ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಅತ್ಯಂತ ಕಷ್ಟದಾಯಕ ಸ್ಥಿತಿಯಲ್ಲಿದ್ದು, ಶಾಸಕರು, ಸಚಿವರ ವೇತನ ಕಡಿತ ಮಾಡಲು ಇದೀಗ ಅನುಮೋದನೇ ನೀಡಲಾಗಿದೆ.

ವಿಧಾನಸಭೆ (ಸೆ.23): ಕೊರೋನಾ ಸಂಕಷ್ಟಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿದೂಗಿಸಬೇಕಿರುವ ಕಾರಣ ಮುಖ್ಯಮಂತ್ರಿಯಾದಿಯಾಗಿ ಸಚಿವರು, ಶಾಸಕರ ಶೇ.30ರಷ್ಟುವೇತನ ಕಡಿತ ಮಾಡುವ ಸಂಬಂಧ ಸಂಬಳಗಳು, ನಿವೃತ್ತಿ ವೇತನ, ಭತ್ಯೆ ಮತ್ತು ಇತರೆ ಕಾನೂನು ತಿದ್ದುಪಡಿ ವಿಧೇಯಕ ಸೇರಿದಂತೆ ನಾಲ್ಕು ವಿಧೇಯಕಗಳನ್ನು ಅಂಗೀಕರಿಸಲಾಗಿದ್ದು, ಎಂಟು ವಿಧೇಯಕಗಳನ್ನು ಮಂಡಿಸಲಾಯಿತು.

Add Asianetnews Kannada as a Preferred SourcegooglePreferred

ಮಂಗಳವಾರ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ವೇತನ, ನಿವೃತ್ತಿ ವೇತನ, ಭತ್ಯೆ ಮತ್ತು ಇತರೆ ಕಾನೂನು ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು.

ಕೊರೋನಾದಂತಹ ಸನ್ನಿವೇಶವನ್ನು ನಿಭಾಯಿಸಲು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು, ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಸಭಾಪತಿ, ಉಪಸಭಾಪತಿ, ವಿಧಾನಸಭೆ ಮತ್ತು ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕರು, ಶಾಸಕರ ವೇತನ ಮತ್ತು ಭತ್ಯೆಗಳನ್ನು ಕಡಿಮೆಗೊಳಿಸುವ ಮೂಲಕ ಸಂಪನ್ಮೂಲ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ. ವಿಧೇಯಕವು 2020ರ ಏ.1ರಿಂದ ಬರುವ 2021ರ ಮಾ.31ರವರೆಗೆ ಜಾರಿಯಲ್ಲಿರಲಿದೆ.

ಕೊರೋನಾ ಹೊಡೆತ, ಸಂಸದರ ವೇತನ ಕಡಿತ ಮಸೂದೆ ಮಂಡನೆ!

ಕುಷ್ಠರೋಗ ಬಾಧಿತ ವ್ಯಕ್ತಿಗಳ ಸಂಬಂಧದಲ್ಲಿನ ತಾರತಮ್ಯಕಾರಕವಾದ ಉಪಬಂಧವನ್ನು ತೆಗೆದು ಹಾಕುವ 2020ನೇ ಸಾಲಿನ ಕರ್ನಾಟಕ ಭಿಕ್ಷಾಟನೆ ನಿಷೇಧ ತಿದ್ದುಪಡಿ ವಿಧೇಯಕ, 2020ನೇ ಸಾಲಿನ ಕನ್ನಡ ವಿಶ್ವವಿದ್ಯಾಲಯ ಮತ್ತು ಇತರ ಕೆಲವು ಕಾನೂನುಗಳ (ತಿದ್ದುಪಡಿ) ವಿಧೇಯಕ ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ಸದನವು ಅಂಗೀಕರಿಸಿತು.


ಮಂಡನೆಯಾದ ವಿಧೇಯಕಗಳು:

* ಕರ್ನಾಟಕ ರಾಜ್ಯ ಕೈಗಾರಿಕೆಗಳ(ಸೌಲಭ್ಯ) (ತಿದ್ದುಪಡಿ) ವಿಧೇಯಕ

*ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ತಿದ್ದುಪಡಿ) ವಿಧೇಯಕ

* ಕರ್ನಾಟಕ ಪೌರಸಭೆಗಳ (ತಿದ್ದುಪಡಿ) ವಿಧೇಯಕ

* ಕರ್ನಾಟಕ ಸಾಂಕ್ರಾಮಿಕ ರೋಗಗಳ ವಿಧೇಯಕ

* ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇಯಕ

* ಕರ್ನಾಟಕ ಲೋಕಾಯುಕ್ತ (ಎರಡನೇ ತಿದ್ದುಪಡಿ) ವಿಧೇಯಕ

* ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೇ ತಿದ್ದುಪಡಿ) ವಿಧೇಯಕ

* ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ ವಿಧೇಯಕ