ಹೊಸದಾಗಿ ಪರೀಕ್ಷೆ ನಡೆಸಿರುವ 181 ಮಾದರಿಗಳಲ್ಲಿ ಬರೋಬ್ಬರಿ 175 ಮಂದಿಗೆ (ಶೇ.96.6) ಜೆಎನ್‌1 ಉಪತಳಿಯ ವೈರಾಣು ಸೋಂಕು ದೃಢಪಟ್ಟಿದೆ. ತನ್ಮೂಲಕ ಈವರೆಗೆ 374 ಮಂದಿಗೆ ಜೆಎನ್‌.1 ದೃಢಪಟ್ಟಂತಾಗಿದೆ.

ಬೆಂಗಳೂರು(ಜ.13): ರಾಜ್ಯದಲ್ಲಿ ಕೊರೋನಾ ಜಿನೋಮಿಕ್‌ ಸೀಕ್ವೆನ್ಸ್‌ನ ಮೂರನೇ ಹಂತದ ವರದಿ ಬಂದಿದ್ದು, ಹೊಸದಾಗಿ ಪರೀಕ್ಷೆ ನಡೆಸಿರುವ 181 ಮಾದರಿಗಳಲ್ಲಿ ಬರೋಬ್ಬರಿ 175 ಮಂದಿಗೆ (ಶೇ.96.6) ಜೆಎನ್‌1 ಉಪತಳಿಯ ವೈರಾಣು ಸೋಂಕು ದೃಢಪಟ್ಟಿದೆ. ತನ್ಮೂಲಕ ಈವರೆಗೆ 374 ಮಂದಿಗೆ ಜೆಎನ್‌.1 ದೃಢಪಟ್ಟಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡನೇ ಹಂತದ ಜಿನೋಮಿಕ್‌ ಸೀಕ್ವೆನ್ಸ್‌ (ವಂಶವಾಹಿ ಸಂರಚನೆ ವಿಶ್ಲೇಷಣೆ) ವರದಿ ವೇಳೆಗೆ 262 ಮಾದರಿಗಳ ಪರೀಕ್ಷೆಯಲ್ಲಿ 199 ಜೆಎನ್‌.1 (ಶೇ.76) ಉಪತಳಿಯ ಸೋಂಕು ಎಂದು ಸಾಬೀತಾಗಿತ್ತು. ಇದೀಗ ಶುಕ್ರವಾರ ಹೆಚ್ಚುವರಿ 181 ಮಾದರಿಗಳ ವರದಿ ಬಂದಿದ್ದು, ಬರೋಬ್ಬರಿ 175 ಮಂದಿಗೆ (ಶೇ.96.6) ಜೆಎನ್‌.1 ಸಾಬೀತಾಗಿದೆ.

ಸಸ್ಯಾಹಾರಿಗಳಿಗೆ ಕೋವಿಡ್‌ ಬರುವ ಸಾಧ್ಯತೆ ಶೇ.39ರಷ್ಟು ಕಡಿಮೆ; ಹೊಸ ಅಧ್ಯಯನ

ತನ್ಮೂಲಕ ಈವರೆಗೆ 443 ಮಾದರಿಗಳ ಫಲಿತಾಂಶ ಬಂದಂತಾಗಿದ್ದು, ಈ ಪೈಕಿ 374 (ಶೇ.84) ಜೆಎನ್‌.1 ಮಾದರಿಯದ್ದು ಎಂದು ಸಾಬೀತಾಗಿದೆ. ಉಳಿದಂತೆ ಎಕ್ಸ್‌ಬಿಬಿ 30 (ಶೇ.7) ಹಾಗೂ ಇತರೆ 39 (ಶೇ.9) ಸೋಂಕು ಪತ್ತೆಯಾಗಿದೆ.

ಶುಕ್ರವಾರ 163 ಮಂದಿಗೆ ಸೋಂಕು:

ಇನ್ನು ಶುಕ್ರವಾರ ರಾಜ್ಯದಲ್ಲಿ 163 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಶುಕ್ರವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ 6,396 ಮಂದಿಗೆ ಪರೀಕ್ಷೆ ನಡೆಸಿದ್ದು ಶೇ.2.45 ಪಾಸಿಟಿವಿಟಿ ದರದಂತೆ 163 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಮೂಲಕ ಸಕ್ರಿಯ ಸೋಂಕು 814ಕ್ಕೆ ಇಳಿಕೆಯಾಗಿದ್ದು, ಇದರಲ್ಲಿ 60 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 14 ಹಾಗೂ ನಾಲ್ಕು ಮಂದಿ ವೆಂಟಿಲೇರ್‌ನಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಬೆಂಗಳೂರು ನಗರ 50, ಮೈಸೂರು 27, ಹಾಸನ 10, ಬೆಂಗಳೂರು ಗ್ರಾಮಾಂತರ 8, ದಕ್ಷಿಣ ಕನ್ನಡ 7, ಧಾರವಾಡ 6, ಬಳ್ಳಾರಿ, ಚಿತ್ರದುರ್ಗ ತಲಾ 5 ಸೇರಿ 163 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.