ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೂ ಮಹಾಮಾರಿ ಕೊರೋನಾ ಸೋಂಕು| ಪರಪ್ಪನ ಜೈಲಿನಲ್ಲಿ 22 ಕೈದಿಗಳಿಗೆ ಕೊರೋನಾ

ಬೆಂಗಳೂರು(ಜು.02): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೂ ಮಹಾಮಾರಿ ಕೊರೋನಾ ಸೋಂಕು ವ್ಯಾಪಿಸಿದ್ದು, ಇದೇ ಮೊದಲ ಬಾರಿಗೆ 22 ವಿಚಾರಣಾಧೀನ ಕೈದಿಗಳಲ್ಲಿ ಬುಧವಾರ ಸೋಂಕು ಕಾಣಿಸಿಕೊಂಡಿದೆ. ಇತ್ತೀಚೆಗೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು ನಗರ ಹಾಗೂ ನೆರೆಹೊರೆ ಜಿಲ್ಲೆಗಳಲ್ಲಿ ಬಂಧಿತರಾಗಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿಗಳು ಸೋಂಕಿತರಾಗಿದ್ದಾರೆ. ಆದರೆ ಸೋಂಕಿನ ಮೂಲ ಪತ್ತೆಯಾಗಿಲ್ಲ. ಹಾಗೆ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಸಹ ಪರೀಕ್ಷೆಯಲ್ಲಿ ಕಂಡು ಬಾರದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಆಗಸ್ಟ್‌ನಲ್ಲಿ ಕೊರೋನಾ ತಾರಕಕ್ಕೆ: ಬೆಂಗಳೂರಿನಲ್ಲಿ 40000 ಕೇಸ್‌!'

ಸೋಂಕು ಧೃಡಪಟ್ಟಹಿನ್ನೆಲೆಯಲ್ಲಿ ನಿಗದಿತ ಕೋವಿಡ್‌ ಆಸ್ಪತ್ರೆಗೆ ವಿಚಾರಣಾಧೀನ ಕೈದಿಗಳನ್ನು ಕಾರಾಗೃಹದ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಎರಡು ತಿಂಗಳ ಅವಧಿಯಲ್ಲಿ ಹೊಸದಾಗಿ ಜೈಲು ಸೇರಿದ ಆರೋಪಿಗಳಿಗೆ ಕ್ವಾರಂಟೈನ್‌ಗೊಳಪಡಿಸಲಾಗಿದ್ದು, ಅವರ ವೈದ್ಯಕೀಯ ವರದಿ ನಿರೀಕ್ಷಿಸಲಾಗಿದೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಮಾತನಾಡಿದ ರಾಜ್ಯ ಬಂಧೀಖಾನೆ ಇಲಾಖೆಯ ಡಿಜಿಪಿ ಅಲೋಕ್‌ ಮೋಹನ್‌, ಕಾರಾಗೃಹಗಳಲ್ಲಿ ಸೋಂಕು ಹರಡುವಿಕೆ ತಡೆಗೆ ಮುನ್ನಚ್ಚರಿಕೆ ವಹಿಸಲಾಗಿದೆ. ಜೈಲಿಗೆ ಹೊಸದಾಗಿ ಬರುವ ವಿಚಾರಣಾಧೀನ ಕೈದಿಗಳನ್ನು ಪ್ರತ್ಯೇಕವಾಗಿ ಬಂಧನದಲ್ಲಿಡಲಾಗುತ್ತದೆ. ಬಂದ ದಿನ, ಆನಂತರ 12 ದಿನ ಹಾಗೂ 22 ದಿನ ಹೀಗೆ ಮೂರು ಹಂತದಲ್ಲಿ ಹೊಸಬರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ. ಅಂತೆಯೇ ಎರಡನೇ ಹಂತದ ತಪಾಸಣೆಗೊಳಗಾಗಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ 22 ಮಂದಿಗೆ ಸೋಂಕು ಪತ್ತೆಯಾಗಿದೆ. ಇದೇ ಮೊದಲ ಬಾರಿಗೆ ಕಾರಾಗೃಹದಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಡಿಜಿಪಿ ವಿವರಿಸಿದರು.

7ರಿಂದ ಸರ್ಕಾರದಿಂದಲೇ ಲಾಕ್‌ಡೌನ್? ಸ್ವಯಂ ಲಾಕ್‌ಡೌನ್‌ ನಿರ್ಧಾರಕ್ಕೆ ತಿಲಾಂಜಲಿ!

ಕಾರಾಗೃಹಗಳನ್ನು ಸ್ಯಾನಿಟೈಸ್‌ ಮಾಡಿಸಲಾಗಿದೆ. ಹೊಸಬರನ್ನು ಮೂರು ಹಂತದ ತಪಾಸಣೆ ನಡೆಸಿದ ಬಳಿಕವೇ ಪ್ರತ್ಯೇಕ ವಾಸದಿಂದ ಬೇರೆ ಬ್ಯಾರಕ್‌ಗಳಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಹೇಳಿದರು.