918 ಕೇಸ್ ಮಹಾಸ್ಫೋಟ!
ನಿನ್ನೆ 918 ಕೇಸ್ ಮಹಾಸ್ಫೋಟ!| ರಾಜ್ಯದಲ್ಲಿ ಒಂದೇ ದಿನ ದಾಖಲೆಯ ಕೊರೋನಾ ಸೋಂಕು ಪ್ರಕರಣ ದೃಢ| ಹಿಂದಿನ ದಾಖಲೆಗಿಂತ ದುಪ್ಪಟ್ಟು ಪ್ರಕರಣ ಪತ್ತೆ| ಜೂ.5ಕ್ಕೆ 515 ಸೋಂಕಿತರು ಪತ್ತೆಯಾಗಿದ್ದೇ ಈವರೆಗಿನ ಗರಿಷ್ಠ| ಬೆಂಗಳೂರೊಂದರಲ್ಲೇ ದಾಖಲೆಯ 596 ಹೊಸ ಕೇಸ್| ನಿನ್ನೆ ಮತ್ತೆ 11 ಸಾವು| ಮೃತಪಟ್ಟವರ ಸಂಖ್ಯೆ 191ಕ್ಕೆ
ಬೆಂಗಳೂರು(ಜೂ.28): ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕು ರುದ್ರನರ್ತನ ತೀವ್ರವಾಗಿದ್ದು, ಇದುವರೆಗಿನ ಎಲ್ಲಾ ದಾಖಲೆಗಳು ನಾಮಾವಶೇಷವಾಗುವಂತೆ ಶನಿವಾರ ಒಂದೇ ದಿನ 916 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಬೆಂಗಳೂರಿನಲ್ಲೇ 596 ಪ್ರಕರಣಗಳಿವೆ. ಇದು ಇಡೀ ರಾಜ್ಯವನ್ನು ಮತ್ತಷ್ಟುಆತಂಕಕ್ಕೆ ದೂಡಿದೆ.
"
‘ಕೊರೋನಾ ಔಷಧ’ ಕಂಡುಹಿಡಿದ ಬಾಬಾ ರಾಮ್ದೇವ್ ಸೇರಿ ಐವರ ಮೇಲೆ ಕ್ರಿಮಿನಲ್ ಕೇಸ್!
ಜೂ.5ರಂದು 515 ಮಂದಿಗೆ ಸೋಂಕು ದೃಢಪಟ್ಟಿದ್ದು ರಾಜ್ಯದಲ್ಲಿ ಈವರೆಗಿನ ಏಕದಿನದ ದಾಖಲೆಯಾಗಿತ್ತು. ಆದರೆ, ಶನಿವಾರದ ಸಂಖ್ಯಾಸ್ಫೋಟದ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 12 ಸಾವಿರದ ಗಡಿಗೆ ಅಂದರೆ 11,923ಕ್ಕೇರಿದೆ.
ಜತೆಗೆ, ಬೆಂಗಳೂರಿನಲ್ಲಿ ಮೂವರು ಸೇರಿ 11 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ 83 ಮತ್ತು 70 ವರ್ಷದ ಇಬ್ಬರು ವೃದ್ಧರು, 74 ವರ್ಷದ ವೃದ್ಧೆ, ಬೀದರ್ನಲ್ಲಿ 65 ವರ್ಷದ ಇಬ್ಬರು ವೃದ್ಧರು, 73 ವರ್ಷದ ವೃದ್ಧೆ, ಕಲಬುರಗಿಯಲ್ಲಿ 72 ವರ್ಷದ ವೃದ್ಧ, 50 ವರ್ಷದ ಪುರುಷ, ಗದಗದಲ್ಲಿ 95 ವರ್ಷದ ವೃದ್ಧೆ, ಬಳ್ಳಾರಿಯಲ್ಲಿ 75 ವರ್ಷದ ವೃದ್ಧ, ಧಾರವಾಡದಲ್ಲಿ 73 ವರ್ಷದ ವೃದ್ಧ ಮೃತಪಟ್ಟಿದ್ದು, ಒಟ್ಟು ಮೃತ ಸೋಂಕಿತರ ಸಂಖ್ಯೆ 191ಕ್ಕೆ (ನಾಲ್ಕು ಅನ್ಯಕಾರಣ ಹೊರತುಪಡಿಸಿ) ಏರಿಕೆಯಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ 200ಗಡಿಯತ್ತ ಸಾಗಿದೆ.
ಬೆಂಗ್ಳೂರಲ್ಲಿ ಸ್ಮಶಾನಕ್ಕಾಗಿ ಹುಡುಕಾಟ!
ಶನಿವಾರದ 916 ಪ್ರಕರಣಗಳ ಪೈಕಿ ಜಿಲ್ಲಾವಾರು ಬೆಂಗಳೂರು ನಗರ ಒಂದರಲ್ಲೇ 596 ಮಂದಿಗೆ ಸೋಂಕು ದೃಢಪಡುವ ಮೂಲಕ ರಾಜಧಾನಿಯ ಒಟ್ಟು ಸೋಂಕಿತರ ಸಂಖ್ಯೆ ಎರಡೂವರೆ ಸಾವಿರ ದಾಟಿ 2,531ಕ್ಕೇರಿದೆ. ಇನ್ನು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 49, ಕಲಬುರಗಿ 33, ಬಳ್ಳಾರಿ, ಗದಗ ತಲಾ 24, ಧಾರವಾಡ 19, ಬೀದರ್ 17, ಉಡುಪಿ, ಹಾಸನ ತಲಾ 14, ಯಾದಗಿರಿ, ಶಿವಮೊಗ್ಗ, ತುಮಕೂರು, ಚಾಮರಾಜನಗರ ತಲಾ 13, ಮಂಡ್ಯ, ಮೈಸೂರಿನಲ್ಲಿ ತಲಾ 12, ಕೊಡಗು 9, ರಾಯಚೂರು, ದಾವಣಗೆರೆ ತಲಾ 6, ಬೆಂಗಳೂರು ಗ್ರಾಮಾಂತರ 5, ಉತ್ತರ ಕನ್ನಡ, ಬಾಗಲಕೋಟೆ, ಚಿಕ್ಕಮಗಳೂರು, ಚಿತ್ರದುರ್ಗದಲ್ಲಿ ತಲಾ ಇಬ್ಬರಿಗೆ, ಬೆಳಗಾವಿ, ಚಿಕ್ಕಬಳ್ಳಾಪುರ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ.