*    9153 ಮನೆ, 5 ಲಕ್ಷ ಹೆಕ್ಟೇರ್‌ ಬೆಳೆ, 1225 ಶಾಲೆ, 39 ಆಸ್ಪತ್ರೆಗಳಿಗೆ ಹಾನಿ*   ಕೂಡಲೇ ಪರಿಹಾರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ*   ರಸ್ತೆ ದುರಸ್ತಿಗೆ ತಕ್ಷಣ 500 ಕೋಟಿ ಬಿಡುಗಡೆಗೆ ಬೊಮ್ಮಾಯಿ ಸೂಚನೆ 

ಬೆಂಗಳೂರು(ನ.22): ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ(Untimely Rain) ಈವರೆಗೆ 24 ಮಂದಿ ಜೀವ ಕಳೆದುಕೊಂಡಿದ್ದಾರೆ. 9153 ಮನೆ, 5 ಲಕ್ಷ ಹೆಕ್ಟೇರ್‌ ಕೃಷಿ ಬೆಳೆ, 1,225 ಶಾಲೆ, 39 ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಹಲವು ಹಾನಿ ವರದಿಯಾಗಿದ್ದು, ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಲ್ಲದೆ, ರಸ್ತೆ ದುರಸ್ತಿಗೆ ತಕ್ಷಣ 500 ಕೋಟಿ ರು. ಬಿಡುಗಡೆಗೊಳಿಸುವಂತೆಯೂ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದಾರೆ.

ಭಾನುವಾರ ರಾತ್ರಿ ತುರ್ತು ಸಭೆ ನಡೆಸಿದ ಅವರು, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ರಾಮನಗರ, ಹಾಸನ ಜಿಲ್ಲೆಗಳಲ್ಲಿ ಹೆಚ್ಚು ಹಾನಿ ವರದಿಯಾಗಿದೆ. ಎಸ್‌ಡಿಆರ್‌ಎಫ್‌(SDRF) ನಿಧಿಯಡಿ ರಾಜ್ಯದ(Karnataka) ಎಲ್ಲ ಜಿಲ್ಲಾಧಿಕಾರಿಗಳ ಬಳಿ 689 ಕೋಟಿ ರು. ಹಣಕಾಸು ಲಭ್ಯವಿದ್ದು, ಹೆಚ್ಚುವರಿ ಹಣಕಾಸು ಅಗತ್ಯವಿದ್ದರೆ ಕೂಡಲೇ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಆದೇಶ ನೀಡಿದರು.

ರಾಜ್ಯದಲ್ಲಿ ಮಳೆ(Rain) ಸೃಷ್ಟಿಸಿದ ಅನಾಹುತದಿಂದಾಗಿ 24 ಜೀವ ಹಾನಿ ಉಂಟಾಗಿದೆ. ಒಟ್ಟು 9,153 ಮನೆ ಹಾನಿಗೊಳಗಾಗಿದ್ದು 658 ಮನೆ ಸಂಪೂರ್ಣ ನೆಲಸಮಗೊಂಡಿದೆ. ಬೆಳೆ ಹಾನಿ(Crop Loss) ಪೈಕಿ 5 ಲಕ್ಷ ಹೆಕ್ಟೇರ್‌ ಕೃಷಿ ಬಳೆ ಹಾಗೂ 30,114 ಹೆಕ್ಟೇರ್‌ ತೋಟಗಾರಿಕೆ ಬೆಳೆ(Horticulture Crop) ಹಾನಿಯಾಗಿದೆ. ಉಳಿದಂತೆ 2,203 ಕಿ.ಮೀ. ಉದ್ದದ ರಸ್ತೆಗಳು, 165 ಸೇತುವೆಗಳು, 1225 ಶಾಲೆಗಳು, 39 ಪ್ರಾಥಮಿಕ ಆರೋಗ್ಯ ಕೇಂದ್ರ, 1,674 ವಿದ್ಯುತ್‌(Electricity) ಕಂಬ, 278 ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ ಎಂದು ವಿವರಿಸಿದರು,

Uttara Kannada| ಅಕಾಲಿಕ ಮಳೆಯಿಂದ ಬೆಳೆ ನಷ್ಟ: ರೈತ ಆತ್ಮಹತ್ಯೆ

ತ್ವರಿತ ಪರಿಹಾರಕ್ಕೆ ಸೂಚನೆ:

ಕೃಷಿ ಇಲಾಖೆಯವರು ಕಂದಾಯ, ತೋಟಗಾರಿಕೆ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆಯನ್ನು(Survey) ಕೂಡಲೇ ಪ್ರಾರಂಭಿಸಿ, ತ್ವರಿತವಾಗಿ ನಷ್ಟದ ವಿವರವನ್ನು ಪರಿಹಾರ(compensation) ಆ್ಯಪ್‌ನಲ್ಲಿ ದಾಖಲಿಸಲು ಪ್ರಾರಂಭಿಸಬೇಕು. ಅವರಿಗೆ ಬೆಳೆ ನಷ್ಟ ಪರಿಹಾರ ವಿತರಣೆಯೂ ತ್ವರಿತವಾಗಿ ಆಗಬೇಕು. ಇದಕ್ಕಾಗಿ ಕೃಷಿ ಇಲಾಖೆಯ(Department of Agriculture) ಎಲ್ಲ ಸ್ತರದ ಅಧಿಕಾರಿ ಹಾಗೂ ಸಿಬ್ಬಂದಿ ಮುಂದಿನ 15-20 ದಿನಗಳ ಕಾಲ ಸಂಪೂರ್ಣವಾಗಿ ಬೆಳೆ ಸಮೀಕ್ಷೆಯ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮನೆ ಹಾನಿ ವಿವರಗಳನ್ನು ತಂತ್ರಾಂಶದಲ್ಲಿ ಛಾಯಾಚಿತ್ರಗಳೊಂದಿಗೆ ಕೂಡಲೇ ದಾಖಲಿಸಿ, ಮನೆ ಸಂಪೂರ್ಣ ಹಾನಿಯಾದವರಿಗೆ ಮೊದಲ ಕಂತಿನ ಪರಿಹಾರ ತಲಾ 1 ಲಕ್ಷ ರು. ನಂತೆ ಕೂಡಲೇ ವಿತರಿಸಲು ಕ್ರಮ ವಹಿಸಬೇಕು. ವಿಮಾ ಕಂಪೆನಿಗಳು ಸಹ ಬೆಳೆನಷ್ಟಕ್ಕೆ ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆ ದುರಸ್ತಿಗೆ 500 ಕೋಟಿ:

