ಇನ್ನೊಂದು ವಸತಿ ಶಾಲೆಯ ವಿದ್ಯಾರ್ಥಿನಿಗೆ ಮಗು ಜನನ: ಪ್ರಾಂಶುಪಾಲ, ವಾರ್ಡನ್ ಅಮಾನತು!
ಕಲಬುರಗಿ ಜಿಲ್ಲೆ ಅಫಜಲ್ಪುರ ತಾಲೂಕಿನ ಅರ್ಜುಣಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
![10th class student gave birth to a boy baby in kalaburagi gvd 10th class student gave birth to a boy baby in kalaburagi gvd](https://static-ai.asianetnews.com/images/01h59jnbf15zaz7k9dtg0pz3ph/new-project--28-_363x203xt.jpg)
ಚವಡಾಪುರ (ಜ.19): ಕಲಬುರಗಿ ಜಿಲ್ಲೆ ಅಫಜಲ್ಪುರ ತಾಲೂಕಿನ ಅರ್ಜುಣಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ (ಜ.11ರಂದು) ಚಿಕ್ಕಬಳ್ಳಾಪುರದ ಮಧುಗಿರಿಯ ಸರ್ಕಾರಿ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿತ್ತು.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ವಸತಿ ಶಾಲೆಯ ಪ್ರಾಚಾರ್ಯ ಹಾಗೂ ವಾರ್ಡನ್ರನ್ನು ಅಮಾನತುಗೊಳಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ನವೀನಕುಮಾರ ರಾಜು ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿ ಮಗುವಿಗೆ ಜನ್ಮ ನೀಡುವ ತನಕ ಯಾಕೆ ಯಾರೂ ಗಮನಿಸಿಲ್ಲ? ಇದು ಪ್ರಾಚಾರ್ಯರು ಹಾಗೂ ವಾರ್ಡನ್ ನಿರ್ಲಕ್ಷ್ಯ.
ಹೀಗಾಗಿ, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತುಗೊಳಿಸಲಾಗಿದೆ. ಅಮಾನತು ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಈ ಮಧ್ಯೆ, ಪ್ರಾಚಾರ್ಯರ ಅಮಾನತು ಆದೇಶ ಖಂಡಿಸಿ ವಿದ್ಯಾರ್ಥಿಗಳು ಶುಕ್ರವಾರ ವಸತಿ ಶಾಲೆಯ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ತಹಸೀಲ್ದಾರ್ ಸಂಜೀವಕುಮಾರ ದಾಸರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ನಾಯಕ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಪ್ರಾಚಾರ್ಯರು ಮತ್ತು ವಾರ್ಡನ್ ಒಳ್ಳೆಯವರು. ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ಅಮಾನತು ಆದೇಶ ರದ್ದುಪಡಿಸಬೇಕು. ಅವರು ಬರುವ ತನಕ ನಾವು ಪರೀಕ್ಷೆ ಬರೆಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ, ತಹಶೀಲ್ದಾರ್ ಅವರ ಮನವೊಲಿಕೆ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.
ಕೆಲ ಸ್ವಾಮೀಜಿಗಳಿಂದ ರಾಜಕೀಯಕ್ಕಾಗಿ ಶ್ರೀ ರಾಮಮಂದಿರ ಬಗ್ಗೆ ಅಪಸ್ವರ: ಸಂಸದ ಪ್ರತಾಪ್ ಸಿಂಹ
ನಡೆದಿದ್ದು ಏನು?
- ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10ನೇ ಕ್ಲಾಸ್ ವಿದ್ಯಾರ್ಥಿನಿಗೆ ಇತ್ತೀಚೆಗೆ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ
- ವಿದ್ಯಾರ್ಥಿ ನಿಲಯದಲ್ಲಿನ ನಿರ್ಲಕ್ಷ್ಯದಿಂದ ಬಾಲಕಿ ಗರ್ಭಿಣಿಯಾಗಿದ್ದಾಳೆಂದು ಆರೋಪ
- ಬಾಲಕಿ ಗರ್ಭಿಣಿಯಾಗಿ, ಹೆರಿಗೆಯಾಗುವವರೆಗೂ ಏಕೆ ತಿಳಿಯಲಿಲ್ಲ ಎಂಬುದು ನಿಗೂಢ
- ಪ್ರಾಂಶುಪಾಲ, ವಾರ್ಡನ್ ವಿರುದ್ಧದ ಕ್ರಮಕ್ಕೆ ಇತರ ವಿದ್ಯಾರ್ಥಿಗಳಿಂದ ಪ್ರತಿಭಟನೆ
- ಇತ್ತೀಚೆಗೆ ಇನ್ನೊಂದು ಪ್ರಕರಣದಲ್ಲಿ ಚಿಕ್ಕಬಳ್ಳಾಪುರದಲ್ಲಿ ಮಗುವಿಗೆ ಜನ್ಮ ನೀಡಿದ್ದ ವಸತಿ ಶಾಲೆಯ 9ನೇ ಕ್ಲಾಸ್ ವಿದ್ಯಾರ್ಥಿನಿ