ಕರ್ನಾಟಕದಲ್ಲಿ ಕೊರೋನಾ ರಣಕೇಕೆ: 600ರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ರೂ ಕೊರೋನಾ ವೈರಸ್ ಅಟ್ಟಹಾಸ ಮಾತ್ರ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 600 ಗಡಿ ದಾಟಿದೆ.
ಬೆಂಗಳೂರು, (ಮೇ.2): ರಾಜ್ಯದಲ್ಲಿ ನಿನ್ನೆ (ಶುಕ್ರವಾರ) ಸಂಜೆಯಿಂದ ಕೊರೋನಾ ಸೋಂಕಿನಿಂದ ಒಟ್ಟು ಮೂವರು ಸಾವು ಹಾಗೂ ಒಟ್ಟು 12 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ.
ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 601ಕ್ಕೇರಿದೆ ಹಾಗೂ ಮೃತರ ಸಂಖ್ಯೆ 25ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ನಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರದಿಂದ ಹೊಸ ಗೈಡ್ಲೈನ್ಸ್ ರಿಲೀಸ್: ಯಾವ ಝೋನ್ನಲ್ಲಿ ಏನಿರುತ್ತೆ? ಏನಿರಲ್ಲ?
ಇಂದು (ಶನಿವಾರ) ಸಂಜೆ ಬಿಡುಗಡೆಗೊಳಿಸಿರುವ ಆರೋಗ್ಯ ಬುಲೆಟ್ನಲ್ಲಿ ಶುಕ್ರವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆಯೊಳಗೆ ಮೂರು ಸಾವು, ಹೊಸ 12 ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಿದೆ.
ದಾವಣಗೆರೆಯ 69 ವರ್ಷದ ವ್ಯಕ್ತಿ, ಬೀದರ್ ಜಿಲ್ಲೆಯ 82 ವರ್ಷದ ವೃದ್ಧ ಹಾಗೂ ಬೆಂಗಳೂರಿನ 63 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಜೊತೆಗೆ, ಬೆಂಗಳೂರು ನಗರದಲ್ಲಿ 4, ತುಮಕೂರಿನಲ್ಲಿ 2, ವಿಜಯಪುರದಲ್ಲಿ 2, ಬೀದರ್, ಚಿಕ್ಕಬಳ್ಳಾಪುರ, ಬೆಳಗಾವಿ, ಬಾಗಲಕೋಟೆಯಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.
ಒಟ್ಟಾರೆ ಇದುವರೆಗೆ ರಾಜ್ಯದಲ್ಲಿ ಪಾಸಿಟಿವ್ ಬಂದ 601 ಪ್ರಕರಣಗಳಲ್ಲಿ 271 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 25 ಮಂದಿ ಮೃತಪಟ್ಟಿದ್ದಾರೆ.