ನಾಲ್ಕು ಕೆರೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಕೆರೆಗಳ ದುರಸ್ತಿಯನ್ನು ಸಮರೋಪಾದಿಯಲ್ಲಿ ಮಾಡಿ, ನೀರು ವ್ಯರ್ಥವಾಗದಂತೆ ಎಚ್ಚರ ವಹಿಸಿ. ರಸ್ತೆ ಹಾನಿ ವರದಿ ಪಡೆದು, ಮಳೆ ಕಡಿಮೆಯಾದ ಕೂಡಲೇ ದುರಸ್ತಿ ನಡೆಸಬೇಕು. ಸಂಚಾರ ಸಂಪರ್ಕ ಕಡಿತಗೊಂಡ ಸ್ಥಳಗಳನ್ನು ಆದ್ಯತೆ ಮೇರೆಗೆ ಸರಿಪಡಿಸುವಂತೆ ಸೂಚಿಸಿದರು ರಸ್ತೆಗಳ ದುರಸ್ತಿಗಾಗಿ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳಿಗೆ 500 ಕೋಟಿ ರು.ಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಆದೇಶಿಸಿದರು.

ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ 3.43 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, 1.5 ಲಕ್ಷ ರೈತರಿಗೆ 130 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಉಳಿದ 79 ಸಾವಿರ ರೈತರಿಗೆ ನೀಡಬೇಕಿರುವ 52 ಕೋಟಿ ರು.ಗಳನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಸೂಚಿಸಿದರು.

Karnataka Rain: ಬೊಮ್ಮಾಯಿಯವರೇ ನಿಮ್ಮ ಹನಿಮೂನ್ ಕಾಲ ಮುಗಿದಿದೆ, ಇನ್ನಾದ್ರೂ ಜನರ ಕಷ್ಟ ಕೇಳ್ರಿ'

ಬಿಬಿಎಂಪಿ ಪ್ರತಿ ವಲಯಕ್ಕೆ 25 ಲಕ್ಷ:

ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಮಳೆಹಾನಿ ಪರಿಹಾರ ಕಾರ್ಯಕ್ಕೆ ಪ್ರತಿ ವಲಯಕ್ಕೆ 25 ಲಕ್ಷ ರು. ಬಿಡುಗಡೆ ಮಾಡಬೇಕು. ಮಳೆ ಹಾನಿ ಕುರಿತು ವಾರ್ಡ್‌ ವಾರು ವರದಿ ಸಲ್ಲಿಸಬೇಕು. ರಸ್ತೆ ಗುಂಡಿ ಮುಚ್ಚಲು ವಸ್ತುಸ್ಥಿತಿ ಆಧಾರಿತ ವರದಿಯನ್ನು ಕೂಡಲೇ ಸಲ್ಲಿಸಿ, ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ಮಾರಣಾಂತಿಕ ರಸ್ತೆ ಗುಂಡಿಗಳ ಬಳಿ ಬ್ಯಾರಿಕೇಡ್‌ ಹಾಗೂ ಲೈಟಿಂಗ್‌ ವ್ಯವಸ್ಥೆ ಮಾಡಬೇಕು. ಕೂಡಲೇ ದುರಸ್ತಿಗೆ ಕ್ರಮ ವಹಿಸಲು ಸೂಚಿಸಲಾಯಿತು ಎಂದು ಬೊಮ್ಮಾಯಿ ನಿರ್ದೇಶಿಸಿದರು.

ಸಭೆಯಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌, ಸಚಿವರಾದ ಗೋವಿಂದ ಎಂ. ಕಾರಜೋಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

ಅಗತ್ಯವಿದ್ದರೆ ಮಾತ್ರ ಬಳಸಲು (ರಿಪೀಟ್‌)

ಹಾನಿ ವಿವರ
ಜೀವ ಹಾನಿ- 24
ಮನೆ ಹಾನಿ - 9,153 (ಸಂಪೂರ್ಣ 658, ಭಾಗಶಃ 8,495)
ಜಾನುವಾರು ಸಾವು- 191
ಕೃಷಿ ಬೆಳೆ- 5 ಲಕ್ಷ ಹೆಕ್ಟೇರ್‌
ತೋಟಗಾರಿಕೆ- 30114 ಹೆಕ್ಟೇರ್‌
ರಸ್ತೆ ಹಾನಿ- 2203 ಕಿ.ಮೀ.
ಸೇತುವೆಗಳು- 165
ಶಾಲೆಗಳು -1225
ಪ್ರಾಥಮಿಕ ಆರೋಗ್ಯ ಕೇಂದ್ರ - 39
ವಿದ್ಯುತ್‌ ಕಂಬ- 1674
ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ - 278