ಶಾಲೆ ಆರಂಭವಾದ ಮೇಲೆ 161 ಶಿಕ್ಷಕರಿಗೆ ಕೊರೋನಾ
161 ಶಾಲಾ ಶಿಕ್ಷಕರು ಹಾಗೂ 5 ಸಿಬ್ಬಂದಿಗೆ ಕೊರೋನಾ ಸೋಂಕು ದೃಢ | ಪಿಯು ಶಿಕ್ಷಕರ ಸೋಂಕಿನ ಮಾಹಿತಿ ಇನ್ನೂ ಇಲ್ಲ
ಬೆಂಗಳೂರು(ಜ.08): ರಾಜ್ಯದಲ್ಲಿ ಶಾಲೆ, ಪಿಯು ಕಾಲೇಜುಗಳು ಆರಂಭಗೊಂಡ ನಂತರ ಒಟ್ಟು 161 ಶಾಲಾ ಶಿಕ್ಷಕರು ಹಾಗೂ 5 ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಆದರೆ, ಎಷ್ಟುಮಂದಿ ಪಿಯು ಉಪನ್ಯಾಸಕರಿಗೆ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಇನ್ನಷ್ಟೇ ಬರಬೇಕಿದೆ.
ರಾಜ್ಯದಲ್ಲಿ ಜ.1ರಿಂದ ಶಾಲಾ ಕಾಲೇಜು ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ತರಬೇಕೆಂದು ಸೂಚಿಸಲಾಗಿತ್ತು. ಅದರಂತೆ ಬಹುತೇಕ ಎಲ್ಲ ಶಾಲೆಗಳ ಶಿಕ್ಷಕರೂ ಆರ್ಟಿಟಿಪಿಆರ್ ಪರೀಕ್ಷೆಗೆ ಒಳಪಟ್ಟಿದ್ದರು. ಅವರಲ್ಲಿ ಒಟ್ಟು 161 ಶಿಕ್ಷಕರು ಹಾಗೂ ಐವರು ಸಿಬ್ಬಂದಿ ಸೇರಿ ಒಟ್ಟು 166 ಜನರಿಗೆ ಇದುವರೆಗೆ ಸೋಂಕು ದೃಢಪಟ್ಟಿದೆ.
ಚಾಮರಾಜನಗರದಲ್ಲಿ ಟಿಟಿ ಪಲ್ಟಿ: ಮೂವರು ಸಾವು, 14 ಮಂದಿಗೆ ಗಾಯ
ಸೋಂಕು ದೃಢಪಟ್ಟಯಾವುದೇ ಶಿಕ್ಷಕರು ಶಾಲೆಗಳಿಗೆ ಹೋಗಿಲ್ಲ. ಕೆಲವರು ಗೃಹ ಕ್ವಾರಂಟೈನ್ನಲ್ಲಿದ್ದರೆ, ಆರೋಗ್ಯ ಸಮಸ್ಯೆ ಇರುವ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದ ಬಳಿಕ ಅವರು ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಇಲಾಖಾ ಅಧಿಕಾರಿಗಳು ಹೇಳಿದ್ದಾರೆ.
ಈ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು 19 ಶಿಕ್ಷಕರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 18 ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ಉಳಿದ ಜಿಲ್ಲೆಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 13, ಗದಗ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಲಾ 11, ಚಾಮರಾಜನಗರದಲ್ಲಿ 10, ಬೆಂಗಳೂರು ನಗರ ಜಿಲ್ಲೆಯಲ್ಲಿ 8, ಚಿತ್ರದುರ್ಗ, ಹಾವೇರಿ ತಲಾ 9, ಕಲಬುರಗಿ 8, ಮಂಡ್ಯ 7, ದಕ್ಷಿಣ ಕನ್ನಡ 4, ದಾವಣಗೆರೆ, ಉಡುಪಿ ತಲಾ 3, ಬೆಂಗಳೂರು ಗ್ರಾಮಾಂತರ, ಯಾದಗಿರಿ ತಲಾ ಇಬ್ಬರು ಹಾಗೂ ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬ ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ, ಚಿಕ್ಕಮಗಳೂರಿನ ಇಬ್ಬರು, ಉತ್ತರ ಕನ್ನಡ, ಉಡುಪಿ, ಚಾಮರಾಜನಗರದ ತಲಾ ಒಬ್ಬರು ಶಾಲಾ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ ಎಂದು ಇಲಾಖೆ ತಿಳಿಸಿದೆ.
761 ಹೊಸ ಕೇಸ್, 812 ಗುಣಮುಖ, 7 ಸಾವು
ರಾಜ್ಯದಲ್ಲಿ ಗುರುವಾರ 761 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. 812 ಮಂದಿ ಗುಣಮುಖರಾಗಿದ್ದಾರೆ. ಏಳು ಮಂದಿ ಮೃತರಾಗಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 9,119 ಸಕ್ರಿಯ ಕೊರೋನಾ ಪ್ರಕರಣಗಳಿದ್ದು, ಈ ಪೈಕಿ 205 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 1.29 ಲಕ್ಷ ಕೊರೋನಾ ಪರೀಕ್ಷೆಗಳು ನಡೆದಿದೆ. ಒಟ್ಟು ಕೊರೋನಾ ಪೀಡಿತರ ಸಂಖ್ಯೆ 9.24 ಲಕ್ಷಕ್ಕೆ ಏರಿದ್ದು, ಇವರಲ್ಲಿ 9.03 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದಾ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ 12,131ಕ್ಕೆ ತಲುಪಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಐದು ಮಂದಿ, ಕೋಲಾರ ಮತ್ತು ತುಮಕೂರಿನಲ್ಲಿ ತಲಾ ಒಬ್ಬರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬಾಗಲಕೋಟೆ ಮತ್ತು ಗದಗದಲ್ಲಿ ಹೊಸ ಸೋಂಕಿತರು ಪತ್ತೆಯಾಗಿಲ್ಲ.
ಬೆಂಗಳೂರು ನಗರ ಜಿಲ್ಲೆಯಲ್ಲಿ 399, ಬಳ್ಳಾರಿ 19, ಬೆಳಗಾವಿ 16, ಬೆಂಗಳೂರು ಗ್ರಾಮಾಂತರ 13, ಬೀದರ್ 6, ಚಾಮರಾಜನಗರ 5, ಚಿಕ್ಕಬಳ್ಳಾಪುರ 20, ಚಿಕ್ಕಮಗಳೂರು 5, ಚಿತ್ರದುರ್ಗ 4, ದಕ್ಷಿಣ ಕನ್ನಡ 37, ದಾವಣಗೆರೆ 13, ಧಾರವಾಡ 16, ಹಾಸನ 25, ಹಾವೇರಿ 3, ಕಲಬುರಗಿ 17, ಕೊಡಗು 8, ಕೋಲಾರ 16, ಕೊಪ್ಪಳ 2, ಮಂಡ್ಯ 7, ಮೈಸೂರು 45, ರಾಯಚೂರು ರಾಮನಗರ ಮತ್ತು ಯಾದಗಿರಿ ತಲಾ 2, ಶಿವಮೊಗ್ಗ 23, ತುಮಕೂರು 25, ಉಡುಪಿ 4, ಉತ್ತರ ಕನ್ನಡ 12 ಮತ್ತು ವಿಜಯಪುರ ಜಿಲ್ಲೆಯಲ್ಲಿ ಹದಿನೈದು ಮಂದಿಯಲ್ಲಿ ಸೋಂಕು ಧೃಢ ಪಟ್ಟಿದೆ.